ಬೆಳಗಾವಿ: ಅಗ್ನಿಪಥ್ ವಿರೋಧಿಸಿ ಸೇನಾಕಾಂಕ್ಷಿಗಳು ಬೆಳಗಾವಿಗೆ ಬರುವುದನ್ನು ತಡೆಹಿಡಿದಿದ್ದಕ್ಕೆ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ ಹೊರಹಾಕಿದ್ದಾರೆ, ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡುವುದು ಎಲ್ಲರ ಅಧಿಕಾರ ಎಂದಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಾಂಧೀಜಿಯವರು ಕಲಿಸಿ ಕೊಟ್ಟಂತಹ ಸತ್ಯಾಗ್ರಹ ಹೋರಾಟಕ್ಕೆ ನಾವೆಲ್ಲಾ ಬದ್ಧರಾಗಿದ್ದೇವೆ. ಕಾಂಗ್ರೆಸ್ನವರು ಕೂಡ ಅದನ್ನೇ ಬಯಸುತ್ತಾರೆ. ಹೋರಾಟ ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ಅವರಿಗೆ ಗೊತ್ತಾಗಿರುವುದರಿಂದ ಪಥ ಸಂಚಲನ ಮಾಡಿ, ಬ್ಯಾರಿಕೇಡ್ ಹಾಕಿ ತಡೆದಿದ್ದಾರೆ. ಪ್ರತಿಯೊಂದು ಟೋಲ್ ನಾಕಾನಲ್ಲಿ ಜನರನ್ನು ತಡೆಯುತ್ತಿದ್ದಾರೆ. ಆದರೆ ಈ ರೀತಿ ಎಷ್ಟು ದಿನ ಮಾಡುತ್ತಾರೆ? ಎಷ್ಟು ದಿನ ಹೋರಾಟ ತಡೆಯಲು ಸಾಧ್ಯವಾಗುತ್ತದೆ? ಹೋರಾಟ ತಡೆಯಲು, ದಿಕ್ಕು ಬದಲಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ನನ್ನ ಜೀವಕ್ಕೆ ಅಪಾಯವಿದೆ, 4 ವಾರ ಕಾಲಾವಕಾಶ ನೀಡಿ: ಪೊಲೀಸರಿಗೆ ನೂಪುರ್ ಮೇಲ್
ಉರಿಯುವ ಬೆಂಕಿಗೆ ಕಾಂಗ್ರೆಸ್ ತುಪ್ಪ ಸುರಿಯುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಹೆಬ್ಬಾಳ್ಕರ್, ಬಿಜೆಪಿಯವರಿಗೆ ಯುವಕರನ್ನು ಹಾಗೂ ಜನರನ್ನು ಎತ್ತಿ ಕಟ್ಟಿ ರೂಢಿ ಇದೆ. ಬೀಸುವ ಗಾಳಿಯನ್ನು ಯಾರಿಂದಲೂ ತಡೆಯಲು ಆಗುವುದಿಲ್ಲ. ಉರಿಯುವ ಸೂರ್ಯನನ್ನು ನಂದಿಸೋಕೆ ಆಗಲ್ಲ. ನಾನು ಯೋಜನೆ ವಿರುದ್ಧ ಎಂದು ಹೇಳಲ್ಲ. ಯೋಜನೆಯಲ್ಲಿ ಬದಲಾವಣೆ ಆಗಬೇಕಿದೆ. 8 ವರ್ಷದಲ್ಲಿ 16 ಕೋಟಿ ಕೆಲಸ ಕೊಡುತ್ತೇನೆ ಎಂದು ಪ್ರಧಾನಿ ವಾಗ್ದಾನ ಮಾಡಿದ್ದರು. ಪಕೋಡ ಮಾರಿ ಎಂದು ಹೇಳಿದ್ದರು. ಈಗ ಅಗ್ನಿಪಥದಲ್ಲಿ ಅಗ್ನಿವೀರರು ಎನ್ನುತ್ತಿದ್ದಾರೆ. ಅಗ್ನಿವೀರರಾಗಿ 4 ವರ್ಷ ಆದಮೇಲೆ ಅವರ ಭವಿಷ್ಯ ಏನು? 75 ವರ್ಷದ ರಕ್ಷಣಾ ಸಚಿವರು, 71 ವರ್ಷದ ಪ್ರಧಾನಿಗೆ ರಿಟೈರ್ಮೆಂಟ್ ಇಲ್ಲ. ನಮ್ಮವರೇ 76 ವರ್ಷದ ಪ್ರಕಾಶ್ ಹುಕ್ಕೇರಿ ಎಂಎಲ್ಸಿ ಆಗಿದ್ದಾರೆ. ಇದೀಗ ಯುವಕರು 21 ಅಥವಾ 25 ವರ್ಷಕ್ಕೆ ನಿವೃತ್ತಿಯಾದರೆ ಸಹಿಸಿಕೊಳ್ಳುತ್ತಾರಾ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಅಗ್ನಿಪಥ್ ಜಾರಿಯಿಂದ ದೇಶದ ಸೈನಿಕರ ಆತ್ಮಸ್ಥೈರ್ಯ ಕುಗ್ಗುತ್ತೆ: ಧೃವನಾರಾಯಣ್