ಬಿಗ್ಬಾಸ್ ವಿನ್ನರ್ ಪ್ರಥಮ್ ಅಭಿನಯದ ದೇವ್ರಂಥಾ ಮನುಷ್ಯ ಈಗಾಗಲೇ ತೆರೆಗೆ ಬಂದಿದೆ. ಅದಾಗಲೇ ಪ್ರಥಮ್ ಮತ್ತೊಂದಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಅವರ ಲಿಸ್ಟಿನಲ್ಲಿರೋ ಪ್ರಮುಖ ಚಿತ್ರ ಎಂಎಲ್ಎ.
ಮಹಾ ಮಾತುಗಾರ, ಚುರುಕು ವ್ಯಕ್ತಿತ್ವದ ಪ್ರಥಮ್ ಸಾಮಾನ್ಯ ವ್ಯಕ್ತಿಗಳಿಂದ ಹಿಡಿದು ದೇವೇಗೌಡ, ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯ ಅವರ ತನಕ ಎಲ್ಲರನ್ನೂ ಬಲೆಗೆ ಕೆಡವಿಕೊಂಡಿದ್ದರು. ಕನ್ನಡ ಚಿತ್ರರಂಗದಲ್ಲಿ ಅಷ್ಟು ಸುಲಭಕ್ಕೆ ಯಾರ ಕೈ ಸಿಗದವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ದರ್ಶನ್ ಅವರ ಮನಗೆಲ್ಲಬೇಕೆಂದರೆ, ವರ್ಷಾನುಗಟ್ಟಲೆ ವ್ರತವನ್ನೇ ಮಾಡಬೇಕು ಅನ್ನೋ ಮನಸ್ಥಿತಿ ಸದ್ಯಕ್ಕಿದೆ. ಆದರೆ ಚಾಲಾಕಿ ಪ್ರಥಮ್ ದರ್ಶನ್ ಅವರನ್ನೂ ಭೇಟಿಯಾಗಿ, ತನ್ನ ಹೆಗಲ ಮೇಲೆ ಅವರ ಕೈ ಇರಿಸಿಕೊಂಡು ಬಂದಿದ್ದಾರೆ. ಇದನ್ನೂ ಓದಿ: ರಾಜಕೀಯ ಪ್ರವೇಶದ ಬಗ್ಗೆ ಬಿಗ್ಬಾಸ್ ಪ್ರಥಮ್ ನ ಮನದಾಳದ ಮಾತು
ಇತ್ತೀಚೆಗೆ ದರ್ಶನ್ ಅವರ ಮೈಸೂರಿನಲ್ಲಿ ಯಜಮಾನ ಚಿತ್ರದ ಶೂಟಿಂಗಿನಲ್ಲಿ ತೊಡಗಿಕೊಂಡಿದ್ದಾಗ ಪ್ರಥಮ್ ರನ್ನು ಕರೆಸಿಕೊಂಡಿದ್ದರಂತೆ. ಈ ಸಂದರ್ಭದಲ್ಲಿ ತನ್ನ ಎಂಎಲ್ಎ ಸಿನಿಮಾದ ಆಡಿಯೋ ಬಿಡುಗಡೆ ನೀವೇ ಮಾಡಬೇಕು ಎನ್ನುವ ಪ್ರಥಮ್ ರ ಪ್ರೀತಿಯ ಅಹವಾಲಿಗೆ ಚಾಲೆಂಜಿಂಗ್ ಸ್ಟಾರ್ ಎಸ್ ಅಂದಿದ್ದಾರೆ. ‘ಓಕೆ ಬಿಡು ಚಿನ್ನಾ ನಿನ್ನ ಎಂಎಲ್ಎ ಸಿನಿಮಾ ಆಡಿಯೋ ರಿಲೀಸ್ ಗೆ ಬಂದೇ ಬರ್ತೀನಿ. ನಿನಗೆ ಒಳ್ಳೇದಾಗ್ಲಿ’ ಅಂತಾ ಆಶೀರ್ವಾದ ಮಾಡಿ ಕಳಿಸಿದ್ದಾರೆ. ಅಂದ ಹಾಗೆ ವೆಂಕಟೇಶ್ ರೆಡ್ಡಿ ನಿರ್ಮಾಣದಲ್ಲಿ, ಮಂಜು ಮೌರ್ಯ ನಿರ್ದೇಶನದ ಎಂಎಲ್ಎ ಸಿನಿಮಾದ ಆಡಿಯೋ ಹಕ್ಕನ್ನು ಪುನೀತ್ ರಾಜ್ ಕುಮಾರ್ ಅವರ ಪಿಆರ್ಕೆ ಸಂಸ್ಥೆ ಖರೀದಿಸುವುದು ಪಕ್ಕಾ ಆಗಿದೆ. ಇದನ್ನೂ ಓದಿ: ಎಂಎಲ್ಎ ಆಗಲು ಹೊರಟಿದ್ದಾರೆ ಒಳ್ಳೆ ಹುಡುಗ ಪ್ರಥಮ್!
ಈ ಚಿತ್ರದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿ ಹೆಚ್.ಎಂ. ರೇವಣ್ಣ ಪ್ರಥಮ್ ಎಂಎಲ್ಎ ಚಿತ್ರದಲ್ಲಿ ಪ್ರಮುಖವಾದೊಂದು ಪಾತ್ರ ನಿರ್ವಹಿಸಿದ್ದಾರೆ. ಅದಕ್ಕಾಗಿ ತಮ್ಮ ಒತ್ತಡದ ಕೆಲಸ ಕಾರ್ಯಗಳ ನಡುವೆಯೂ ತಮ್ಮ ಭಾಗದ ಚಿತ್ರೀಕರಣವನ್ನು ರೇವಣ್ಣ ಅವರು ಮುಗಿಸಿಕೊಟ್ಟಿದ್ದರು. ಒಂದೊಳ್ಳೆ ಸಂದೇಶವನ್ನು, ಆಶಯವನ್ನು ಯುವ ಜನಾಂಗಕ್ಕೆ ರವಾನಿಸೋ ಸದುದ್ದೇಶ ಹೊಂದಿರೋ ಈ ಚಿತ್ರದ ಕಥೆಯನ್ನು ಮೆಚ್ಚಿಕೊಂಡು ರೇವಣ್ಣನವರು ಮುಖ್ಯಮಂತ್ರಿಯಾಗಿ ನಟಿಸಲು ಒಪ್ಪಿಕೊಂಡಿದ್ದಲ್ಲದೆ, ಚುನಾವಣೆ ಬಂದಿರೋದರಿಂದ ಕೂರಲು ನಿಲ್ಲಲೂ ಪುರುಸೊತ್ತಿಲ್ಲದಷ್ಟು ಬ್ಯುಸಿಯಾಗಿರೋ ರೇವಣ್ಣ ಈ ಚಿತ್ರಕ್ಕಾಗಿ ನಾಲ್ಕು ದಿನಗಳ ಡೇಟ್ ಕೊಟ್ಟಿದ್ದರು. ಈಗ ದರ್ಶನ್ ಮಾತ್ರವಲ್ಲದೆ ಆಡಿಯೋ ಹಕ್ಕು ಪಡೆಯುವ ಮೂಲಕ ಪುನೀತ್ ರಾಜ್ ಕುಮಾರ್ ಕೂಡಾ ಪ್ರಥಮ್ ಕೈ ಹಿಡಿದಿದ್ದಾರೆ..! ಇದನ್ನೂ ಓದಿ: ಸಿನಿಮಾ ಸೆಟ್ ನ ಮೊದಲ ದಿನವೇ ಯಜಮಾನನಾಗಿ ಬಂದ ಚಾಲೆಂಜಿಂಗ್ ಸ್ಟಾರ್!