ಕೋಲ್ಕತ್ತಾ: ತರಕಾರಿ ಮಳಿಗೆಗೆ ನುಗ್ಗಿದ ಕಳ್ಳರು ಹಣ ಬಿಟ್ಟು ಈರುಳ್ಳಿಯನ್ನು ಕದ್ದೊಯ್ದಿರುವ ಅಚ್ಚರಿಯ ಘಟನೆ ಕೋಲ್ಕತ್ತಾ ರಾಜ್ಯದ ಮಿಡ್ನಾಪುರ ಜಿಲ್ಲೆಯ ಸುತಹತ ಎಂಬ ನಗರದಲ್ಲಿ ನಡೆದಿದೆ.
ಪೂರ್ವ ಮಿಡ್ನಾಪುರದಲ್ಲಿದ್ದ ತರಕಾರಿ ವ್ಯಾಪಾರಿ ಅಕ್ಷಯ್ ದಾಸ್ ಅವರ ಮಳಿಗೆಯಲ್ಲಿ ಕಳ್ಳತನ ನಡೆದಿದೆ. ಸೋಮವಾರ ರಾತ್ರಿ ಮಳಿಗೆಗೆ ನುಗ್ಗಿರುವ ಕಳ್ಳರು ಗಲ್ಲಾ ಪೆಟ್ಟಿಯಲ್ಲಿನ ಒಂದು ರೂಪಾಯಿಯನ್ನೂ ಮುಟ್ಟಿಲ್ಲ. ಬದಲಾಗಿ ಮಳಿಗೆಯಲ್ಲಿದ್ದ ಈರುಳ್ಳಿಯನ್ನು ಹೊತ್ತೊಯ್ದಿದ್ದಾರೆ. ಇದನ್ನೂ ಓದಿ:ಜಮೀನಿನಲ್ಲಿ ಬೆಳೆದಿದ್ದ ಸುಮಾರು 40 ಮೂಟೆಯಷ್ಟು ಈರುಳ್ಳಿ ರಾತ್ರೋರಾತ್ರಿ ಕಳ್ಳತನ
ಈ ಬಗ್ಗೆ ಅಚ್ಚರಿಯಿಂದ ಪ್ರತಿಕ್ರಿಯಿಸಿದ ಮಾಲೀಕ, ಮಂಗಳವಾರ ಮಳೆಗೆಗೆ ಬಂದು ನೋಡಿದಾಗ ಶಾಕ್ ಆಯ್ತು. ತಕ್ಷಣ ಗಲ್ಲಾ ಪೆಟ್ಟಿಗೆ ತೆರೆದು ನೋಡಿದರೆ ಅದರಲ್ಲಿದ್ದ ಹಣವೆಲ್ಲಾ ಹಾಗೆಯೇ ಇದೆ. ಆದರೆ ಮಳಿಗೆಯಲ್ಲಿ ಜೋಡಿಸಿಟ್ಟಿದ್ದ ಈರುಳ್ಳಿ ನಾಪತ್ತೆಯಾಗಿತ್ತು. ಅದರ ಜೊತೆಗೆ ಶುಂಠಿ, ಬೆಳ್ಳುಳ್ಳಿ ಕೂಡ ಕಳ್ಳತನವಾಗಿತ್ತು. ಸುಮಾರು 50 ಸಾವಿರ ರೂ. ಮೌಲ್ಯದ ಈರುಳ್ಳಿ ಜೊತೆಗೆ ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಆದರೆ ಒಂದು ನಯಾಪೈಸೆ ಹಣವನ್ನು ಕಂಡೊಯ್ದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗ್ರಾಹಕರ ಕಣ್ಣಲ್ಲಿ ಕಣ್ಣೀರು ತಂದ ಈರುಳ್ಳಿ ಬೆಲೆ
ಪಶ್ಚಿಮ ಬಂಗಾಳದಲ್ಲಿ ಕೆ.ಜಿ ಈರುಳ್ಳಿ ಬೆಲೆ 100 ರೂಪಾಯಿ ಗಡಿದಾಟಿದೆ. ಹೀಗಾಗಿ ಬೆಲೆ ಇನ್ನೂ ಹೆಚ್ಚಾಗಬಹುದು, ಅದರಿಂದ ಹೆಚ್ಚು ಹಣ ಪಡೆಯಬಹುದು ಎಂದುಖದೀಮರು ಈರುಳ್ಳಿ ಕಳ್ಳತನ ಮಾಡಿದ್ದಾರೆ.
ಇತ್ತ ಕರ್ನಾಟಕದಲ್ಲೂ ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ ಗ್ರಾಮದಲ್ಲಿ ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿಯನ್ನೇ ರಾತ್ರೋರಾತ್ರಿ ಕಳ್ಳರು ಕಿತ್ತು ಕದ್ದೊಯ್ದಿದ್ದಾರೆ.
ರೈತ ಗುರುಬಸಯ್ಯ ಪ್ರಭುಸ್ವಾಮಿ ಮಠ ಎಂಬವರು ತಮ್ಮ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದರು. ಸುಮಾರು 34 ರಿಂದ 40 ಮೂಟೆಯಷ್ಟು ಈರುಳ್ಳಿ ಬೆಳೆಯನ್ನು ಕಳ್ಳತನ ಮಾಡಿದ್ದಾರೆ. ಗುರುಬಸಯ್ಯ ಅವರು 1.5 ಎಕರೆ ನಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದರು. ಇನ್ನು ಎರಡು ದಿನದಲ್ಲಿ ಫಸಲು ಕಟಾವು ಮಾಡಬೇಕು ಎಂದು ರೈತ ಎಂದುಕೊಂಡಿದ್ದರು. ಆದರೆ ಫಸಲು ಕೈಗೆ ಬರುವ ಮುನ್ನವೇ ಕಳ್ಳರು ತಮ್ಮ ಕೈಚಳಕವನ್ನು ತೋರಿದ್ದಾರೆ. ಈರುಳ್ಳಿ ಜೊತೆ ಸುಮಾರು 25 ಕೆಜಿಯಷ್ಟು ಮೆಣಸಿನಕಾಯಿ ಸಹ ಕಳ್ಳತನವಾಗಿದೆ.
ಈರುಳ್ಳಿ ಬೆಲೆ ಏರಿಕೆಯಾಗಿ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಈರುಳ್ಳಿ ಕೈಗೆ ಸಿಗದ ನಕ್ಷತ್ರವಾಗಿದೆ. ಬೆಂಗಳೂರಿನ ನಗರದ ಹಾಪ್ಕಾಮ್ಸ್, ಯಶವಂತಪುರ ಸೇರಿದಂತೆ ಇತರೆ ಮಾರುಕಟ್ಟೆಗಳಲ್ಲಿ ಗುಣಮಟ್ಟದ ಈರುಳ್ಳಿ ಬೆಲೆ ಒಂದು ಕೆಜಿಗೆ 120 ರೂಪಾಯಿ ಆಗಿದೆ. ಮಧ್ಯಮ ಮತ್ತು ಸಣ್ಣ ಗಾತ್ರದ ಈರುಳ್ಳಿ ಬೆಲೆ 50 ರಿಂದ 60 ರೂಪಾಯಿ ಇದೆ.