– ಮಂತ್ರಾಲಯಕ್ಕೆ ಜಾಗ ಕೊಟ್ಟಿದ್ದು ನವಾಬರು
– ಶಾರದಾ ಪೀಠವನ್ನು ಮರಸ್ಥಾಪನೆ ಮಾಡಿದ್ದು ಟಿಪ್ಪು
ವಿಜಯಪುರ: ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಅಗತ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ಇಂದು ನಗರದಲ್ಲಿ ಮಾತನಾಡಿದ ಅವರು, ಮುಸ್ಲಿಮರಲ್ಲಿ ಜಯಂತಿ ಸಂಪ್ರದಾಯವಿಲ್ಲ. ನಮ್ಮ ಸಂಪ್ರದಾಯದಲ್ಲಿ ಮೂರ್ತಿ ಪೂಜೆಯೂ ಇಲ್ಲ. ಈ ಹಿಂದೆ ಸರ್ಕಾರ ಟಿಪ್ಪು ಜಯಂತಿ ಮಾಡಿದ ರೀತಿಯೇ ತಪ್ಪು. ಮುಸ್ಲಿಮರಲ್ಲಿ ಈ ಸಂಪ್ರದಾಯವೇ ಇಲ್ಲ ಎಂದು ಹೇಳಿದರು.
ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಅಗತ್ಯವಿಲ್ಲ. ಟಿಪ್ಪು ಜನ್ಮದಿನ ಆಚರಣೆಯನ್ನು ಮುಸ್ಲಿಮರಿಗೆ ಬಿಟ್ಟು ಬಿಡಿ. ನಾವು ಟಿಪ್ಪು ಜಯಂತಿಯನ್ನು ಆಚರಣೆ ಮಾಡಿಕೊಳ್ಳುತ್ತೇವೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಟಿಪ್ಪು ಜಯಂತಿಯ ಆಚರಣೆಯನ್ನು ಮಾಡಲಾಯಿತು. ಆದರೆ ಈಗ ಬಿಜೆಪಿ ಸರ್ಕಾರ ಟಿಪ್ಪು ಜಯಂತಿಯನ್ನು ಆಚರಣೆ ಮಾಡುವುದು ಬೇಡ ಎಂದು ಹೇಳಿದೆ ಎಂದರು.
ಟಿಪ್ಪು ಸುಲ್ತಾನ್ ಒಬ್ಬ ಹುತಾತ್ಮ ರಾಜ, ಮಹಾರಾಷ್ಟ್ರದ ಪೇಶ್ವೆಗಳು ಬಂದು ಶೃಂಗೇರಿಯ ಶಾರದಾ ಮಠವನ್ನು ನಾಶ ಮಾಡಿದಾಗ ಅದರ ವಿರುದ್ಧ ಹೋರಾಡಿ ಕಾರ್ಕಳದಲ್ಲಿ ಇದ್ದ ಸ್ವಾಮೀಜಿಯನ್ನು ವಾಪಾಸ್ ಕರೆದುಕೊಂಡು ಬಂದು ಮತ್ತೆ ಶಾರದಾ ಪೀಠವನ್ನು ಮರು ಸ್ಥಾಪನೆ ಮಾಡಿದರು. ಪತ್ರಿ ದಿನ ಆ ಜಾಗದಲ್ಲಿ ಟಿಪ್ಪು ಸಾವಿರಕ್ಕೂ ಹೆಚ್ಚು ಬ್ರಾಹ್ಮಣ ಸಮುದಾಯದವರಿಗೆ ಅನ್ನ ದಾಸೋಹ ಮಾಡುತ್ತಿದ್ದರು. ಈ ಚರಿತ್ರೆ ಶೃಂಗೇರಿ ಮಠದಲ್ಲಿ ಇನ್ನೂ ಇದೆ ಎಂದು ಹೇಳಿದರು. ಇದನ್ನು ಓದಿ: ಟಿಪ್ಪು ಜಯಂತಿಯನ್ನು ನಾವೇ ಮುಂದೆ ನಿಂತು ಮಾಡ್ತೀವಿ: ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ
ಇದರ ಜೊತೆಗೆ ಗುರುರಾಘವೇಂದ್ರ ಸ್ವಾಮಿ ಅವರಿಗೆ ಮಂತ್ರಾಲಯ ಮಠ ಸ್ಥಾಪಿಸಲು ಜಾಗ ಕೊಟ್ಟಿದ್ದು, ಅದೋನಿ ನವಾಬರು. ಆ ಜಾಗವನ್ನು ಆ ಊರಿನ ಖಾಜಿ ಸಾಹೇಬರಿಗೆ ಕೊಟ್ಟಿದ್ದರು. ಆದರೆ ಅಂದು ನವಾಬರು ಗುರುರಾಘವೇಂದ್ರ ಸ್ವಾಮಿ ಅವರು ದೈವ ಮಾನವರು ಅವರು ನಮ್ಮ ರಾಜ್ಯಕ್ಕೆ ಬಂದಿದ್ದಾರೆ ಎಂದು ಹೇಳಿ ಖಾಜಿ ಸಾಹೇಬರಿಗೆ ಕೊಟ್ಟಿದ್ದ ಭೂಮಿಯನ್ನು ವಾಪಾಸ್ ಪಡೆದುಕೊಂಡರು. ನಂತರ ಆ ಭೂಮಿಯನ್ನು ಗುರುರಾಘವೇಂದ್ರ ಸ್ವಾಮಿ ಅವರಿಗೆ ನೀಡಿದರು. ಇದರ ಚರಿತ್ರೆಯೂ ಕೂಡ ಮಂತ್ರಾಲಯದಲ್ಲಿದೆ. ಈ ಸಂಬಂಧ ಸಾವಿರಾರು ವರ್ಷದಿಂದ ನಡೆದುಕೊಂಡು ಬಂದಿದೆ. ಕೆಲವರು ಈಗ ಬಂದ ಹಾಳು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.