ಮುಂಬೈ: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಏಕದಿನ ತಂಡಕ್ಕೆ ಕನ್ನಡಿಗ ಕೆ.ಎಲ್ ರಾಹುಲ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಟೀಂ ಇಂಡಿಯಾ ಭವಿಷ್ಯದ ಖಾಯಂ ನಾಯಕತ್ವಕ್ಕೆ ರಾಹುಲ್ ಸಜ್ಜಾಗುತ್ತಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಗಾಯಳುವಾಗಿರುವುದರಿಂದಾಗಿ ರಾಹುಲ್ರನ್ನು ಹಂಗಾಮಿ ನಾಯಕರನ್ನಾಗಿ ಆಯ್ಕೆ ಸಮಿತಿ ಆಯ್ಕೆ ಮಾಡಿದೆ. ಈ ಮೂಲಕ ರಾಹುಲ್ರನ್ನು ರೋಹಿತ್ ಬಳಿಕ ನಾಯಕತ್ವದಲ್ಲಿ ಕೂರಿಸಲು ಪ್ಲಾನ್ ನಡಿಯುತ್ತಿದೆ. ಇದನ್ನೂ ಓದಿ: ದಕ್ಷಿಣ ಆಫ್ರಿಕಾದಲ್ಲಿ ಅದ್ದೂರಿಯಾಗಿ ಹೊಸ ವರ್ಷ ಆಚರಿಸಿದ ವಿರಾಟ್ ಕೊಹ್ಲಿ ದಂಪತಿ
ರಾಹುಲ್ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಲಯದಲ್ಲಿದ್ದು, ಮೊದಲ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಇದೀಗ ಏಕದಿನ ತಂಡದ ನಾಯಕತ್ವ ಕೂಡ ಒಲಿದು ಬಂದಿದೆ. ಈ ಮೂಲಕ ರಾಹುಲ್ ಟೀಂ ಇಂಡಿಯಾದ ಸಾರಥ್ಯ ಹಿಡಿದ 5ನೇ ಕನ್ನಡಿಗ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಈ ಹಿಂದೆ ಕನ್ನಡಿಗರಾದ ಜಿಆರ್ ವಿಶ್ವನಾಥ್, ಸಯ್ಯದ್ ಕಿರ್ಮಾನಿ, ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಟೀಂ ಇಂಡಿಯಾದ ಸಾರಥ್ಯ ವಹಿಸಿದ್ದರು. ಜಿಆರ್ ವಿಶ್ವನಾಥ್, ಸಯ್ಯದ್ ಕಿರ್ಮಾನಿ ಮತ್ತು ಅನಿಲ್ ಕುಂಬ್ಳೆ ಏಕೈಕ ಏಕದಿನ ಪಂದ್ಯದಲ್ಲಿ ನಾಯಕರಾಗಿದ್ದರೆ, ರಾಹುಲ್ ದ್ರಾವಿಡ್ ಮಾತ್ರ 2005 ರಿಂದ 2007ರ ವರೆಗೆ ಪೂರ್ಣ ಪ್ರಮಾಣದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದರು. ಇದನ್ನೂ ಓದಿ: ಕಿರಿಯರ ಏಷ್ಯಾಕಪ್, 9 ವಿಕೆಟ್ಗಳ ಭರ್ಜರಿ ಜಯ – ಭಾರತ ಚಾಂಪಿಯನ್
ಟೀಂ ಇಂಡಿಯಾ ಟೆಸ್ಟ್ ತಂಡವನ್ನು 1980ರಲ್ಲಿ ಜಿಆರ್ ವಿಶ್ವನಾಥ್, 2005 ರಿಂದ 2007ರವರೆಗೆ ರಾಹುಲ್ ದ್ರಾವಿಡ್ ಮತ್ತು 2007 ರಿಂದ 2008ರ ವರೆಗೆ ಅನಿಲ್ ಕುಂಬ್ಳೆ ಮುನ್ನಡೆಸಿದ್ದರು. ಆದರೆ ಟಿ20 ತಂಡವನ್ನು ಈವರೆಗೆ ಯಾರೊಬ್ಬ ಕನ್ನಡಿಗರು ಕೂಡ ಮುನ್ನಡೆಸಿಲ್ಲ. ಇದನ್ನೂ ಓದಿ: ಟೀಂ ಇಂಡಿಯಾ ಪರ ನೂತನ ಮೈಲಿಗಲ್ಲು ನೆಟ್ಟ ಶಮಿ, ಪಂತ್ ಸಂಭ್ರಮ
ಈ ಬಾರಿ ಟೀಂ ಇಂಡಿಯಾದಲ್ಲಿ ವಿಶೇಷ ಎಂದರೆ ಕೋಚ್ ಹಾಗೂ ನಾಯಕರಿಬ್ಬರೂ ಕೂಡ ಕನ್ನಡಿಗರಾಗಿದ್ದಾರೆ. ರಾಹುಲ್ ದ್ರಾವಿಡ್ ಕೋಚ್ ಆಗಿದ್ದರೆ, ಅವರ ಶಿಷ್ಯ ಕೆ.ಎಲ್ ರಾಹುಲ್ ನಾಯಕರಾಗಿ ಇದೀಗ ಒಟ್ಟಿಗೆ ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.