ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ವೆಟ್ರಿಮಾರನ್ (Vetrimaran) ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಶರಣ್ ರಾಜ್ (Sharan Raj), ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ಜೂನ್ 8 ರಂದು ರಾತ್ರಿ 11.30ರ ಸುಮಾರಿಗೆ ಶರಣ್ ರಾಜ್ ಬೈಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಪೋಷಕ ನಟ ಪಳನಿಪ್ಪನ್ ಎನ್ನುವವರು ಶರಣ್ ರಾಜ್ ಬೈಕ್ ಗೆ ಢಿಕ್ಕೆ ಹೊಡೆದಿದ್ದಾರೆ. ತಲೆಗೆ ತೀವ್ರ ಪೆಟ್ಟು ಬಿದ್ದ ಕಾರಣದಿಂದಾಗಿ ಶರಣ್ ರಾಜ್ ನಿಧನರಾಗಿದ್ದಾರೆ.
ಚೆನ್ನೈನ ಕೆಕೆ ನಗರದಲ್ಲಿ ಈ ಘಟನೆ ನಡೆದಿದ್ದು, ಕಾರು ಓಡಿಸಿಕೊಂಡು ಬರುತ್ತಿದ್ದ ಪೋಷಕ ನಟ ಪಳನಿಪ್ಪನ್ (Palanippan) ಮದ್ಯಪಾನ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಶರಣ್ ರಾಜ್ ಬೈಕ್ ಗೆ ಕಾರು ಗುದ್ದಿದ್ದರಿಂದ, ಅವರು ನೆಲಕ್ಕೆ ಉರುಳಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಯಾವುದೂ ಪ್ರಯೋಜನವಾಗಿಲ್ಲ. ಇದನ್ನೂ ಓದಿ:ಒಂದು ಸಾಹಸ ದೃಶ್ಯಕ್ಕೆ 10 ಕೋಟಿ ಖರ್ಚು: ಏನಿದು ಸಲಾರ್ ದುನಿಯಾ
ಶರಣ್ ರಾಜ್ ಪ್ರತಿಭಾವಂತ ಸಹಾಯಕ ನಿರ್ದೇಶಕ. ಜೊತೆಗೆ ಹಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನೂ ಕೂಡ ಮಾಡಿದ್ದಾರಂತೆ. ದಕ್ಷಿಣದ ಖ್ಯಾತ ನಿರ್ದೇಶಕ ವೆಟ್ರಿಮಾರನ್ ಬಳಿ ಅನೇಕ ವರ್ಷಗಳಿಂದ ಅವರು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ವೆಟ್ರಿಮಾರನ್ ನಿರ್ದೇಶನದ ಧನುಷ್ ನಟನೆಯ ಅಸುರನ್ ಸಿನಿಮಾದಲ್ಲಿ ಶರಣ್ ರಾಜ್ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಜೊತೆಗೆ ಪಾತ್ರವೊಂದನ್ನೂ ನಿರ್ವಹಿಸಿದ್ದರು.
ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಆಗಮಿಸಿ, ಪಳನಿಪ್ಪನ್ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಕ್ಕೆ ಹಸ್ತಾಂತರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಚಿಕ್ಕ ವಯಸ್ಸಿನಲ್ಲೇ ರಸ್ತೆ ಅಪಘಾತಕ್ಕೆ (Accident) ಬಲಿಯಾದ ಶರಣ್ ರಾಜ್ ಗೆ ಅನೇಕರು ಸಂತಾಪ ವ್ಯಕ್ತ ಪಡಿಸಿದ್ದಾರೆ.