ಬೆಂಗಳೂರು: ಸೆಲ್ಫಿ ಗೀಳಿಗೆ ಒಂದೇ ಕುಟುಂಬದ ನಾಲ್ವರು ನೀರಿನಲ್ಲಿ ಮುಳುಗಿ ಸಾವನಪ್ಪಿದ ಘಟನೆ ಕರ್ನಾಟಕ ತಮಿಳುನಾಡು ಗಡಿಯ ಪಂಬರ್ ಅಣೆಕಟ್ಟೆಯಲ್ಲಿ ನಡೆದಿದೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಉತ್ತನಾಗಿರಿ ನಿವಾಸಿಗಳಾದ ಸಂತೋಷ್ (14) ಸ್ನೇಹಾ (19) ಕನೋಧಾ (18) ಹಾಗೂ ನೀವಿತಾ (20) ಮೃತ ದುರ್ದೈವಿಗಳು. ಕುಟುಂಬದ ಜೊತೆಗೆ ಪ್ರವಾಸಕ್ಕೆ ಹೋಗಿದ್ದಾಗ ಘಟನೆ ನಡೆದಿದೆ. ಮೃತರ ಕುಟುಂಬದ ರೋಧನ ಮುಗಿಲು ಮುಟ್ಟಿದೆ.
ನೀವಿತಾ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ದಸರಾ ಹಬ್ಬದ ರಜೆಯ ಹಿನ್ನೆಲೆಯಲ್ಲಿ ಉತ್ತನಾಗಿರಿಗೆ ತೆರಳಿದ್ದರು. ಈ ವೇಳೆ ಮನೆಯವರೆಲ್ಲ ಒಂದು ದಿನದ ಪ್ರವಾಸಕ್ಕೆಂದು ಪಂಬರ್ ಅಣೆಕಟ್ಟೆಗೆ ಹೋಗಿದ್ದರು. ನೀವಿತಾ ಸೇರಿದಂತೆ ನಾಲ್ವರು ಅಣೆಕಟ್ಟೆಯ ಹಿನ್ನೀರಿನಲ್ಲಿ ತಡದ ಸೆಲ್ಫಿ ತೆಗೆದುಕೊಳ್ಳತ್ತಿದ್ದಾಗ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ.
ಕರ್ನಾಟಕದ ದಕ್ಷಿಣ ಪಿನಾಕಿನಿ ನದಿಗೆ ತಮಿಳುನಾಡಿನಲ್ಲಿ ಅಣೆಕಟ್ಟು ಕಟ್ಟಲಾಗಿದೆ. ಈ ನೀರನ್ನು ಕೃಷಿ ಉಪಯೋಗಕ್ಕೆ ಬಳಸುತ್ತಾರೆ. ಬೆಂಗಳೂರು ಸೇರಿದಂತೆ ಪಾಂಬರ್ ಅಣೆಕಟ್ಟೆ ಪಾತ್ರದಲ್ಲಿ ಕಳೆದ 15 ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ಅಣೆಕಟ್ಟೆಯ ನೀರಿನ ಮಟ್ಟ ಏರಿಕೆಯಾಗಿದೆ. ಈ ವಿಚಾರ ತಿಳಿಯದೆ ನೀರಿಗಿಳಿದ ಪರಿಣಾಮ ನಾಲ್ವರು ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾರೆ.
ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಅಗ್ನಿಶಾಮಕ ಸಿಬ್ಬಂದಿಯ ಸಹಾಯದಿಂದ ಮೃತ ದೇಹಗಳನ್ನು ಹೊರ ತೆಗೆದರು. ಆಗ ಮೃತ ದೇಹಗಳನ್ನು ತಬ್ಬಿಕೊಂಡು ಕುಟಂಬಸ್ಥರು ಕಣ್ಣೀರಿಟ್ಟಿದ್ದಾರೆ.