ಕಾರವಾರ: ನಮ್ಮ ದೇಶದಲ್ಲಿ ಎಂತೆಂತವರೂ ಏನೇನೋ ಕಳ್ಳತನ ಮಾಡಿ ಬಿಂದಾಸ್ ಆಗಿ ಇರುತ್ತಾರೆ. ಆದ್ರೆ ಇಲ್ಲೊಬ್ಬ ಬಾಲಕ ದೇವಸ್ಥಾನದಲ್ಲಿ ಹೂವು ಕಿತ್ತಿರುವುದಕ್ಕೆ ಅಲ್ಲಿನ ಆಡಳಿತ ಮಂಡಳಿ ಕಚೇರಿಯಲ್ಲಿ ಕೂಡಿಹಾಕಿ ಬೆದರಿಕೆ ಹಾಕಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪ್ರಸಿದ್ಧ ಮಾರಿಕಾಂಬ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಸರ್ಕಾರಿ ಶಾಲೆಯೊಂದರ ವಿದ್ಯಾರ್ಥಿ ಪ್ರವಾಸಕ್ಕೆಂದು ತನ್ನ 50 ಜನ ಸಹಪಾಠಿಗಳೊಂದಿಗೆ ಮಾರಿಕಾಂಬ ದೇವಸ್ಥಾನಕ್ಕೆ ಪ್ರವಾಸಕ್ಕೆ ಬಂದಿದ್ದ. ಈ ವೇಳೆ ದೇವರ ದರ್ಶನ ಪಡೆದು ದೇವಸ್ಥಾನದ ಆವರಣದಲ್ಲಿದ್ದ ಸೇವಂತಿಗೆ ಹೂವಿನ ಗಿಡದಲ್ಲಿದ್ದ ನಾಲ್ಕು ಹೂವನ್ನು ಕಿತ್ತಿದ್ದಾನೆ. ಅಷ್ಟರಲ್ಲಾಗಲೇ ಅಲ್ಲಿನ ಸಿಬ್ಬಂದಿ ಈತ ಹೂವು ಕಿತ್ತಿರುವುದನ್ನು ಗಮನಿಸಿ ಗದರಿದಿದ್ದಾರೆ. ಅಷ್ಟು ಸಾಲದೆಂಬಂತೆ ಆತನನ್ನು ಎಳೆದೊಯ್ದು ಕಚೇರಿಯಲ್ಲಿ ಬಂದಿಯಂತೆ ಇಟ್ಟುಕೊಂಡು ಬೆದರಿಸಿದ್ದಾರೆ.
ಅಲ್ಲಿನ ಶಿಕ್ಷಕರಿಗೂ ಮಾಹಿತಿ ನೀಡದೇ ಆತನನ್ನು ಕಚೇರಿಯಲ್ಲೇ ಕುಳ್ಳಿರಿಸಿ ಕೊಂಡಿದ್ದು ನಂತರ ಶಿಕ್ಷಕರು ಆತನನ್ನು ಹುಡುಕಾಟ ಮಾಡುವಾಗ ವಿಷಯ ತಿಳಿದಿದೆ. ಕೊನೆಗೆ ಶಿಕ್ಷಕರು ಕ್ಷಮೆ ಕೇಳಿ ವಿದ್ಯಾರ್ಥಿಯನ್ನು ಕರೆದೊಯ್ದಿದ್ದಾರೆ. ಬಾಲಕನನ್ನು ಬೆದರಿಸುತ್ತಿರುವ ವೀಡಿಯೋವನ್ನು ಕಚೇರಿಯ ಮೊತ್ತೊಬ್ಬ ಸಿಬ್ಬಂದಿ ರೆಕಾರ್ಡ್ ಮಾಡಿದ್ದು, ಆಡಳಿತ ವರ್ಗದ ಈ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv