ಬೆಂಗಳೂರು: ಸರ್ವಜನಾಂಗದ ಶಾಂತಿಯ ಬೀಡಾಗಿರುವ ಭಾರತ ವಿದೇಶಿಗರ ನೆಚ್ಚಿನ ನಾಡು. ಭಾರತದ ಸಂಸ್ಕೃತಿ, ಸಂಪ್ರದಾಯಗಳು ಎಂತವರನ್ನೂ ಕೂಡ ಆಕರ್ಷಿಸುತ್ತದೆ. ಇದೇ ಆಕರ್ಷಣೆಗೊಳಗಾಗಿ ರಷ್ಯಾದ ಮಹಿಳೆಯೊಬ್ಬಳು ಭಾರತಕ್ಕೆ ಬಂದಿದ್ದು, ಭಾರತದ ದೇಗುಲಗಳಿಗೆ ಭೇಟಿ ನೀಡಿ, ಇಲ್ಲಿನ ಸಂಪ್ರದಾಯ, ಸಂಸ್ಕೃತಿಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ.
ಇವತ್ತು ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಗಾಳಿ ಅಂಜನೇಯ ದೇವಸ್ಥಾನದಲ್ಲಿ ರಷ್ಯಾದ ಅನಾನ್ ವಿಶೇಷ ಪೂಜೆಯನ್ನ ಸಲ್ಲಿಸಿ, ದೇವಸ್ಥಾನದಲ್ಲಿದ್ದ ಭಕ್ತರ ಗಮನ ಸೆಳೆದರು.
ಕಳೆದ ಕೆಲ ತಿಂಗಳುಗಳಿಂದ ಅನಾನ್ ಭಾರತದ ಪ್ರವಾಸ ಕೈಗೊಂಡಿದ್ದು, ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡಿ, ಆ ದೇಗುಲಗಳ ಮಹತ್ವ ಇತಿಹಾಸದ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ಇವತ್ತು ಅನಾನ್ ಮೈಸೂರು ರಸ್ತೆಯಲ್ಲಿರುವ ಗಾಳಿ ಅಂಜನೇಯನ ದೇವಸ್ಥಾನಕ್ಕೆ ಬಂದಾಗ ಅಲ್ಲಿನ ಅರ್ಚಕರು, ಸಂಪ್ರದಾಯದಂತೆ ಪೂಜೆ ಮಾಡಿದ ಬಳಿಕ ಹಣೆಗೆ ತಿಲಕ ಹಚ್ಚಿ, ಹೂವಿನ ಹಾರ ಹಾಕಿ, ದೇವಸ್ಥಾನದ ಪಾರಂಪರಿಕ ಇತಿಹಾಸವನ್ನ ವಿವರಿಸಿದರು.
ಭಾರತದ ದೇವಾಲಯಗಳು ಮತ್ತು ಇಲ್ಲಿನ ಸಂಸ್ಕೃತಿಗಳು ನನ್ನನ್ನು ಆಕರ್ಷಿಸಿದೆ. ಈ ಹಿನ್ನೆಲೆಯಲ್ಲಿ ದೇವಾಲಯದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳುತ್ತಿದ್ದೇನೆ ಎಂದು ಅವರು ಪ್ರತಿಕ್ರಿಯಿಸಿದರು.