ಬಾಗಲಕೋಟೆ: ಇಲ್ಲಿನ ರೈಲು ನಿಲ್ದಾಣದಲ್ಲಿ ಮಲಗಿದ್ದ ಕಾರಣಕ್ಕೆ ಪೊಲೀಸ್ ಪೆದೆಯೊಬ್ಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾನೆ.
ರಾಘವೇಂದ್ರ ಗೋಕಾಕ್ ಎಂಬ ವ್ಯಕ್ತಿ ರೈಲು ನಿಲ್ದಾಣದಲ್ಲಿ ಮಲಗಿದ್ದರು. ಈ ವೇಳೆ ಪೊಲೀಸ್ ಪೇದೆ ಅರುಣ್ ಕುಮಾರ್ ಹಲ್ಲೆ ಮಾಡಿದ್ದಾನೆ. ಇದರಿಂದ ರಾಘವೇಂದ್ರರ ಮೊಣಕೈಗೆ ಗಾಯವಾಗಿದೆ. ಕೂಡಲೇ ಆಂಬುಲೆನ್ಸ್ ಮೂಲಕ ಅವರನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಗದಗ ಮೂಲದವರಾಗಿರೋ ರಾಘವೇಂದ್ರ, ಪತ್ನಿ ಮತ್ತು ಮಗಳ ಜೊತೆ ರೈಲ್ವೇ ನಿಲ್ದಾಣದಲ್ಲಿ ಮಲಗಿದ್ದರು. ಅಲ್ಲದೇ ಅವರ ಹತ್ತಿರ ಯಾವುದೇ ಟಿಕೆಟ್ ಕೂಡ ಇರಲಿಲ್ಲ. ಆದ್ದರಿಂದ ನಿಲ್ದಾಣದಿಂದ ಎದ್ದು ಹೋಗುವಂತೆ ಪೇದೆ ಅರುಣ್ ಕುಮಾರ್, ರಾಘವೇಂದ್ರನಿಗೆ ಹೇಳಿದ್ದಾನೆ. ತನ್ನ ಮಾತನ್ನು ರಾಘವೇಂದ್ರ ಕೇಳದಿದ್ದಾಗ ಪೇದೆ ಲಾಟಿಯಿಂದ ಹೊಡೆದು ಹಲ್ಲೆ ಮಾಡಿದ್ದಾನೆ.
ಇದನ್ನು ಕಂಡ ರೈಲ್ವೇ ನಿಲ್ದಾಣದಲ್ಲಿನ ಇತರೆ ಪ್ರಯಾಣಿಕರು ಪೇದೆ ಅರುಣ್ ಕುಮಾರ್ ನನ್ನು ತರಾಟೆಗೆ ತೆಗೆದುಕೊಂಡರು. ಸ್ಥಳದಲ್ಲಿದ್ದ ರೈಲ್ವೇ ಇಲಾಖೆ ಪಿಎಸ್ ಐ ಕೃಷ್ಣಮೂರ್ತಿ ಅವರಿಗೆ ರಾಘವೇಂದ್ರನ ಚಿಕಿತ್ಸೆಯನ್ನು ನೀವೇ ಭರಿಸಬೇಕೆಂದು ಸೂಚಿಸಿದ್ದಾರೆ.
ರಾಘವೇಂದ್ರ ಕಳೆದ ಒಂದು ವಾರದಿಂದ ರೈಲ್ವೇ ನಿಲ್ದಾಣದಲ್ಲೇ ಪತ್ನಿ ಮತ್ತು ಮಗಳ ಜೊತೆ ಮಲಗುತ್ತಿದ್ದರು ಎಂದು ರೈಲ್ವೇ ಪೊಲೀಸರು ತಿಳಿಸಿದ್ದಾರೆ. ಸದ್ಯ ಗಾಯಗೊಂಡ ರಾಘವೇಂದ್ರರ ಮೊಣಕೈ ಸ್ವಲ್ಪ ಬಾವು ಬಂದಿದ್ದು, ಯಾವುದೇ ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.