ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವಿವಾದದ ಹಿನ್ನೆಲೆ ಬರಗೂರು ರಾಮಚಂದ್ರಪ್ಪ ಹಾಗೂ ರೋಹಿತ್ ಚಕ್ರತೀರ್ಥ ಸಮಿತಿಯ ಪಠ್ಯಗಳನ್ನು ಪಬ್ಲಿಕ್ ಡೊಮೈನ್ಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.
2015-16 ನೇ ಸಾಲಿನ ಡಾ. ಮುಡಂಬಡಿತ್ತಾಯ ಸಮಿತಿ ಪಠ್ಯ ಮತ್ತು 2017- 18ನೇ ಸಾಲಿನ ಬರಗೂರು ರಾಮಚಂದ್ರಪ್ಪ ಸಮಿತಿ ಪರಿಷ್ಕರಣೆ ಪಠ್ಯಗಳನ್ನು ಕರ್ನಾಟಕ ಪಠ್ಯಪುಸ್ತಕ ಸೊಸೈಟಿ ವೆಬ್ಸೈಟ್ ktbs.kar.nic.in ಬಿಡುಗಡೆ ಮಾಡಲಾಗಿದೆ. ರೋಹಿತ್ ಚಕ್ರತೀರ್ಥ ಸಮಿತಿಯ ಪಠ್ಯಪುಸ್ತಕಗಳನ್ನು ಸಹ ವೆಬ್ಸೈಟ್ಗೆ ಸರ್ಕಾರ ರಿಲೀಸ್ ಮಾಡಿದೆ.
ಯಾರ ಕಾಲದಲ್ಲಿ ಯಾರ್ಯಾರ ಪಠ್ಯ ಕೈ ಬಿಡಲಾಗಿತ್ತು ಅನ್ನೋ ಬಗ್ಗೆ ಸಾರ್ವಜನಿಕರೇ ಮಾಹಿತಿ ಪಡೆಯಬಹುದು. ಬರಗೂರು ರಾಮಚಂದ್ರಪ್ಪ ಸಮಿತಿ ಯಾವ ಯಾವ ಮಹನೀಯರ ಪಠ್ಯ ಕೈ ಬಿಟ್ಟಿತ್ತು ಅನ್ನೋ ಬಗ್ಗೆಯೂ ಮಾಹಿತಿ ಇದೆ.
ಪಠ್ಯದಲ್ಲಿ ಏನೇ ಲೋಪ ಇದ್ದರೂ ಸಾರ್ವಜನಿಕರು ಸಲಹೆಗಳನ್ನು ನೀಡಬಹುದು. ಸಾರ್ವಜನಿಕ ಸಲಹೆ ಮೇರೆಗೆ ಸರ್ಕಾರ ಪಠ್ಯ ಪರಿಷ್ಕರಣೆ ಮಾಡಲಿದೆ. ಇದನ್ನೂ ಓದಿ: ಸ್ಟಾಲಿನ್ ರಾಜಕೀಯ ಸ್ಟಂಟ್ ಮಾಡುತ್ತಿದ್ದಾರೆ: ತಮಿಳುನಾಡು ಸಿಎಂ ವಿರುದ್ಧ ಬೊಮ್ಮಾಯಿ ಕಿಡಿ
ಪಠ್ಯಪುಸ್ತಕ ಪರಿಷ್ಕರಣೆಗೆ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಸಮಿತಿ ರಚಿಸಿದ್ದಕ್ಕೆ ರಾಜ್ಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಯಿತು. ಪಠ್ಯದಲ್ಲಿ ಕುವೆಂಪು, ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನ ಮಾಡಲಾಗಿದೆ. ಹಿಂದೂಪರ ಧೋರಣೆಗಳನ್ನು ಉದ್ದೇಶಪೂರ್ವಕವಾಗಿ ಪಠ್ಯದಲ್ಲಿ ಅಳವಡಿಸಲಾಗಿದೆ ಎಂದು ಗಂಭೀರ ಆರೋಪಗಳು ಕೇಳಿಬಂದಿದ್ದವು. ಅನೇಕ ಹಿರಿಯ ಸಾಹಿತಿಗಳು ಪಠ್ಯದಿಂದ ತಮ್ಮ ಪಾಠ, ಪದ್ಯಗಳನ್ನು ಕೈಬಿಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು.