ಮಂಡ್ಯ: ವಿಧಾನ ಪರಿಷತ್ ಚುನಾವಣಾ ಆಖಾಡ ಸಿದ್ಧವಾಗಿದ್ದು ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳು ಈಗ ಸಂಸದೆ ಸುಮಲತಾ ಬೆಂಬಲದ ನಿರೀಕ್ಷೆಯಲ್ಲಿ ಇದ್ದಾರೆ.
ಈ ಹಿಂದೆ ಸುಮಲತಾ ಅವರು ಲೋಕಸಭೆ ಚುನಾವಣೆಯಲ್ಲಿ ನಿಂತಾಗ ಕಾಂಗ್ರೆಸ್ಸಿಗರು ಹೈಕಮಾಂಡ್ ಆದೇಶವನ್ನು ಮೀರಿ ಸುಮಲತಾ ಅವರ ಪರವಾಗಿ ದುಡಿದಿದ್ದರು.
ಬಿಜೆಪಿ ಸುಮಲತಾ ಅವರ ವಿರುದ್ಧ ಯಾವುದೇ ಅಭ್ಯರ್ಥಿ ಹಾಕದೇ ಬಹಿರಂಗ ಬೆಂಬಲ ಘೋಷಿಸಿತ್ತು. ಈ ಹಿನ್ನೆಲೆ ಸುಮಲತಾ ಅವರು ಎರಡೂ ಪಕ್ಷಗಳ ಸಹಾಯದಿಂದ ಬಲಿಷ್ಠ ಜೆಡಿಎಸ್ ವಿರುದ್ಧ ಗೆದ್ದು ಬೀಗಿದ್ದರು. ಇದನ್ನೂ ಓದಿ: 116 ಕೋಟಿ ಒಡೆಯ ಸೋಮಶೇಖರ್ ಕಾಂಗ್ರೆಸ್ನಿಂದ ಸ್ಪರ್ಧೆ
ಈಗ ಕಾಂಗ್ರೆಸ್ ಮತ್ತು ಬಿಜೆಪಿ ತಾವು ಮಾಡಿದ್ದ ಸಹಾಯ ನೆನಪಿಸಿ ಬೆಂಬಲ ಕೇಳುತ್ತಿದ್ದು, ಸುಮಲತಾ ಅವರು ಮಾತ್ರ ತಾವು ಯಾವ ಪಕ್ಷಕ್ಕೆ ಬೆಂಬಲ ನೀಡುತ್ತಾರೆ ಎಂಬ ಗುಟ್ಟನ್ನು ಮಾತ್ರ ಬಿಟ್ಟು ಕೊಟ್ಟಿಲ್ಲ.
ಸಚಿವ ನಾರಾಯಣಗೌಡರು ನಾವು ಅವರಿಗಾಗಿ ದುಡಿದಿದ್ದೇವೆ ಬಿಜೆಪಿ ಪರವಾಗಿ ಸುಮಲತಾ ಪ್ರಚಾರಕ್ಕೆ ಬರುತ್ತಾರೆ ಎಂದಿದ್ದಾರೆ. ಇತ್ತ ಸುಮಲತಾ ಅವರ ನಿರ್ಧಾರಕ್ಕಾಗಿ ಕಾಂಗ್ರೆಸ್ ಕಾಯುತ್ತಿದೆ. ಪ್ರಸ್ತುತ ಸುಮಲತಾ ಅವರ ನಿರ್ಧಾರದ ಬಗ್ಗೆ ಎಲ್ಲರಲ್ಲಿಯೂ ಕುತೂಹಲ ಮೂಡಿದೆ. ಇದನ್ನೂ ಓದಿ: ತುಂಗಭದ್ರಾ ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಜಾನುವಾರುಗಳ ರಕ್ಷಣೆ
ಸುಮಲತಾ ಅವರು ಇಂದು ಮಂಡ್ಯದಲ್ಲಿ ಪ್ರವಾಸ ಕೈಗೊಂಡಿದ್ದು, 3ನೇ ವರ್ಷದ ಅಂಬಿ ಪುಣ್ಯ ಸ್ಮರಣೆ ಸೇರಿದಂತೆ ಹಲವು ಕಾರ್ಯಕ್ರಮದಲ್ಲಿ ಅವರು ಭಾಗಿಯಾಗುತ್ತಿದ್ದಾರೆ. ಇಂದು ಎಂಎಲ್ಸಿ ಚುನಾವಣೆಯಲ್ಲಿ ತನ್ನ ಬೆಂಬಲ ಯಾರಿಗೆ ಎನ್ನುವ ಬಗ್ಗೆ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.