ಬಳ್ಳಾರಿ: ಈ ಗ್ರಾಮಸ್ಥರೆಲ್ಲಾ ಬೆಳ್ಳಂಬೆಳಿಗ್ಗೆ ಚೊಂಬು ಹಿಡಿದುಕೊಂಡು ಟಾಯ್ಲೆಟ್ಗೆ ಬಯಲಿಗೆ ಹೋಗ್ತಿದ್ರು. ಆದರೆ ಈಗ ಒಬ್ರು ಸೀಟಿ ಹೊಡಿತಾ ಎಲ್ಲರನ್ನೂ ಓಡಿಸ್ತಿದ್ದಾರೆ.
ಬಯಲು ಶೌಚಾಲಯದ ವಿರುದ್ಧ ಹೂವಿನಹಡಗಲಿ ತಹಶೀಲ್ದಾರ್ ರಾಘವೇಂದ್ರ ಅವರು ಅಭಿಯಾನ ಆರಂಭಿಸಿದ್ದಾರೆ. ನಸುಕಿನ ಜಾವವೇ ತಂಡ ಕಟ್ಟಿಕೊಂಡು ಹಳ್ಳಿ ಹಳ್ಳಿಗಳಿಗೆ ತೆರಳಿ ಸೀಟಿ ಸದ್ದು ಮಾಡುತ್ತಾ ಎಲ್ಲರನ್ನು ಎಚ್ಚರಿಸುತ್ತಿದ್ದಾರೆ.
ಇಷ್ಟೇ ಅಲ್ಲ ಬಯಲು ಶೌಚಾಲಯ ತ್ಯಜಿಸದಿದ್ದರೆ ಪಡಿತರ ಕಡಿತ ಮಾಡುವ ಎಚ್ಚರಿಕೆ ನೀಡಿದ್ದಾರೆ. ಕಳೆದ ಎರಡು ದಿನಗಳಿಂದ 25ಕ್ಕೂ ಹೆಚ್ಚು ಹಳ್ಳಿಗಳಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ವಿಷಲ್ ಅಭಿಯಾನ್ ನಡೆಸುವ ಮೂಲಕ ಬಯಲು ಶೌಚ ಮುಕ್ತ ಗ್ರಾಮದ ಬಗ್ಗೆ ಜಾಗೃತಿ ಮಾಡುತ್ತಿದ್ದಾರೆ. ವಾರದೊಳಗೆ ಶೌಚಾಲಯ ನಿರ್ಮಿಸಿಕೊಳ್ಳುವ ವಾಗ್ದಾನ ಸಹ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ತಹಶೀಲ್ದಾರ್ ಸೀಟಿ ಸದ್ದು ಮಾತ್ರ ಬಯಲು ಶೌಚಾಲಯ ಮುಕ್ತ ತಾಲೂಕಿಗೆ ನಾಂದಿ ಹಾಡುತ್ತಿದೆ.