ಕನ್ನಡ ಸಿನಿಮಾ ರಂಗಕ್ಕೆ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ಉಪೇಂದ್ರ ‘ಉಪ್ಪಿ ೨’ ಚಿತ್ರದ ನಂತರ ಯಾವುದೇ ಚಿತ್ರ ನಿರ್ದೇಶನ ಮಾಡಿರಲಿಲ್ಲ. ಉಪೇಂದ್ರ ನಿರ್ದೇಶನದ ಚಿತ್ರಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಆ ಶುಭಘಳಿಗೆ ಈಗ ಬಂದಿದೆ. ಉಪೇಂದ್ರ ನಿರ್ದೇಶಿಸಿ, ನಾಯಕರಾಗೂ ನಟಿಸುತ್ತಿರುವ ನೂತನ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಬಂಡೆಮಹಾಕಾಳಿ ದೇವಸ್ಥಾನದಲ್ಲಿ ನಡೆಯಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಸುದೀಪ್ ಆರಂಭ ಫಲಕ ತೋರಿದರೆ, ಶಿವರಾಜಕುಮಾರ್ ಕ್ಯಾಮೆರಾ ಚಾಲನೆ ನೀಡಿದರು. ಈ ಸಮಾರಂಭಕ್ಕೆ ಗೀತಾ ಶಿವರಾಜಕುಮಾರ್, ಡಾಲಿ ಧನಂಜಯ, ವಸಿಷ್ಠ ಸಿಂಹ ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಕೋರಿದರು.
ಲಹರಿ ಫಿಲಂಸ್ ಹಾಗೂ VENUS entertainers ಲಾಂಛನದಲ್ಲಿ ಜಿ.ಮನೋಹರನ್ ಹಾಗೂ ಕೆ.ಪಿ.ಶ್ರೀಕಾಂತ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶನದೊಂದಿಗೆ ಉಪೇಂದ್ರ ನಾಯಕರಾಗೂ ನಟಿಸುತ್ತಿದ್ದಾರೆ. ಮೂರುನಾಮದ ಚಿಹ್ನೆಯೊಂದು ಈ ಚಿತ್ರದ ಶೀರ್ಷಿಕೆಯಾಗಿದೆ. ಇದನ್ನು ಕೆಲವರು ಮೂರು ನಾಮ ಅಂದುಕೊಂಡರೆ, ಮತ್ತೆ ಕೆಲವರು ಯು ಮತ್ತು ಐ ಅಂದುಕೊಳ್ಳುತ್ತಾರೆ. ನಾನು ಮತ್ತು ನೀನು ಎಂಬ ಅರ್ಥ ಬರುವ ಹಾಗಿದೆ ಆ ಚಿಹ್ನೆ. ಇದನ್ನೂ ಓದಿ : Exclusive : ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮೊದಲ ವರ್ಷದ ಪುಣ್ಯಸ್ಮರಣೆ : ಪುತ್ಥಳಿ ಅನಾವರಣ
ಒಟ್ಟಿನಲ್ಲಿ ತಮ್ಮ ಹಿಂದಿನ ಚಿತ್ರಗಳಲ್ಲಿ ವಿಭಿನ್ನ ಶೀರ್ಷೆಕೆಯಿಟ್ಟು ಎಲ್ಲರ ತಲೆಗೆ ಕೆಲಸ ಕೊಡುತ್ತಿದ್ದ ಉಪೇಂದ್ರ ಅವರು ಈ ಚಿತ್ರದಲ್ಲೂ ಹಾಗೆ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಉಪೇಂದ್ರ, “ಇಂದಿನಿಂದ ಚಿತ್ರೀಕರಣ ಆರಂಭಿಸಿದ್ದೇವೆ. ಲಹರಿ ಸಂಸ್ಥೆಯವರು ಹಾಗೂ ಕೆ.ಪಿ.ಶ್ರೀಕಾಂತ್ ನಿರ್ಮಾಣ ಮಾಡುತ್ತಿದ್ದಾರೆ. ವಿಭಿನ್ನ ಶೀರ್ಷಿಕೆ ಯಿಟ್ಟಿದ್ದೀನಿ. ನಿಮಗೆಲ್ಲಾ ಏನು ಅನಿಸುತ್ತದಯೋ, ಅದೇ ಶೀರ್ಷಿಕೆ ಆಗಿರುತ್ತದೆ. ನಾನು ಕಥೆ ಸಿದ್ದಮಾಡಿಕೊಂಡಿರುತ್ತೇನೆ. ಮತ್ತೆ ಬೇರೆ ಅಲೋಚನೆ ಬಂದರೆ, ಬದಲಿಸುತ್ತೀನಿ. ಚಿತ್ರದ ಶೀರ್ಷಿಕೆ ಹಾಗೂ ಕುದುರೆ ಪೋಸ್ಟರ್ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿದೆ. ಅದರ ಬಗ್ಗೆ ಒಬ್ಬೊಬ್ಬರ ಮನಸ್ಸಿನಲ್ಲಿ ಒಂದೊಂದು ಹೊಳೆಯುತ್ತಿದೆ. ನಿಮ್ಮಗೆಲ್ಲಾ ಏನು ಅನಿಸುವುದೊ, ಅದು ಚಿತ್ರದಲ್ಲಿ ಇರುತ್ತದೆ. ನಾನು ನನ್ನ ನಿರ್ದೇಶಕರ ತಂಡ ಹಾಗೂ ಇನ್ನೂ ಕೆಲವರ ಬಳಿ ಕಥೆಯ ಬಗ್ಗೆ ಹೇಳಿರುತ್ತೇನೆ. ಅವರಿಗೆ ಅದನ್ನು ಹೇಳಲು ಬರುವುದಿಲ್ಲ ಎಂದ ಉಪೇಂದ್ರ ಅವರು ಒಟ್ಟಿನಲ್ಲಿ ಉತ್ತಮ ಚಿತ್ರವೊಂದನ್ನು ನಿಮ್ಮ ಮುಂದೆ ಇಡುತ್ತೇನೆ” ಎಂದಿದ್ದಾರೆ.
ಕಲಾವಿದರು ಹಾಗೂ ತಾಂತ್ರಿಕವರ್ಗದ ಕುರಿತು ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ಉಪೇಂದ್ರ ಹೇಳಿದರು.ಉಪೇಂದ್ರ ಅವರು ನಿರ್ದೇಶನಕ್ಕೆ ಒಪ್ಪಿರುವುದು ಖುಷಿಯಾಗಿದೆ. ಶಿವಣ್ಣ ಹಾಗೂ ಗೀತಕ್ಕ ಅವರ ಆಶೀರ್ವಾದದಿಂದ ಮೂರನೇ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ. ಖ್ಯಾತ ಲಹರಿ ಫಿಲಂಸ್ ನವರು ನಾವು ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡುತ್ತಿದ್ದೇವೆ. ನಿಮ್ಮ ಹಾರೈಕೆ ಇರಲಿ ಎಂದರು ಕೆ.ಪಿ.ಶ್ರೀಕಾಂತ್. ಇದನ್ನೂ ಓದಿ : ಹಾಸ್ಯನಟ ನರಸಿಂಹರಾಜು ಹಿರಿಯ ಪುತ್ರಿ, ನಿರ್ದೇಶಕ ಅರವಿಂದ್ ತಾಯಿ ಧರ್ಮವತಿ ನಿಧನ
ನಾನು ಹಾಗೂ ಉಪೇಂದ್ರ ಅವರು ಸಹಪಾಠಿಗಳು. ತುಂಬಾ ವರ್ಷಗಳಿಂದ ಅವರು ಪರಿಚಯ. ಅವರೊಂದಿಗೆ ಸಿನಿಮಾ ಮಾಡುತ್ತಿರುವುದು ಸಂತೋಷವೆಂದರು ಲಹರಿ ವೇಲು. ಲಹರಿ ಸಂಸ್ಥೆಯ ಮನೋಹರ್ ನಾಯ್ಡು, ನವೀನ್, ಕಾಕ್ರೋಜ್ ಸುಧಿ, ನಟಿ ತ್ರಿವೇಣಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.