ನವದೆಹಲಿ: ಬಾಂಗ್ಲಾದೇಶದ (Bangladesh) ಹೊಸ ಪ್ರಧಾನ ಮಂತ್ರಿ ತಾರಿಕ್ ರೆಹಮಾನ್ (Tarique Rahman) ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಭಾರತವು ತನ್ನ ವೀಸಾ ಸೇವೆಗಳನ್ನು ಸಂಪೂರ್ಣವಾಗಿ ಪುನಾರಂಭಿಸುವ ಚಿಂತನೆ ನಡೆಸುತ್ತಿದೆ.
ಭಾರತದ ಹಿರಿಯ ಕಾನ್ಸುಲರ್ ಅಧಿಕಾರಿ ಅನಿರುದ್ಧ ದಾಸ್ ಈ ಬಗ್ಗೆ ಮಾತನಾಡಿದ್ದು, ವೈದ್ಯಕೀಯ ಮತ್ತು ಡಬಲ್-ಎಂಟ್ರಿ ವೀಸಾಗಳನ್ನು ಪ್ರಸ್ತುತ ನೀಡಲಾಗುತ್ತಿದ್ದು, ಪ್ರಯಾಣ ವೀಸಾ ಸೇರಿದಂತೆ ಇತರ ವರ್ಗಗಳನ್ನು ಸಹ ಶೀಘ್ರದಲ್ಲೇ ಪುನಃ ಆರಂಭಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿವೆ ಎಂದು ಹೇಳಿದ್ದಾರೆ. ಎರಡೂ ದೇಶಗಳ ನಡುವಿನ ಸಂಬಂಧಗಳು ಪರಸ್ಪರ ಗೌರವ ಮತ್ತು ಸಮಾನ ಘನತೆಯ ಮೇಲೆ ನಿಂತಿವೆ ಎಂದು ಒತ್ತಿ ಹೇಳಿದರು. ಇದನ್ನೂ ಓದಿ: ಬಾಂಗ್ಲಾ ಪ್ರಧಾನಿಯಾಗಿ ತಾರೀಖ್ ರೆಹಮಾನ್ ಪ್ರಮಾಣವಚನ – ಹಿಂದೂ ಸಂಸದನಿಗೂ ಮಂತ್ರಿಸ್ಥಾನ
ಈ ಹಿಂದೆ ವಿದ್ಯಾರ್ಥಿ ನಾಯಕ ಶರೀಫ್ ಒಸ್ಮಾನ್ ಹಾದಿ ಸಾವಿನ ನಂತರ ಬಾಂಗ್ಲಾದೇಶದಲ್ಲಿ ನಡೆದ ಪ್ರತಿಭಟನೆಗಳು ಕೆಲವೊಂದು ಭಾರತ ವಿರೋಧಿ ಧೋರಣೆಯನ್ನು ತಾಳಿದ್ದರಿಂದ ಭಾರತವು ಡಿಸೆಂಬರ್ 2025ರಿಂದ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿತ್ತು. ಈಗ ಹೊಸ ಸರ್ಕಾರದ ಅಡಿಯಲ್ಲಿ ಸಂಬಂಧಗಳು ಸುಧಾರಿಸುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ.
ಈ ನಡುವೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಾರಿಕ್ ರೆಹಮಾನ್ ಅವರಿಗೆ ಔಪಚಾರಿಕ ಆಹ್ವಾನ ನೀಡಿದ್ದಾರೆ. ರೆಹಮಾನ್ ಅವರ ಪ್ರಮಾಣ ವಚನ ಸಮಾರಂಭದ ನಂತರ ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ ಅವರು ಢಾಕಾಕ್ಕೆ ಭೇಟಿ ನೀಡಿ ಮೋದಿ ಅವರ ಪತ್ರವನ್ನು ವಿನಿಮಯಿಸಿದ್ದರು. ಈ ಪತ್ರದಲ್ಲಿ ರೆಹಮಾನ್ ಅವರನ್ನು ಸೂಕ್ತ ಸಮಯದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಲಾಗಿದೆ. ಇದನ್ನೂ ಓದಿ: ಫೆ.17 ರಂದು ಬಾಂಗ್ಲಾ ನೂತನ ಪ್ರಧಾನಿಯಾಗಿ ತಾರಿಕ್ ರೆಹಮಾನ್ ಪ್ರಮಾಣ ಸ್ವೀಕಾರ – ಮೋದಿಗೆ ಆಹ್ವಾನ

