ಉಡುಪಿ: ಮನೆಯ ಹಿಂಬಾಗಿಲು ಒಡೆದು ಮನೆಗೆ ನುಗ್ಗಿದ ಕಳ್ಳರು ಮಾಲೀಕ ಹಾಗೂ ಅವರ ಪತ್ನಿಯ ಮೇಲೆ ಮಾರಾಂಣಾತಿಕ ಹಲ್ಲೆ ನಡೆಸಿ ಚಿನ್ನ ಮತ್ತು ನಗದಿಗೆ ಕನ್ನ ಹಾಕಿರೋ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಬಂಗ್ಲೆಗುಡ್ಡೆಯಲ್ಲಿ ನಡೆದಿದೆ.
ಕಾರ್ಕಳ ಕಸಬಾ ಗ್ರಾಮದ ಬಂಗ್ಲಗುಡ್ಡೆ ಜಂಕ್ಷನ್ ಬಳಿ ಇರುವ ಬಿಎಸ್ಎನ್ಎಲ್ ನಲ್ಲಿ ಕೆಲಸಕ್ಕಿರುವ ಯಶೋಧ ಹಾಗೂ ವಿಜಯಾ ಬ್ಯಾಂಕ್ ನಿವೃತ್ತ ನೌಕರ ಸಂಜೀವ್ ನಾಯ್ಕ್ ಎಂಬರಿಗೆ ಸೇರಿದ ಮನೆಗೆ ತಡರಾತ್ರಿ ಮೂವರು ಕಳ್ಳರು ಬಂದಿದ್ದು, ಮನೆಯ ಹಿಂಬಾಗಿಲನ್ನು ತಟ್ಟಿದ್ದಾರೆ.
ಮನೆಯ ಮಾಲೀಕ ಶಬ್ಧ ಕೇಳಿ ಯಾರೋ ಪರಿಚಯಸ್ಥರು ಇರಬಹುದೆಂದು ಭಾವಿಸಿ ಮನೆಯ ಬಾಗಿಲನ್ನು ತೆರೆದಾಗ ಕಳ್ಳರು ಮಾರಾಕಾಯುಧವನ್ನು ತೋರಿಸಿ ಬೆದರಿಸಿ ಮನೆಯ ಒಳಕ್ಕೆ ನುಗ್ಗಿದ್ದಾರೆ. ಬಳಿಕ ಸಂಜೀವ್ ನಾಯ್ಕ್ ಮೇಲೆ ಗಂಭೀರ ಹಲ್ಲೆ ನಡೆಸಿ ನಂತರ ಅವರ ಹೆಂಡತಿ ಯಶೋಧ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಮನೆಯಲ್ಲಿದ್ದ ಚಿನ್ನ ಹಾಗೂ ನಗದನ್ನು ಎಗರಿಸಿ ಪರಾರಿಯಾಗಿದ್ದಾರೆ.
ಸದ್ಯ ಹಲ್ಲೆಗೊಳಗಾದ ಸಂಜೀವ್ ನಾಯ್ಕ್ ಅಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಭೇಟಿ ನೀಡಿದ್ದು, ತನಿಖೆ ಮುಂದುವರೆಸಿದ್ದಾರೆ. ಎಎಸ್ಪಿ ಋಷಿಕೇಷ್ ಸೋನಾವಣೆ, ಕಾರ್ಕಳ ವೃತ್ತ ನೀರಿಕ್ಷಕ ಜಾಯ್ ಅಂಥೋನಿ, ನಗರ ಪಿಎಸ್ಐ ನಂಜಾನಾಯ್ಕ್ ಭೇಟಿ ನೀಡಿ ಅರೋಪಿಗಳ ಶೋಧ ಕಾರ್ಯ ಮುಂದುವರೆಸಿದ್ದಾರೆ.