ಮಂಗಳೂರು: ಲೇಡಿ ಹಿಲ್ ವೃತ್ತಕ್ಕೆ ಮಹರ್ಷಿ ನಾರಾಯಣ ಗುರು ಹೆಸರಿಡಲು ಮಂಗಳೂರು ಮಹಾನಗರ ಪಾಲಿಕೆ ನಿರ್ಣಯ ತೆಗೆದುಕೊಂಡಾಗ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಮರೆತು ಬಿಟ್ಟಿದ್ದು, ನಾರಾಯಣ ಗುರುಗಳ ಹೆಸರನ್ನು ಸಮಾಜ ವಿಭಜಿಸುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಕನ್ನಡ, ಸಂಸ್ಕೃತಿ ಮತ್ತು ಇಂಧನ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು ಮಹಾನಗರ ಪಾಲಿಕೆ ತೆಗೆದುಕೊಂಡ ನಿರ್ಣಯವನ್ನು ಕಾಂಗ್ರೆಸ್ ವಿರೋಧಿಸಿದ್ದರ ಬಗ್ಗೆ ಸಾಕಷ್ಟು ದಾಖಲೆಗಳಿವೆ. ಆದರೆ ಆ ಸಮಯದಲ್ಲಿ ಸಿದ್ದರಾಮಯ್ಯ ಮೌನಕ್ಕೆ ಶರಣಾಗಿದ್ದು ಏಕೆ, ನಾರಾಯಣ ಗುರುಗಳ ಬಗ್ಗೆ ನಿಮಗೆ ಆಗ ಗೌರವ ಇರಲಿಲ್ಲವೇ, ಕೇರಳ ಸರ್ಕಾರ ಸೃಷ್ಟಿಸಿದ ತಪ್ಪನ್ನು ನೀವ್ಯಾಕೆ ಪೋಷಿಸುತ್ತೀರಿ ಎಂದು ಪ್ರಶ್ನಿಸಿದರು.
ಹಿಂದೂ ಮಹಾಪುರುಷರ ಬಗ್ಗೆ ನಿಮ್ಮ ಗೌರವ ಹಾಗೂ ಕಾಳಜಿ ಸಾಂದರ್ಭಿಕವಾಗಿರುತ್ತದೆ. ಎಲ್ಲಿ ರಾಜಕೀಯ ಲಾಭ ಸಿಗುತ್ತದೋ ಆ ಸಂದರ್ಭದಲ್ಲಿ ಮಾತ್ರ ಅನಾವರಣವಾಗುತ್ತದೆ. ನಿಮ್ಮ ಶಾಶ್ವತ ಪ್ರೀತಿ ಯಾರ ಕಡೆಗೆ ಎಂಬುದನ್ನು ಮತ್ತೆ ಮತ್ತೆ ಹೇಳಬೇಕಾದ ಅಗತ್ಯವಿಲ್ಲ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಸಲ್ಮಾನ್ ಫಾರ್ಮ್ಹೌಸ್ನಲ್ಲಿ ಸೆಲೆಬ್ರಿಟಿಗಳ ಶವ, ಮಕ್ಕಳ ಕಳ್ಳ ಸಾಗಾಣಿಕೆ ನಡೆಯುತ್ತೆ ಎಂದ ನೆರೆಮನೆಯವ!
ಕೇಂದ್ರ ಸರ್ಕಾರದ ವಿರುದ್ಧ ಅನಗತ್ಯ ಅಪಪ್ರಚಾರದ ಜೊತೆಗೆ ಸಮಾಜ ಒಡೆಯುವ ಕೃತ್ಯಕ್ಕೆ ಪ್ರೇರಣೆ ನೀಡುವುದಕ್ಕಾಗಿ ಮಹರ್ಷಿ ನಾರಾಯಣ ಗುರು ಸ್ಥಬ್ಧ ಚಿತ್ರ ವಿಚಾರವನ್ನು ಕೇರಳದ ಕಮ್ಯುನಿಷ್ಟ್ ಸರ್ಕಾರ ಬಳಸಿಕೊಳ್ಳುತ್ತಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯನವರು ಉರಿಯುವ ಬೆಂಕಿಯಲ್ಲಿ ಮೈ ಕಾಯಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಗಣರಾಜ್ಯೋತ್ಸವ ಪರೇಡ್ಗೆ ಸ್ತಬ್ಧ ಚಿತ್ರಗಳನ್ನು ಆಯ್ಕೆ ಮಾಡುವುದು ಕೇಂದ್ರ ಸರ್ಕಾರವಲ್ಲ. ರಕ್ಷಣಾ ಇಲಾಖೆಯ ಉನ್ನತ ಅಧಿಕಾರಿಗಳ ನೇತೃತ್ವದ ಆಯ್ಕೆ ಸಮಿತಿ ಸ್ಥಬ್ಧ ಚಿತ್ರಗಳನ್ನು ಆಯ್ಕೆ ಮಾಡುತ್ತದೆ. ಕೇರಳ ಸರ್ಕಾರ ವಿವಾದ ಸೃಷ್ಟಿಸಬೇಕೆಂಬ ಉದ್ದೇಶದಿಂದಲೇ ನಿಯಮ ಉಲ್ಲಂಘಿಸಿ ಜಟಾಯು, ಮಹರ್ಷಿ ನಾರಾಯಣಗುರು ಹಾಗೂ ಶಂಕರಾಚಾರ್ಯರನ್ನು ವಿವಾದದಲ್ಲಿ ಎಳೆದು ತಂದಿದೆ. ನಿಯಮ ಉಲ್ಲಂಘನೆ ಮಾಡಿದ ಕೇರಳದ ಕಮ್ಯುನಿಸ್ಟ್ ಸರ್ಕಾರ ಈಗ ಈ ವಿಚಾರವನ್ನು ಸಮಾಜವನ್ನು ಒಡೆಯುವುದಕ್ಕೆ ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಜಿಲ್ಲೆಗೊಂದು ಮಠ ಮಾಡಲಿ ಮೂರನೇ ಪಂಚಮಸಾಲಿ ಪೀಠಕ್ಕೆ ನಮ್ಮ ಬೆಂಬಲ: ವಚನಾನಂದ ಸ್ವಾಮೀಜಿ
ಕೇರಳ ರಾಜ್ಯ ಸೃಷ್ಟಿಸಿದ ವಿವಾದದ ಕೂಸನ್ನು ರಾಜ್ಯದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಎತ್ತಿ ಆಡಿಸುತ್ತಿದ್ದಾರೆ. ಸಮಾಜವನ್ನು ಜಾತಿ, ಧರ್ಮದ ಆಧಾರದ ಮೇಲೆ ಒಡೆಯುವ ಕೆಲಸದಲ್ಲಿ ಸಿದ್ದರಾಮಯ್ಯ ಉನ್ನತ ಪದವಿ ಪಡೆದಿದ್ದಾರೆ. ಹೀಗಾಗಿ ನಾರಾಯಣ ಗುರುಗಳನ್ನೂ ತಮ್ಮ ಕ್ಷುಲ್ಲಕ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗ ರಾಜ್ಯದಲ್ಲಿ ವಿಷಮ ಸಮರಾಂಗಣ ಸೃಷ್ಟಿಸಿದ್ದನ್ನು ರಾಜ್ಯದ ಜನತೆ ಇನ್ನೂ ಮರೆತಿಲ್ಲ. ಚುನಾವಣೆ ಗೆಲ್ಲುವುದಕ್ಕಾಗಿ ವೀರಶೈವ-ಲಿಂಗಾಯಿತ ಪ್ರತ್ಯೇಕ ಧರ್ಮದ ವಿವಾದ ಹುಟ್ಟುಹಾಕಿದರು. ದೇಶವನ್ನು ಕಾಯುವ ಸೈನಿಕರ ಜಾತಿ ಹುಡುಕುವ ಸಣ್ಣತನ ಪ್ರದರ್ಶಿಸಿದರು. ಶಾಲಾ ವಿದ್ಯಾರ್ಥಿಗಳ ಪ್ರವಾಸ ಕಾರ್ಯಕ್ರಮದಲ್ಲೂ ಜಾತಿ ವಿಷ ಬೀಜ ಬಿತ್ತಿದರು. ಶಾದಿ ಭಾಗ್ಯ ಯೋಜನೆಯ ಮೂಲಕ ಧರ್ಮಗಳ ಮಧ್ಯೆ ದ್ವೇಷ ಸೃಷ್ಟಿಸಿದರು. ಟಿಪ್ಪು ಜಯಂತಿಯ ಮೂಲಕ ಹಿಂದು ಕಾರ್ಯಕರ್ತರ ನರಮೇಧಕ್ಕೆ ಪೋಷಣೆ ನೀಡಿದರು. ಈಗ ನಾರಾಯಣ ಗುರುಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡು ಒಂದು ಸಮುದಾಯದ ಭಾವನೆ ಕೆಣಕುವುದು ನಿಮಗೆ ಶೋಭೆ ತರುತ್ತದೆಯೇ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರ ಮಾತಿನಲ್ಲಿ ಬೆಲ್ಲ, ಕೈಯಲ್ಲಿ ಕೋಲು ಎಂಬ ಧೋರಣೆಯನ್ನು ಕರ್ನಾಟಕದ ಜನತೆ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಹಿಂದುಳಿದ ವರ್ಗದವರ ಭಾವನೆ ಕೆಣಕಿ ಸಮಾಜದಲ್ಲಿ ದ್ವೇಷದ ವಾತಾವರಣ ನಿರ್ಮಿಸುವ ಪ್ರಯತ್ನ ಫಲ ಕೊಡುವುದಿಲ್ಲ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುಗೆ ಕೊರೊನಾ ಪಾಸಿಟಿವ್
ಗಣರಾಜ್ಯೋತ್ಸವದ ದಿನ ಮಹರ್ಷಿ ನಾರಾಯಣಗುರುಗಳ ಸ್ತಬ್ಧ ಚಿತ್ರದ ಮೆರವಣಿಗೆಯನ್ನು ರಾಜ್ಯದಲ್ಲಿ ನಡೆಸುತ್ತೇವೆ ಎಂದು ಕೆಲ ಸಂಘಟನೆಗಳು ಕರೆ ನೀಡಿವೆ. ನಾರಾಯಣ ಗುರುಗಳ ಬಗ್ಗೆ ಅಪಾರ ಗೌರವ ಹೊಂದಿರುವ ನಾನು ಈ ನಡೆಯನ್ನು ಸ್ವಾಗತಿಸುತ್ತೇನೆ. ಸ್ತಬ್ಧ ಚಿತ್ರ ಮೆರವಣಿಗೆಗೆ ನಮ್ಮ ಕಡೆಯಿಂದ ಅಗತ್ಯವಿರುವ ಎಲ್ಲಾ ಸಹಕಾರವನ್ನು ಹೃದಯಪೂರ್ವಕವಾಗಿ ನೀಡಲು ಸಿದ್ಧನಿದ್ದೇನೆ ಎಂದು ಹೇಳಿದರು.