– ಈಐ ಟೆಕ್ನಾಲಾಜೀಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗೆ ಟೆಂಡರ್
– ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟ ವಿರೋಧ
ಶಿವಮೊಗ್ಗ: ಬೆಂಗಳೂರಿನ (Bengaluru) ಜನರ ದಾಹ ತೀರಿಸಲು ಸರ್ಕಾರ ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬಿ ಸಮುದ್ರ ಸೇರುತ್ತಿರುವ ಶರಾವತಿ ನದಿ ನೀರಿನ ಮೇಲೆ ಕಣ್ಣಿಟ್ಟಿದೆ. ಈ ಬಗ್ಗೆ ಕಾರ್ಯ ಸಾಧ್ಯತೆ ವರದಿ ಪಡೆಯಲು ಸರ್ಕಾರ ಮುಂದಾಗಿದೆ. ಬೆಂಗಳೂರಿಗೆ ಶರಾವತಿ ನೀರು (Sharavathi River Water) ತರುವ ಯೋಜನೆಗೆ ಮಲೆನಾಡಿಗರು, ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥದಲ್ಲಿ ಹುಟ್ಟುವ ಶರಾವತಿ ನದಿಗೆ ಲಿಂಗನಮಕ್ಕಿ ಬಳಿ ಜಲಾಶಯ ನಿರ್ಮಿಸಲಾಗಿದೆ. ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಪಶ್ಚಿಮ ದಿಕ್ಕಿಗೆ ಹರಿಯುವ ಪ್ರಮುಖ ನದಿಗಳಲ್ಲಿ ಶರಾವತಿ ನದಿಯೂ (Sharavathi River) ಒಂದು. ರಾಜ್ಯದ ಅತಿದೊಡ್ಡ ಜಲಾಶಯಗಳಲ್ಲಿ ಲಿಂಗನಮಕ್ಕಿ ಜಲಾಶಯವು ಒಂದು. 151.75 ಟಿಎಂಸಿ ಸಾಮರ್ಥ್ಯ ಹೊಂದಿರುವ ಜಲಾಶಯ ಇದಾಗಿದೆ. 1962 ರಲ್ಲಿ ಈ ಜಲಾಶಯ ನಿರ್ಮಿಸಲಾಗಿದೆ. ಜಲಾಶಯ ನಿರ್ಮಾಣವಾದ 60 ವರ್ಷದಲ್ಲಿ ಈ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು ಕೇವಲ 12 ಬಾರಿ ಮಾತ್ರ. ಇದನ್ನೂ ಓದಿ: ನಿವೇಶನ ಲೂಟಿ ಮಾಡುತ್ತಿರುವುದು ನಾನಾ ನೀವಾ? – ಎಂ.ಬಿ.ಪಾಟೀಲರ ಸೈಟ್ ಅಕ್ರಮ ಸದ್ಯದಲ್ಲೇ ಬಯಲು: ಛಲವಾದಿ ನಾರಾಯಣಸ್ವಾಮಿ
40 ಟಿಎಂಸಿ ನೀರು ತರಲು ಚಿಂತನೆ:
ಲಿಂಗನಮಕ್ಕಿ ಜಲಾಶಯವನ್ನು ಜಲ ವಿದ್ಯುತ್ ಉತ್ಪಾದನೆಗೆ ಬಳಸಿಕೊಂಡಿದ್ದು, ರಾಜ್ಯದ ಶೇ.30 ರಷ್ಟು ಕತ್ತಲೆಯನ್ನು ಈ ಜಲಾಶಯ ನೀಗಿಸುತ್ತಿದೆ. ಅಂದರೆ ಶೇ.30 ರಷ್ಟು ರಾಜ್ಯಕ್ಕೆ ವಿದ್ಯುತ್ ಉತ್ಪಾದಿಸಿ ನೀಡುತ್ತಿದೆ. ಆದರೆ ಇತ್ತೀಚೆಗೆ ಮಿತಿಮೀರಿ ಬೆಳೆಯುತ್ತಿರುವ ಬೆಂಗಳೂರಿಗೆ ಕಾವೇರಿ ನೀರು ಸಾಲದಾಗಿದೆ. ಈಗಾಗಿ ಅಂತರರಾಜ್ಯ ಸಮಸ್ಯೆ ಇಲ್ಲದ ಶರಾವತಿ ನದಿಯ ಲಿಂಗನಮಕ್ಕಿ ಜಲಾಶಯದಿಂದ (Linganamakki Dam) 40 ಟಿಎಂಸಿ ನೀರನ್ನು ತೆಗೆದುಕೊಂಡು ಹೋಗಲು ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ತಾಂತ್ರಿಕ ಮತ್ತು ಆರ್ಥಿಕ ಯೋಜನೆಯ ಕಾರ್ಯ ಸಾಧ್ಯತೆಯ ವರದಿ ತಯಾರಿಸಲು ಈಐ ಟೆಕ್ನಾಲಾಜೀಸ್ ಪ್ರೈವೇಟ್ ಲಿಮಿಟೆಡ್ಗೆ ಸರ್ಕಾರ ಟೆಂಡರ್ ನೀಡಿದೆ. ಇದನ್ನೂ ಓದಿ: ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ರಾಜ್ಯಗಳು ಪ್ರಾಮಾಣಿಕ ಪ್ರಯತ್ನ ಮಾಡ್ತಿಲ್ಲ: ರಾಜನಾಥ್ ಸಿಂಗ್ ಆರೋಪ
2018 ರಲ್ಲಿಯೂ ಶರಾವತಿ ನದಿಯಿಂದ ಬೆಂಗಳೂರಿಗೆ ನೀರು ತರುವ ಪ್ರಸ್ತಾಪ ಮಲೆನಾಡಿನ ಜನರ ವಿರೋಧದಿಂದ ಯೋಜನೆ ಕೈ ಬಿಡಲಾಗಿತ್ತು. ಆದರೆ ಇದೀಗ ಈ ಪ್ರಸ್ತಾಪ ಮುನ್ನಲೆಗೆ ಬಂದಿದೆ. ಶರಾವತಿ ನದಿಯಿಂದ ಬೆಂಗಳೂರಿಗೆ ನೀರು ಕೊಂಡೊಯ್ಯುವುದಕ್ಕೆ ಜಿಲ್ಲೆಯ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಯೋಜನೆ ಜಾರಿಯಾದರೇ ನೂರಾರು ಎಕರೆ ಅರಣ್ಯ ಪ್ರದೇಶ ನಾಶವಾಗುತ್ತದೆ. ವನ್ಯಜೀವಿ ಪ್ರಭೇಧ ನಾಶವಾಗುತ್ತದೆ. ಅಲ್ಲದೇ ಜಿಲ್ಲೆಯಲ್ಲೇ ಇರುವ ಗ್ರಾಮಗಳಿಗೆ, ನಗರ ಪ್ರದೇಶಕ್ಕೆ ಶರಾವತಿಯಿಂದ ನೀರು ಕೊಡಲು ಸಾಧ್ಯವಾಗಿಲ್ಲ. ಇನ್ನೂ ಬೆಂಗಳೂರಿಗೆ ಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಈ ಯೋಜನೆ ಕೈ ಬಿಡುವಂತೆ ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಶರಾವತಿ ನದಿ ನೀರು ಬೆಂಗಳೂರಿಗೆ ಕೊಂಡೊಯ್ಯುವ ಯೋಜನೆಗೆ ಆರಂಭದಲ್ಲೇ ವಿರೋಧ ವ್ಯಕ್ತವಾಗಿದೆ. ಈ ಯೋಜನೆ ಕೈಬಿಡದಿದ್ದರೇ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲು ಶರಾವತಿ ನದಿ ನೀರು ಉಳಿಸಿ ಹೋರಾಟ ಒಕ್ಕೂಟದ ಸದಸ್ಯರು ಉಗ್ರ ಹೋರಾಟ ನಡೆಸುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಚಿವರ ಜೊತೆ ಕಂಪನಿಯ ನಿಯೋಗದ ಭೇಟಿ; ವಿಜಯಪುರ ಜಿಲ್ಲೆಯಲ್ಲಿ ಕೆನಡಾದ ವಿಟೆರಾದಿಂದ 250 ಕೋಟಿ ಹೂಡಿಕೆ: ಎಂ.ಬಿ.ಪಾಟೀಲ್