ಹಾನಗಲ್ಲ ಕುಮಾರ ಶಿವಯೋಗಿಗಳ ಜೀವನ ಚರಿತ್ರೆಯನ್ನು ಆಧರಿಸಿದ ‘ವಿರಾಟಪುರ ವಿರಾಗಿ’ ಸಿನಿಮಾದ ಧ್ವನಿ ಸುರುಳಿ ಬಿಡುಗಡೆ ಸಮಾರಂಭ ಮತ್ತು ರಥಯಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮ ಮೈಸೂರಿನಲ್ಲಿ ನಡೆಯಿತು. ಮೈಸೂರು ಸುತ್ತೂರಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ, ನಿಂಬಾಳ ಶಾಂತಲಿಂಗೇಶ್ವರ ವಿರಕ್ತಮಠದ ಜಡೆಯ ಶಾಂತಲಿಂಗೇಶ್ವರ ಸ್ವಾಮಿಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮಗಳು ನಡೆದವು. ಗೊ.ರು ಚನ್ನಬಸಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ದೇಶಕ ಲಿಂಗದೇವರು, ಹಲವು ಮಠಗಳ ಮಠಾಧೀಶರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಆರು ರಥಗಳು, ಹದಿಮೂರು ದಿನಗಳ ಕಾಲ, ಏಳು ಸಾವಿರ ಕಿಲೋ ಮೀಟರ್ ಪಯಣವನ್ನು ಮಾಡಲಿವೆ. ಈ ರಥಯಾತ್ರೆಯಲ್ಲಿ ಒಟ್ಟು 360 ಸಭೆಗಳನ್ನೂ ಆಯೋಜನೆ ಮಾಡಲಾಗಿದ್ದು, ಒಂದು ಕೋಟಿ ಜನರನ್ನು ಮುಟ್ಟುವ ಗುರಿಯನ್ನು ಹೊಂದಲಾಗಿದೆ ಎಂದು ಲಿಂಗದೇವರು ತಿಳಿಸಿದ್ದಾರೆ. ಡಿಸೆಂಬರ್ 20ರಂದು ಶುರುವಾಗಲಿರುವ ಈ ರಥಯಾತ್ರೆಯು ಜನವರಿ 1 ರಂದು ಗದಗನಲ್ಲಿ ಮುಕ್ತಾಯಗೊಳ್ಳಲಿದೆ.
ಸಿನಿಮಾ ಕುರಿತು ಮತ್ತೋರ್ವ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಗಿರೀಶ್ ಕಾಸರವಳ್ಳಿ, ‘ಕುಮಾರ ಶಿವಯೋಗಿಗಳು ಒಂದು ದಂತಕಥೆ. ಒಬ್ಬ ಮನುಷ್ಯ ತನ್ನ ಜೀವಿತಾಧಿಯಲ್ಲಿ ಏನೇನು ಮಾಡಲು ಅಸಾಧ್ಯವೋ ಅದನ್ನೆಲ್ಲಾ ಸಾಧ್ಯ ಮಾಡಿದ್ದಾರೆ. ಗಾಂಧೀಜಿಯವರು ಭಾರತಕ್ಕೆ ಬರುವ ಕೆಲವು ವರ್ಷಗಳ ಮೊದಲೇ ಗಾಂಧೀಜಿ ಅವರು ಆದರ್ಶ ಅಂದುಕೊಂಡಿದ್ದ ಬಹುತೇಕ ಕೆಲಸಗಳನ್ನು ಮಾಡಿ ತೋರಿಸಿದವರು ಹಾನಗಲ್ಲ ಗುರುಕುಮಾರ ಶಿವಯೋಗಿಗಳು’ ಎಂದು ಮಾತನಾಡಿದ್ದಾರೆ.
ಕನ್ನಡದ ಖ್ಯಾತ ನಟ ಸುಚೇಂದ್ರ ಪ್ರಸಾದ್ ಹಾನಗಲ್ ಕುಮಾರ ಶ್ರೀಗಳ ಪಾತ್ರವನ್ನು ನಿರ್ವಹಿಸಿದ್ದು, ಕರ್ನಾಟಕದ ನಾನಾ ಮಠಗಳಿ ಮಠಾಧೀಶರು ಕೂಡ ಪಾತ್ರ ಮಾಡಿರುವುದು ವಿಶೇಷ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬಂದಿದ್ದು, ಅಶೋಕ್ ವಿ ರಾಮನ್ ಅವರ ಸಿನಿಮಾಟೋಗ್ರಫಿ ಹಾಗೂ ಎಸ್. ಗುಣಶೇಖರನ್ ಅವರು ಸಂಕಲನ ಚಿತ್ರಕ್ಕಿದೆ. ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದ್ದು ಮೆಚ್ಚುಗೆ ವ್ಯಕ್ತವಾಗಿದೆ.