ನಮೋ ಹಾಡಿ ಹೊಗಳಿ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ ತೇಜಸ್ವಿ

Public TV
2 Min Read
tejasvi surya

– ಮೊದಲ ಭಾಷಣದಲ್ಲಿಯೇ ‘ಕೈ’ ವಿರುದ್ಧ ಕಿಡಿ
– ದಿನದ 24 ಗಂಟೆ ಮೋದಿ ಕೆಲಸ ಮಾಡ್ತಾರೆ

ನವದೆಹಲಿ: ಸಂಸತ್ ಅಧಿವೇಶದ ತಮ್ಮ ಮೊದಲ ಭಾಷಣದಲ್ಲಿಯೇ ಬೆಂಗಳೂರು ದಕ್ಷಿಣದ ಯುವ ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜಕಾರಣ ಒಂದು ಕುಟುಂಬಕ್ಕೆ ಸೀಮಿತವಲ್ಲ ಎಂದು ಚಾಯ್ ವಾಲಾ ಮೋಜಿ ಜೀ ತಿಳಿಸಿಕೊಟ್ಟರು. ಸ್ವಂತ ಸಾಮಥ್ರ್ಯದ ಮೂಲಕ ಎರಡು ಬಾರಿ ಪ್ರಧಾನಿಯಾದರು ಹಾಗೂ ನಮ್ಮಂತ ಯುವಕರಿಗೆ ಅವಕಾಶ ನೀಡಿದರು. ಈ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸಂಸತ್ ಪ್ರವೇಶ ಮಾಡಿದ್ದಾರೆ. ಆದರೆ ಯುಪಿಎ ಸರ್ಕಾರದ ಅವಧಿಯಲ್ಲಿ ಯುವಕರಿಗೆ ಅವಕಾಶವೇ ಸಿಗಲಿಲ್ಲ ಎಂದು ಆರೋಪಿಸಿದರು.

PM Modi

ಐದು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಪರ ಪ್ರಚಾರ ಮಾಡಲು ಕರಪತ್ರಗಳನ್ನು ಹಂಚುತ್ತಿದ್ದೆ. ಗೋಡೆಗಳ ಮೇಲೆ ಘೋಷಣೆಗಳನ್ನು ಬರೆಯುತ್ತಿದ್ದೆ ಹಾಗೂ ಕೆಲವು ಕಾರ್ಯಕ್ರಮಗಳಲ್ಲಿ ಭಾಷಣ ಮಾಡುತ್ತಿದ್ದೆ. ನಾನು ಸಂಸತ್ ಪ್ರವೇಶ ಮಾಡುತ್ತೇನೆ ಅಂತ ಊಹೆ ಕೂಡ ಮಾಡಿಕೊಂಡಿರಲಿಲ್ಲ. ಆದರೆ ಇಂದು ಇಲ್ಲಿ ನಿಂತು ಭಾಷಣ ಮಾಡುತ್ತಿದ್ದೇನೆ. ಇದು ಬಿಜೆಪಿ ಯುವಕರಿಗೆ ನೀಡುತ್ತಿರುವ ಪ್ರಾಮುಖ್ಯತೆಯನ್ನು ತೋರಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಜಿಎಸ್‍ಟಿ ಸೇರಿದಂತೆ ಅನೇಕ ಬದಲಾವಣೆಗಳನ್ನು ಮೋದಿ ಜೀ ಜಾರಿಗೆ ತಂದರು. ಇದು ದೇಶದ ಅಭಿವೃದ್ಧಿಗೆ ಭಾರೀ ಅನುಕೂಲವಾಗಿದೆ. ಮೋದಿ ಅವರ ಕಾರ್ಯಗಳನ್ನು ಮೆಚ್ಚಿದ ಆಟೋ ಚಾಲಕ, ಟೆಕ್ಕಿ, ಎನ್‍ಆರ್ ಐ ಸೇರಿದಂತೆ ಅನೇಕರು ನಮೋ ಅಗೇನ್ ಎಂದು ಪ್ರಚಾರ ಮಾಡಿದರು ಎಂದರು.

Congress Flag 1

ಮೋದಿ ಅವರಿಂದ ಹಿಂದುತ್ವಕ್ಕೆ ಮತ್ತಷ್ಟು ಬಲ ಬಂದಿದೆ. ನಾನು ಹಿಂದೂ ಎಂದು ಹೇಳಿಕೊಳ್ಳಲು ಅನೇಕರು ಹೆಮ್ಮೆ ಪಡುತ್ತಾರೆ. ಮುಂದಿನ 5 ವರ್ಷದಲ್ಲಿ ದೇಶವು ಮತ್ತಷ್ಟು ಪ್ರಗತಿ ಹೊಂದಲಿದೆ. ಆದರೆ ಕೆಲ ವಿಪಕ್ಷ ನಾಯಕರು ಮೋದಿ ಅವರ ಬಗ್ಗೆ ಹಗುರವಾಗಿ ಮಾತನಾಡಿದರು. ಫಲಿತಾಂಶದ ಬಳಿಕ ಹಾಗೂ ಈಗಲೂ ಇವಿಎಂ ಯಂತ್ರದಲ್ಲಿ ಮೋಸ ಮಾಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಅವರು ಹೀಗೆ ಮುಂದುವರಿಸಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು 545 ಸ್ಥಾನಗಳಲ್ಲಿಯೂ ಗೆಲುವು ಸಾಧಿಸುತ್ತದೆ ಎಂದು ಹೇಳಿದರು.

ದೇಶವೇ ಅಭಿವೃದ್ಧಿಯತ್ತ ಸಾಗುತ್ತಿದೆ. ಆದರೆ ನಮ್ಮ ರಾಜ್ಯ ಮಾತ್ರ ಹಿಂದೆ ಉಳಿಯುತ್ತಿದೆ. ಕರ್ನಾಟಕಕ್ಕೆ ತನ್ನದೆಯಾದ ವಿಶೇಷ ಇತಿಹಾಸವಿದೆ. ವಿಜಯನಗರ ಸಾಮ್ರಾಜ್ಯದ ಹಕ್ಕ-ಬುಕ್ಕ, ಕೃಷ್ಣದೇವರಾಯ, ಮೈಸೂರು ಮಹಾರಾಜ ಮನೆತನ ಅನೇಕ ರಾಜರು ಆಳ್ವಿಕೆ ನಡೆಸಿದ್ದಾರೆ. ಆದರೆ ಈಗ ಅತ್ಯಂತ ಭ್ರಷ್ಟ ಸರ್ಕಾರ ಆಡಳಿತ ನಡೆಸುತ್ತಿದೆ. ರಾಜ್ಯದಲ್ಲಿ ಹೊರ ಬೀಳುತ್ತಿರುವ ಹಗರಣಗಳಲ್ಲಿ ಆಡಳಿತ ಪಕ್ಷದ ನಾಯಕರು ಹೆಸರುಗಳು ಕೇಳಿಬರುತ್ತಿವೆ. ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುತ್ತಿಲ್ಲ ಎಂದು ದೂರಿದರು.

ನಮ್ಮ ಆಸೆ, ಅನುಭಗಳನ್ನು ಈಡೇರಿಸಲು ಬರುವಂತಹ ನವ ಸರ್ಕಾರದ ಕಡೆಗೆ ನಾವೆಲ್ಲರೂ ಒಲವು ತೋರಬೇಕಿದೆ. ಹೊಸ ಕರ್ನಾಟಕದ ಉದಯ ಯುವಕರ ಮೇಲಿದೆ ಎಂದು ತೇಜಸ್ವಿ ಸೂರ್ಯ ಅವರು ಸಂಸತ್‍ನಲ್ಲಿ ಕನ್ನಡದ ಕಹಳೆ ಮೊಳಗಿಸಿದರು.

Share This Article
Leave a Comment

Leave a Reply

Your email address will not be published. Required fields are marked *