ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯದಲ್ಲಿ ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಚುನಾವಣೆಗೂ ಮುನ್ನ ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿಗೆ ಆಘಾತ ಎದುರಾಗಿದೆ. ಬಿಜೆಪಿಯ ಸಚಿವರೊಬ್ಬರು ಹಾಗೂ ನಾಲ್ವರು ಶಾಸಕರು ಪಕ್ಷವನ್ನು ತೊರೆದು ಇಂದು ಸಮಾಜವಾದಿ ಪಕ್ಷ (ಎಸ್ಪಿ) ಸೇರಲಿದ್ದಾರೆ.
ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರು ರಾಜೀನಾಮೆ ಪತ್ರವನ್ನು ಪೋಸ್ಟ್ ಮಾಡಿದ್ದಾರೆ. ಈ ಕುರಿತು ಸ್ವತಃ ಅವರೇ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ. ಇವರ ಆಪ್ತರೆಂದೇ ಗುರುತಿಸಿಕೊಂಡಿರುವ ರೋಷನ್ ಲಾ ವರ್ಮಾ, ಬ್ರಿಜೇಶ್ ಪ್ರಜಾಪತಿ, ಭಾಗ್ವತಿ ಸಾಗರ್, ವಿನಯ್ ಶಂಕ್ಯಾ ಅವರು ಸಹ ರಾಜೀನಾಮೆ ನೀಡಿರುವುದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಕೊರೊನಾ ಪಾಸಿಟಿವ್
ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯದ ಪ್ರಭಾವಿ ನಾಯಕನಾಗಿರುವ ಸ್ವಾಮಿ ಪ್ರಸಾದ್ ಮೌರ್ಯ ಅವರು ಮಾಯಾವತಿ ನಾಯಕತ್ವದ ಬಿಎಸ್ಪಿ ತೊರೆದು 2016ರಲ್ಲಿ ಬಿಜೆಪಿ ಸೇರಿದ್ದರು. ಒಬಿಸಿ ಮತದಾರರನ್ನು ಸೆಳೆಯಲು ಹಾಗೂ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದ ವಿರುದ್ಧ ಪ್ರಬಲ ಪೈಪೋಟಿ ನೀಡುವ ಬಿಜೆಪಿ ಯೋಜನೆಗಳಿಗೆ ಮೌರ್ಯ ಪ್ರಮುಖ ವ್ಯಕ್ತಿಯಾಗಿದ್ದರು.
ಇತರೆ ಮೂವರು ನಾಯಕರು ಸಹ ಮೌರ್ಯ ಅವರ ಹಾದಿಯಲ್ಲೇ ನಡೆದಿದ್ದಾರೆ. ಬಿಎಸ್ಪಿಯಿಂದ ಬಿಜೆಪಿಗೆ ಈಗ ಸಮಾಜವಾದಿ ಪಕ್ಷಕ್ಕೆ ಸೇರಲಿದ್ದಾರೆ. ಇದನ್ನೂ ಓದಿ: ಕೊರೊನಾ ಸೋಂಕು ಏರಿಕೆ ಮಧ್ಯೆ ಸಿಹಿ ಸುದ್ದಿ – ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ
ಭಿನ್ನ ಸಿದ್ಧಾಂತರದ ಹೊರತಾಗಿಯೂ ಯೋಗಿ ಆದಿತ್ಯನಾಥ್ ಸಂಪುಟದಲ್ಲಿ ನಾನು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದ್ದೇನೆ. ಆದರೆ ದಲಿತರು, ಒಬಿಸಿಗಳು, ರೈತರು, ನಿರುದ್ಯೋಗಿಗಳು ಮತ್ತು ಸಣ್ಣ ಉದ್ಯಮಿಗಳ ಮೇಲೆ ಆಗುತ್ತಿರುವ ತೀವ್ರ ದಬ್ಬಾಳಿಕೆಯಿಂದಾಗಿ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಸಚಿವ ಮೌರ್ಯ ಸ್ಪಷ್ಟಪಡಿಸಿದ್ದಾರೆ.
ನನ್ನ ನಿರ್ಗಮನದಿಂದ ಬಿಜೆಪಿ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದು 2022ರ ವಿಧಾನಸಭಾ ಚುನಾವಣೆಯ ನಂತರ ಸ್ಪಷ್ಟವಾಗುತ್ತದೆ ಎಂದು ಸಹ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರತಿಯೊಬ್ಬರಿಗೂ ಓಮಿಕ್ರಾನ್ ಹರಡುತ್ತೆ, ಬೂಸ್ಟರ್ನಿಂದಲೂ ಅದನ್ನು ತಡೆಯಲು ಸಾಧ್ಯವಿಲ್ಲ: ICMR ವೈದ್ಯ
ಮೌರ್ಯ ಅವರೊಂದಿಗೆ ಇರುವ ಫೋಟೋವನ್ನು ಟ್ವಿಟರ್ನಲ್ಲಿ ಹಚಿಕೊಂಡಿರುವ ಅಖಿಲೇಶ್ ಯಾದವ್, ಮೌರ್ಯ ಅವರಿಗೆ ಹಾಗೂ ಅವರ ಬೆಂಬಲಿಗರಿಗೆ ಸಮಾಜವಾದಿ ಪಕ್ಷಕ್ಕೆ ಆತ್ಮೀಯ ಸ್ವಾಗತ ಎಂದು ಪೋಸ್ಟ್ ಮಾಡಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧದ ಅಸಮಾಧಾನವು ಬಿಜೆಪಿಗೆ ಬಗೆಹರಿಸಲಾಗದ ಸಮಸ್ಯೆ ಎಂಬ ಅಭಿಪ್ರಾಯವನ್ನು ನಿರ್ಗಮನಗಳು ಬಲಪಡಿಸುತ್ತಿವೆ. ಎರಡು ತಿಂಗಳ ಹಿಂದೆ ಯೋಗಿ ಆದಿತ್ಯನಾಥ್ ವಿರುದ್ಧ ಅಮಿತ್ ಶಾಗೆ ಮೌರ್ಯ ದೂರು ನೀಡಿದ್ದರು. ಆದರೆ ಅದರಿಂದ ಏನೂ ಆಗಿಲ್ಲ ಎಂದು ವರದಿಯಾಗಿದೆ.