ನವದೆಹಲಿ: ಮುಂಬರುವ ವಿಧಾನಸಭೆ ಚುನಾವಣೆಗೆ ನವದೆಹಲಿ ಕ್ಷೇತ್ರದಿಂದ ರಾಜ್ಯ ಯುವ ಮೊರ್ಚಾ ಅಧ್ಯಕ್ಷ ಸುನಿಲ್ ಯಾದವ್ ಅವರನ್ನ ಬಿಜೆಪಿ ಕಣಕ್ಕಿಳಿಸಿದೆ. ಯುವ ಮುಖಂಡ ಮತ್ತು ಹೊಸ ಮುಖಕ್ಕೆ ಮಣೆ ಹಾಕುವ ಮೂಲಕ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಓಟಕ್ಕೆ ಬ್ರೇಕ್ ಹಾಕಲು ಬಿಜೆಪಿ ಮುಂದಾಗಿದೆ.
ನವದೆಹಲಿ ಕ್ರೇತ್ರದಿಂದ ಸ್ಪರ್ಧಿಸಿರುವ ಟೋಪಿವಾಲ್ನ ಹ್ಯಾಟ್ರಿಕ್ ಗೆಲುವಿಗೆ ತಡೆ ಹಾಕಲು ಮುಂದಾಗಿರುವ ಬಿಜೆಪಿ, ಅಳೆದು ತೂಗಿ ಟಿಕೆಟ್ ಫೈನಲ್ ಮಾಡಿದೆ. 2013 ಹಾಗೂ 2015ರಲ್ಲೇ ಸುನಿಲ್ ಯಾದವ್ಗೆ ಟಿಕೆಟ್ ಸಿಗುತ್ತದೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಕೊನೆ ಕ್ಷಣದಲ್ಲಿ ನೂಪುರ್ ಶರ್ಮಾ ಗೆ ಟಿಕೆಟ್ ನೀಡಿದ್ದರಿಂದ ಯಾದವ್ ಗೆ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ಸುನಿಲ್ ಯಾದವ್ ಗೆ ಟಿಕೆಟ್ ನೀಡುವ ಮೂಲಕ ಹೊಸ ಪ್ರಯತ್ನಕ್ಕೆ ಮುಂದಾಗಿದೆ.
ವಕೀಲ ವೃತ್ತಿಯಲ್ಲಿರುವ 44 ವರ್ಷದ ಸುನಿಲ್ ಯಾದವ್, ಬಿಜೆಪಿ ಯುವ ಮೋರ್ಚಾ ಘಟಕದ ಮಂಡಲ ಅಧ್ಯಕ್ಷರಾಗುವ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು. ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದವರು. ಪಕ್ಷ ಸಂಘಟನೆಯಲ್ಲಿ ಅವರ ಪರಿಶ್ರಮವನ್ನು ಗುರುತಿಸಿದ ನಾಯಕರು, ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನೇಮಿಸಿದ್ದರು. ಬಳಿಕ ದೆಹಲಿ ವಲಯದ ಪ್ರಧಾನ ಕಾರ್ಯದರ್ಶಿ ಹಾಗೂ ದೆಹಲಿ ಘಟಕದ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು.
ಸಾಮಾಜಿಕ ಜಾಲತಾಣಗಳಲ್ಲೂ ಸುನಿಲ್ ಯಾದವ್ ಕ್ರಿಯಾಶೀಲರಾಗಿದ್ದಾರೆ. ಅವರ ಟ್ವಿಟ್ಟರ್ ಖಾತೆಯನ್ನು 16 ಸಾವಿರಕ್ಕೂ ಹೆಚ್ಚು ಮಂದಿ ಹಿಂಬಾಲಿಸುತ್ತಿದ್ದಾರೆ. ಅವರ ಫೇಸ್ಬುಕ್ ಖಾತೆಯಲ್ಲಿ ಸುಮಾರು ಒಂದು ಲಕ್ಷ ‘ಲೈಕ್’ಗಳಿರುವುದು ವಿಶೇಷವಾಗಿದೆ. ಸಾಮಾಜಿಕ ಜಾಲತಾಣಗಳನ್ನೂ ಇವರು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲಿದ್ದಾರೆ. ಸುನಿಲ್ ಯಾದವ್ ಉತ್ತರ ಪ್ರದೇಶದ ಪ್ರತಾಪಗಡ ಮೂಲದವರು.