ಗದಗ: ದೇವರ ತೀರ್ಥ ಕುಡಿಯಬಾರದು, ಅದರಲ್ಲಿ ಕಿಲುಬು ಇರುತ್ತದೆ, ವಾಂತಿ ಬರುತ್ತದೆ. ಅದು ಅವೈಜ್ಞಾನಿಕವಾದದ್ದು ಅಂತ ಜನತಾ ಪಕ್ಷದ ರಾಜ್ಯಾಧ್ಯಕ್ಷೆ ಬಿ.ಟಿ ಲಲಿತಾ ನಾಯಕ್ (B.T. Lalita Nayak) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ (Patrika Bhavan) ಸುದ್ದಿಗೋಷ್ಠಿ ವೇಳೆ ಮಾತನಾಡಿದ ಅವರು, ಹಿಂದೂ ದೇವರ ಆರಾಧನೆ ಬಗ್ಗೆ ಅಪಸ್ವರ ಎತ್ತಿದ್ದಾರೆ. ಗಂಗಾ ಜಲ ಅಂತ ಕೃಷ್ಣಯ್ಯ ಶೆಟ್ಟಿ ಟ್ಯಾಂಕರ್ ಮೂಲಕ ನೀರು ತಂದು ಹಂಚಿದ್ದಾರೆ. ಅದನ್ನು ಅವರ ಮುಖಕ್ಕೆ ಬಿಸಾಕಿದ್ದೇನೆ. ಗಂಗಾ ನದಿಯಲ್ಲಿ (Ganga River) ಹೆಣಗಳು ತೇಲುತ್ತೇವೆ. ಮನಸ್ಸುಗಳನ್ನು ಶುದ್ಧವಾಗಿಟ್ಟುಕೊಳ್ಳಿ ಎಂದಿದ್ದಾರೆ. ಇದನ್ನೂ ಓದಿ: ಆಧಾರ್ ಇರುವ ಪ್ರತಿಯೊಬ್ಬರು ಟ್ವಿಟ್ಟರ್ ಬ್ಲೂಟಿಕ್ ಖಾತೆ ಪಡೆಯಬೇಕು – ಮಸ್ಕ್ ನಿರ್ಧಾರಕ್ಕೆ ಕಂಗನಾ ಬೆಂಬಲ
ದೇವರ ಹೆಸರು ಹೇಳಿಕೊಂಡು ಕುಣಿತಾರೆ. ಅವರಿಗೆ ಸರ್ಕಾರ ಮಾಸಾಶನ ಹೆಸರಲ್ಲಿ 2 ಸಾವಿರ ರೂಪಾಯಿ ಹಣ ನೀಡುತ್ತದೆ. ಅದನ್ನು ಕೊಡಬಾರದು. ದೈವ ನರ್ತಕರು ಅಂತಾರೆ, ದೈವ ಎನ್ನುವುದು ಒಬ್ಬೊಬ್ಬರ ದೃಷ್ಟಿಯಲ್ಲಿ ಒಂದು ತರನಾಗಿರುತ್ತದೆ. ಕಾಂತಾರ (Kantara) ಚಿತ್ರ ನೋಡಿದರೆ ಗೊತ್ತಾಗುತ್ತದೆ. ಚುಚ್ಚಿ ಹಿಂಸೆ ಕೊಡುತ್ತಾರೆ, ಅದನ್ನು ಸಹಿಸಲಾರದೇ ಸಾಕಷ್ಟು ನೊಂದುಕೊಂಡು ಕೂಗುತ್ತಾರೆ. ಅದನ್ನು ಮುಗ್ಧ ಕಾಡು ಜನ ದೇವರು ಅಂತ ನಂಬುತ್ತಾರೆ. ಅವರು ದೇವರು ಎನ್ನುವುದನ್ನು ಉಳಿಸಿಕೊಳ್ಳಲು ಸಹಿಸಿಕೊಂಡು ಜೋರಾಗಿ ಕೂಗುತ್ತಾರೆ. ಅದನ್ನು ವಂಶದವರು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಇಂತವರೆಲ್ಲಾ ಸುಳ್ಳು, ಬೋಗಸ್ಸನ್ನು ನಿಲ್ಲಿಸಬೇಕು. ಜನರ ಮುಂದೆ ಸತ್ಯ ತೆರೆದಿಡಬೇಕು. ದುಡಿದು ತಿನ್ನುವಂತಹ ವ್ಯವಸ್ಥೆ ಸರ್ಕಾರ ತರಬೇಕು ಎಂದು ಆಗ್ರಹಿಸಿದ್ದಾರೆ.
2023ರ ಚುನಾವಣೆ ಕುರಿತು ಮಾತನಾಡಿದ ಅವರು, ಅಧಿಕಾರದಲ್ಲಿದ್ದಾಗ ನುಡಿದಂತೆ ನಡೆದ, ಜನಪರ ಆಡಳಿತ ನೀಡುವ ಮೂಲಕ ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚು ಒತ್ತಿರುವ ಜನತಾ ಪಕ್ಷವು 2023ರ ಚುನಾವಣೆಯಲ್ಲಿ ದಿಕ್ಸೂಚಿಯಾಗಲಿದೆ. ಜಯಪ್ರಕಾಶ್ ನಾರಾಯಣ, ಮೊರಾರ್ಜಿ ದೇಸಾಯಿ, ರಾಮಕೃಷ್ಣ ಹೆಗಡೆ ಅವರಂತಹವರು ಸ್ಥಾಪಿಸಿ ಜನಪರ, ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ ‘ನೇಗಿಲು ಹೊತ್ತ ರೈತ’ ಚಿಹ್ನೆಯ ಜನತಾ ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಸಂಘಟಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಜನತಾ ಪಕ್ಷದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ನಾಗೇಶ್. ಎನ್ ಅವರು ಮಾತನಾಡಿ, 2023ರ ಚುನಾವಣೆಯಲ್ಲಿ ಪಕ್ಷವು 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಈಗಾಗಲೇ ಬಿಜೆಪಿ ಸೇರಿ ಕೆಲ ಹಾಲಿ ಶಾಸಕರು, ಮಾಜಿ ಸಚಿವರು ಕೂಡ ಪಕ್ಷದ ವರಿಷ್ಠರ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಜನತಾ ಪಕ್ಷದ ಗದಗ ಜಿಲ್ಲಾಧ್ಯಕ್ಷ ಈರಣ್ಣ ಬಾಳಿಕಾಯಿ, ಸಲಹಾ ಸಮಿತಿ ಅಧ್ಯಕ್ಷ ವಿನೋದ್ ಜಾಧವ್, ಮಾರುತಿ ಕಾರಂಡೆ, ರಾಜ್ಯ ಸಂಘಟನಾ ಕಾರ್ಯದರ್ಶಿ ನಳಿನಿಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ರಘುಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದನ್ನೂ ಓದಿ: ಮಂತ್ರಾಲಯದಲ್ಲಿ ಕಾರ್ತಿಕ ಮಾಸಾಚರಣೆ – ವಿಶೇಷ ವನಭೋಜನ