ಚಿಕ್ಕಬಳ್ಳಾಪುರ: ಹೋಟೆಲ್ ನ ಸಪ್ಲೈಯರ್ ಓರ್ವನ ಮೃತದೇಹ ಇದ್ದ ಸಂಪಿನ ನೀರು ಬಳಸಿ ಆಡುಗೆ ತಯಾರಿ ಮಾಡಿರುವುದಲ್ಲದೇ ಅದೇ ಸಂಪಿನ ನೀರನ್ನ ಕುಡಿಯಲು ಗ್ರಾಹಕರಿಗೆ ನೀಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣ ದಲ್ಲಿ ಬೆಳಕಿಗೆ ಬಂದಿದೆ.
ದೇವನಹಳ್ಳಿ ಬಸ್ ನಿಲ್ದಾಣದಲ್ಲಿರುವ ಶಾಂತಿ ಸಾಗರ್ ಹೋಟೆಲ್ ನ ನೀರಿನ ಸಂಪ್ನಲ್ಲಿ ಸಪ್ಲೈಯರ್ ಕೃಷ್ಣ ಎಂಬಾತನ ಶವ ಇಂದು ಪತ್ತೆಯಾಗಿದೆ. ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಸಪ್ಲೈಯರ್ ಕೃಷ್ಣ ಬುಧವಾರದಂದು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. ಇಂದು ಕೃಷ್ಣ ನ ಮೃತದೇಹ ಹೋಟೆಲ್ನ ಸಂಪಿನಲ್ಲಿ ತೇಲಾಡುತ್ತಿದ್ದು ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ. ನಿನ್ನೆಯೇ ಕೃಷ್ಣ ಸಂಪಿನಲ್ಲಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.
ಆದ್ರೆ ಇಂದು ಅದೇ ಸಂಪಿನ ನೀರು ಬಳಸಿ ಹೋಟೆಲ್ ನಲ್ಲಿ ಆಡುಗೆ ತಯಾರಿ ಮಾಡಲಾಗಿದೆ. ಗ್ರಾಹಕರಿಗೆ ಕುಡಿಯಲು ಅದೇ ನೀರನ್ನೇ ಬಳಸಲಾಗಿದೆ. ಘಟನೆ ಹಿನ್ನೆಲೆಯಲ್ಲಿ ದೇವನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೋಟೆಲ್ನವರ ಕಾರ್ಯ ವೈಖರಿಗೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.