ನವದೆಹಲಿ: ಅರ್ಜಿ ಸಲ್ಲಿಕೆಯಾದ 10 ದಿನಗಳೊಳಗೆ ಕೋವಿಡ್ ಸಂತ್ರಸ್ತರ ಕುಟುಂಬದವರಿಗೆ ಪರಿಹಾರ ನೀಡಲು ಕ್ರಮವಹಿಸಬೇಕು ಎಂದು ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಕೊರೊನಾ ಸಂತ್ರಸ್ತರ ಕುಟುಂಬ ಸದಸ್ಯರಿಗೆ ಪರಿಹಾರ ಪಾವತಿಗೆ ಅನುಕೂಲವಾಗುವಂತೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ (ಎಸ್ಎಲ್ಎಸ್ಎ) ಸದಸ್ಯ ಕಾರ್ಯದರ್ಶಿಯೊಂದಿಗೆ ಸಮನ್ವಯ ಸಾಧಿಸಲು ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ಕೋರ್ಟ್ ಸಲಹೆ ನೀಡಿದೆ. ಇದನ್ನೂ ಓದಿ: ಕೋವಿಡ್ನಿಂದ ಕೆಲಸ ಕಳೆದುಕೊಂಡವರಿಗೆ ಚುನಾವಣೆ ಆಸರೆ
ನ್ಯಾಯಮೂರ್ತಿಗಳಾದ ಎಂ.ಆರ್.ಷಾ ಮತ್ತು ಬಿ.ವಿ.ನಾಗರತ್ನ ಅವರನ್ನೊಳಗೊಂಡ ಪೀಠವು, ಇಂದಿನಿಂದ ಒಂದು ವಾರದೊಳಗೆ ಎಸ್ಎಲ್ಎಸ್ಎಗೆ ಹೆಸರು, ವಿಳಾಸ ಮತ್ತು ಮರಣ ಪ್ರಮಾಣ ಪತ್ರದಂತಹ ಸಂಪೂರ್ಣ ವಿವರಗಳನ್ನು ಹಾಗೂ ಅನಾಥರಿಗೆ ಸಂಬಂಧಿಸಿದ ವಿವರಗಳನ್ನು ನೀಡುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.
ಪರಿಹಾರ ಕೋರಿ ಬಂದಿರುವ ಅರ್ಜಿಗಳನ್ನು ತಾಂತ್ರಿಕ ಕಾರಣಗಳಿಗಾಗಿ ತಿರಸ್ಕರಿಸಬಾರದು. ಯಾವುದೇ ತಾಂತ್ರಿಕ ದೋಷ ಕಂಡುಬಂದರೂ, ಸಂತ್ರಸ್ತರಿಗೆ ಸಾಂತ್ವನ ಮತ್ತು ಪರಿಹಾರವನ್ನು ಒದಗಿಸುವುದು ಕಲ್ಯಾಣ ರಾಜ್ಯದ ಅಂತಿಮ ಗುರಿಯಾಗಿದೆ. ಹೀಗಾಗಿ ದೋಷಗಳನ್ನು ಸರಿಪಡಿಸಲು ಅವರಿಗೆ ಅವಕಾಶ ನೀಡಬೇಕು ಎಂದು ತಿಳಿಸಿದೆ. ಇದನ್ನೂ ಓದಿ: ಕಾರಿನಲ್ಲಿ ಏಕಾಂಗಿಯಾಗಿ ಓಡಾಡುವಾಗ ಮಾಸ್ಕ್ ಅಗತ್ಯ ಇಲ್ಲ – ದೆಹಲಿಯಲ್ಲಿ ವಿನಾಯಿತಿ