ಈಗಂತೂ ಟೈಟಲ್ಲುಗಳಿಂದಲೇ ಕ್ರೇಜ್ ಹುಟ್ಟು ಹಾಕೋ ಜಮಾನ ಶುರುವಾಗಿದೆ. ಒಂದು ಹಂತದಲ್ಲಿ ಚಿತ್ರ ವಿಚಿತ್ರ ಶೀರ್ಷಿಕೆಗಳ ಟ್ರೆಂಡ್ ಒಂದು ಹುಟ್ಟಿಕೊಂಡಿತ್ತು. ಆದರೀಗ ಅರ್ಥಪೂರ್ಣ ಟೈಟಲ್ ಗಳ ಪರ್ವ ಹುಟ್ಟಿಕೊಂಡಿದೆ. ಹೊಸಾ ವರ್ಷಾರಂಭದಲ್ಲಿಯೇ ಹೊಸಾ ಆವೇಗಕ್ಕೆ ಕಾರಣವಾಗಿರೋ ಅನುಕ್ತ ಕೂಡಾ ಅದೇ ಸಾಲಿನಲ್ಲಿ ಬಿಡುಗಡೆಗೆ ತಯಾರಾಗಿರುವ ಚಿತ್ರ.
ಅಶ್ವತ್ಥ್ ಸ್ಯಾಮುಯಲ್ ನಿರ್ದೇಶನ ಮಾಡಿರೋ ಈ ಚಿತ್ರವನ್ನು ಕರಾವಳಿಯವರೇ ಆದ ಹರೀಶ್ ಬಂಗೇರಾ ನಿರ್ಮಾಣ ಮಾಡಿದ್ದಾರೆ. ಕಾರ್ತಿಕ್ ಅತ್ತಾವರ್, ಸಂತೋಷ್ ಕುಮಾರ್ ಕೊಂಚಾಡಿ ಜೊತೆ ಸೇರಿ ಕಥೆ ಬರೆದಿದ್ದಾರೆ. ಯಶೋಧೆ ಧಾರಾವಾಹಿ ಖ್ಯಾತಿಯ ಕಾರ್ತಿಕ್ ಅವರೇ ಈ ಸಿನಿಮಾ ನಾಯಕನಾಗಿಯೂ ನಟಿಸಿದ್ದಾರೆ. ಸಂಗೀತಾ ಭಟ್ ನಾಯಕಿಯಾಗಿ ನಟನೆಗೆ ಅವಕಾಶವಿರೋ ಸವಾಲಿನಂಥಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಹಾಗಾದರೆ ಅನುಕ್ತ ಅಂದರೇನು ಎಂಬ ಪ್ರಶ್ನೆ ಕಾಡುತ್ತದೆ. ಇದಕ್ಕೆ ಹೇಳಲಾಗದ್ದು ಎಂಬಂಥಾ ಉತ್ತರವೂ ಸಿಗುತ್ತದೆ. ಈ ಬಗ್ಗೆ ಚಿತ್ರದ ನಿರ್ದೇಶಕರಾದ ಅಶ್ವತ್ಥ್ ಸ್ಯಾಮುಯಲ್ ಒಂದಷ್ಟು ವಿಚಾರಗಳನ್ನೂ ಹಂಚಿಕೊಂಡಿದ್ದಾರೆ. ಅವರು ಹೇಳೋ ಪ್ರಕಾರವಾಗಿ ನೋಡಿದರೆ, ಅನುಕ್ತ ಅಂದರೆ ಕಣ್ಣಿಗೆ ಕಾಣಿಸಿದರೂ ಮಾತಲ್ಲಿ ಹೇಳಲಾರದ ಸತ್ಯವೇ ಅನುಕ್ತ.
ಹಾಗೆ ಕಣ್ಣಿಗೆ ಕಂಡೂ ಮಾತಲ್ಲಿ ಹೇಳಲಾಗದ, ನೋಡಿಯಷ್ಟೇ ಅನುಭವಿಸಬೇಕಾದ ಅದೆಷ್ಟೋ ವಿಚಾರಗಳು ಈ ಚಿತ್ರದಲ್ಲಿವೆಯಂತೆ. ಕರಾವಳಿಯ ಸಮೃದ್ಧ ಬದುಕಿನ ಅನಾವರಣದ ಜೊತೆಗೇ ಹೊಸಾ ಥರದ ಕ್ರೈಂ ಥ್ರಿಲ್ಲರ್ ಕಥೆ ಹೇಳ ಹೊರಟಿರೋ ಈ ಸಿನಿಮಾ ಇಷ್ಟರಲ್ಲಿಯೇ ಬಿಡುಗಡೆಯಾಗಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv