ಬೆಂಗಳೂರು: ವಾರಾಂತ್ಯ ಬಂದರೆ ಬೆಂಗಳೂರಿನ ರಸ್ತೆಗಳಲ್ಲಿ ಜಾಸ್ತಿ ಜನಸಂದಣಿ ಇರುತ್ತದೆ. ಆದರೆ ಶುಕ್ರವಾರ ಸಂಜೆ ಚಂದ್ರಗ್ರಹಣ ಹಿನ್ನೆಲೆಯಲ್ಲಿ ನಗರದ ರಸ್ತೆಗಳು ಖಾಲಿ ಖಾಲಿಯಾಗಿದೆ.
ಹಲವು ಅಂಗಡಿಗಳು ಮುಚ್ಚಿದ್ದು, ಟ್ರಾಫಿಕ್ ಜಾಮ್ ನ ಸಂಕಷ್ಟಕ್ಕೆ ಗ್ರಹಣದಿಂದ ತಾತ್ಕಾಲಿಕ ಮುಕ್ತಿ ಸಿಕ್ಕಿದೆ. ಬೆಳಗ್ಗೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ.
ದೇವಾಲಯಗಳು ಇರುವ ಕಡೆ ಸ್ವಲ್ಪ ಟ್ರಾಫಿಕ್ ಹೆಚ್ಚಾಗಿದೆ. ರಸ್ತೆಯಲ್ಲಿ ಸರತಿ ಸಾಲು ಉದ್ದವಾಗಿದ್ದರಿಂದ ಸಂಚಾರದಲ್ಲಿ ಸ್ವಲ್ಪ ವ್ಯತ್ಯಯವಾಗುತ್ತಿದೆ.
ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಬಹುತೇಕ ಸಚಿವರು ಯಾರೂ ಶಕ್ತಿ ಸೌಧಕ್ಕೆ ಬಂದಿರಲಿಲ್ಲ. ಹಲವು ಸಚಿವರ ಕೊಠಡಿಗಳು ಬಂದ್ ಆಗಿತ್ತು. ವಿಧಾನಸೌಧದ ಮೊಗಸಾಲೆ, ಕಾರಿಡಾರ್ ಗಳೂ ಕೂಡ ಖಾಲಿ ಖಾಲಿಯಾಗಿವೆ.