ಬೆಂಗಳೂರು: ಕೊರೊನಾ ಅಬ್ಬರದ ಮಧ್ಯೆ ವರುಣರಾಯ ಕೂಡ ರಾಜ್ಯದ ಕೆಲವೆಡೆ ಅಬ್ಬರಿಸಿದ್ದಾನೆ.
ಧಾರವಾಡ, ಶಿವಮೊಗ್ಗ, ದಾವಣಗೆರೆ, ವಿಜಯಪುರ ಸೇರಿ ಹಲವೆಡೆ ಧಾರಕಾರ ಮಳೆಯಾಗಿದೆ. ವಿಜಯಪುರದ ಮುದ್ದೇಬಿಹಾಳ ತಾಲೂಕಿನ ಹಳ್ಳೂರಿನಲ್ಲಿ ಸಿಡಿಲು ಹೊಡೆದು ರೈತ ಗುಂಡಪ್ಪ ಸಾವನ್ನಪ್ಪಿದ್ದಾರೆ. ಶಿವಮೊಗ್ಗದಲ್ಲಿ ಗುಡುಗು, ಸಿಡಿಲ ಮಳೆಗೆ ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ವಾರ್ಡ್ ನಲ್ಲಿ ವಿದ್ಯುತ್ ಅವಘಡ ಸಂಭವಿಸಿದ್ದು ಭಾರೀ ಅನಾಹುತ ತಪ್ಪಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆಸ್ಪತ್ರೆಯಲ್ಲಿದ್ದ ಮಕ್ಕಳನ್ನು ಸುರಕ್ಷಿತವಾಗಿ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.
ದಾವಣಗೆರೆಯಲ್ಲಿ ಸತತ ಒಂದು ಗಂಟೆ ಮಳೆ ಸುರಿದಿದೆ, ತಗ್ಗುಪ್ರದೇಶದಲ್ಲಿರುವ ಬೇತೂರು ರಸ್ತೆ, ಆನೆಕೊಂಡು ಏರಿಯಾಗಳು ಜಲಾವೃತವಾದವು. ಹಲವು ಮನೆಗಳಿಗೆ ನೀರು ನುಗ್ಗಿದ್ದು ನಿವಾಸಿಗಳು ಪರದಾಡಿದರು. ಇನ್ನು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯಲ್ಲಿ ಮಳೆ ಅಬ್ಬರಿಸಿದೆ. ಏಕಾಏಕಿ ಸುರಿದ ಮಳೆಯಿಂದ ಮನೆಗೆ ನೀರು ನುಗ್ಗಿ ವೃದ್ಧೆಯೊಬ್ಬರು ಪರದಾಡಿದರು. ಗ್ರಾಮದ ಯುಕವರು ವೃದ್ಧೆಯನ್ನು ರಕ್ಷಿಸಿದ್ದಾರೆ. ಅತ್ತ ಧಾರವಾಡದಲ್ಲಿ ಗುಡುಗು, ಸಿಡಿಲಿನ ಮಳೆ ಸುರಿದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.