ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೂಂಚ್ ಸೆಕ್ಟರ್ನ (Poonch sector) ಗಡಿ ನಿಯಂತ್ರಣ ರೇಖೆಯಲ್ಲಿ ಸೇನೆಯು ಭಾನುವಾರ ಮುಂಜಾನೆ ಭಯೋತ್ಪಾದಕನನ್ನು (Terrorist) ಹೊಡೆದುರುಳಿಸಿ ದೇಶದ ಒಳಗೆ ನುಸುಳುವ ಪ್ರಯತ್ನವನ್ನು ವಿಫಲಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೂಂಚ್ ಸೆಕ್ಟರ್ನ ಎಲ್ಒಸಿಯಲ್ಲಿ (LoC) ಗಸ್ತಿನಲ್ಲಿದ್ದ ಭಾರತೀಯ ಸೇನಾ ಪಡೆಗಳು ಅನುಮಾನಾಸ್ಪದ ವ್ಯಕ್ತಿಗಳ ಗುಂಪಿನ ಚಲನೆಯನ್ನು ಪತ್ತೆ ಹಚ್ಚಿದ್ದವು. ಗಡಿಯ ಸಮೀಪದಲ್ಲಿ ಸೇನಾ ಪಡೆಗಳು ಉಗ್ರರನ್ನು ತಡೆಹಿಡಿದ ನಂತರ ಪರಸ್ಪರ ಗುಂಡಿನ ದಾಳಿ ನಡೆದಿದೆ. ಕಾರ್ಯಾಚರಣೆಯಲ್ಲಿ ಒಬ್ಬ ಮೃತಪಟ್ಟು, ಉಳಿದ ಕೆಲವು ಉಗ್ರರು ಸಮೀಪದ ಅರಣ್ಯಕ್ಕೆ ಓಡಿಹೋಗಿದ್ದಾರೆ. ಈ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಜಮ್ಮು ಮೂಲದ ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೇಂದ್ರ ಆನಂದ್ ಹೇಳಿದ್ದಾರೆ. ಇದನ್ನೂ ಓದಿ: ಮೋದಿ ಕಾಡು ಪ್ರಾಣಿಗಳನ್ನು ನೋಡಿದರೆ ಜನ ವೋಟು ಒತ್ತುತ್ತಾರಾ: ಹೆಚ್ಡಿಕೆ ವ್ಯಂಗ್ಯ
ಪಾಕಿಸ್ತಾನವು (Pakistan) ಜಮ್ಮು ಕಾಶ್ಮೀರ ಗಡಿಯಲ್ಲಿ ತನ್ನ ಭಯೋತ್ಪಾದಕ ಚಟುವಟಿಕೆಗಳನ್ನು ಪುನರಾರಂಭಿಸಿದೆ. ಏ.3 ರಂದು ಗಡಿ ಜಿಲ್ಲೆ ಸಾಂಬಾದ ವಿಜಯಪುರ್ನ ರಾಖ್ ಬರುತಿಯಾ (Rakh Barutia) ಗ್ರಾಮದಲ್ಲಿ ಪಾಕಿಸ್ತಾನದ ಡ್ರೋನ್ನಿಂದ ಬೀಳಿಸಲಾಗಿದೆ ಎಂದು ಶಂಕಿಸಲಾದ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ವಶಕ್ಕೆ ಪಡೆದ ಪ್ಯಾಕೆಟ್ನಿಂದ ಚೀನಾ ನಿರ್ಮಿತ ಮೂರು ಪಿಸ್ತೂಲ್ಗಳು, ಆರು ಮ್ಯಾಗ್ಜೀನ್ಗಳು, 48 ಬುಲೆಟ್ಗಳು ಮತ್ತು ನಾಲ್ಕು ಚೈನ ನಿರ್ಮಿತ ಹ್ಯಾಂಡ್ ಗ್ರೆನೇಡ್ಗಳಿದ್ದವು. ಮಾ.31 ಮತ್ತು ಏ.1 ರ ಮಧ್ಯರಾತ್ರಿಯ ಸಮಯದಲ್ಲಿ, ಸಾಂಬಾ (Samba) ಜಿಲ್ಲೆಯ ರಾಮ್ಗಢ ಸೆಕ್ಟರ್ನ ಅಂತರಾಷ್ಟ್ರೀಯ ಗಡಿಯಲ್ಲಿ ಭದ್ರತಾ ಪಡೆ ಪಾಕಿಸ್ತಾನದ ಡ್ರೋನ್ನ ಮೇಲೆ ಗುಂಡು ಹಾರಿಸಿತ್ತು.
ಮಾ.29 ರಂದು ರಾತ್ರಿ 9:30 ರ ಸುಮಾರಿಗೆ ಕಥುವಾ (Kathua) ಜಿಲ್ಲೆಯ ಹೀರಾನಗರ (Hiranagar) ಸೆಕ್ಟರ್ನ ಸನ್ಯಾಲ್ನ ಗಡಿಯ ಪೊಲೀಸ್ ಪೋಸ್ಟ್ ಬಳಿ ಪ್ರಬಲ ಸ್ಫೋಟ ಸಂಭವಿಸಿತ್ತು. ಹೀರಾನಗರ ಸೆಕ್ಟರ್ನಲ್ಲಿ ಗಡಿ ರೇಖೆಯಿಂದ ಕೇವಲ 4 ಕಿಮೀ ದೂರದಲ್ಲಿ ಸಂಭವಿಸಿದ ಸ್ಫೋಟವು ಗಡಿಯ ನಾಲ್ಕೈದು ಹಳ್ಳಿಗಳಿಗೆ ಕೇಳಿಸಿತ್ತು.
ಕಣಿವೆಯ ಹಾದಿಗಳಲ್ಲಿ ಹಿಮ ಕರಗಲು ಪ್ರಾರಂಭಿಸಿದಾಗ, ರಜೌರಿ (Rajouri) ಮತ್ತು ಪೂಂಚ್ನಲ್ಲಿನ ಮಾರ್ಗಗಳಿಂದ ಭಯೋತ್ಪಾದಕರನ್ನು ಭಾರತಕ್ಕೆ ಪಾಕಿಸ್ತಾನ ಕಳುಹಿಸುತ್ತದೆ. ಪಾಕಿಸ್ತಾನದ ಕುತಂತ್ರವನ್ನು ಅರಿತಿರುವ ಸೈನಿಕರು ಈಗ ಗಡಿಯಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. ಇದನ್ನೂ ಓದಿ: ರಾಹುಲ್ಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶರ ನಾಲಿಗೆ ಕತ್ತರಿಸ್ತೀನಿ – ಬೆದರಿಕೆ ಹಾಕಿದ ಕಾಂಗ್ರೆಸ್ ನಾಯಕನ ವಿರುದ್ಧ ಪ್ರಕರಣ ದಾಖಲು