ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಜಾಮೀನು ಅರ್ಜಿ ವಿಚಾರಣೆ ನವೆಂಬರ್ 15ಕ್ಕೆ ಮುಂದೂಡಲಾಗಿದೆ. ಅಲ್ಲಿವರೆಗೂ ನಟಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದು, ನವೆಂಬರ್ 15ರಂದು ಏನಾಗಲಿದೆ ಎನ್ನುವ ಆತಂಕ ಜಾಕ್ವೆಲಿನ್ಗೆ ಶುರುವಾಗಿದೆ. ವಂಚನೆಯ ಆರೋಪಿ ಸುಕೇಶ್ ಚಂದ್ರಶೇಖರ್ ಜೈಲಿನಲ್ಲಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹಲವರನ್ನು ಬಂಧಿಸಲಾಗಿದೆ. ಆದರೆ, ಜಾಕ್ವೆಲಿನ್ ಬಂಧನ ಯಾಕಾಗಿಲ್ಲ ಎಂದು ಕೋರ್ಟ್ ನಿನ್ನೆಯಷ್ಟೇ ಪ್ರಶ್ನೆ ಮಾಡಿತ್ತು.
ಕನ್ನಡವೂ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ಸ್ನೇಹಿತ ಸುಕೇಶ್ ಚಂದ್ರಶೇಖರ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊನ್ನೆಯಿಂದ ಜಾಕ್ವೆಲಿನ್ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಯುತ್ತಿದೆ. ಹಾಗಾಗಿ ಮೊನ್ನೆಯಷ್ಟೇ ಜಾಕ್ವೆಲಿನ್ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ಗೆ ಖುದ್ದಾಗಿ ಹಾಜರಾಗಿದ್ದರು. ಇದನ್ನೂ ಓದಿ:ಭಾರತಕ್ಕೆ ಬೈ ಹೇಳಿದ ಬೆನ್ನಲ್ಲೇ ಕ್ರಿಸ್ಮಸ್ಗೆ ಪ್ರಿಯಾಂಕಾ ಚೋಪ್ರಾ ತಯಾರಿ
200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟಿ, ಇದರ ಪ್ರಮುಖ ಕಿಂಗ್ ಪಿನ್ ಸುಕೇಶ್ ಚಂದ್ರಶೇಖರ್ ಜೊತೆ ಜಾಕ್ವೆಲಿನ್ ಸ್ನೇಹ ಹೊಂದಿದ್ದರು. ಅಲ್ಲದೇ, ಈ ಹಣದಲ್ಲೇ ನಟಿಗೆ ದುಬಾರಿ ವಸ್ತುಗಳನ್ನು ಸುಕೇಶ್ ನೀಡಿದ್ದಾರೆ ಎನ್ನುವ ಆರೋಪವಿದೆ. ಕುದುರೆ, ಕಾರು, ವಾಚ್, ದುಬಾರಿ ಬ್ಯಾಗ್ ಸೇರಿದಂತೆ ಹಲವು ವಸ್ತುಗಳನ್ನು ಜಾಕ್ವೆಲಿನ್ ಪಡೆದುಕೊಂಡಿದ್ದರು ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಈ ಎಲ್ಲ ಆರೋಪಗಳನ್ನೂ ಜಾಕ್ವೆಲಿನ್ ತಳ್ಳಿ ಹಾಕಿದ್ದಾರೆ. ಸುಕೇಶ್ ಜೊತೆಗೆ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಅಲ್ಲದೇ, ಬಹುತೇಕ ವಸ್ತುಗಳನ್ನು ತಾವೇ ತಮ್ಮ ಸ್ವಂತ ಹಣದಲ್ಲೇ ಖರೀದಿಸಿರುವುದಾಗಿ ತಿಳಿಸಿದ್ದಾರೆ. ಹೀಗಾಗಿಯೇ ಜಾಮೀನಿಗೆ ಅವರು ಅರ್ಜಿ ಕೂಡ ಸಲ್ಲಿಸಿದ್ದಾರೆ. ಆ ಅರ್ಜಿಯ ವಿಚಾರಣೆಯು ಮೊನ್ನೆಯಿಂದ ನಡೆಯುತ್ತಿದೆ. ಇದೀಗ ನವೆಂಬರ್ 15ಕ್ಕೆ ಮುಂದೂಡಲಾಗಿದೆ.