ಮಂಡ್ಯ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಹೀಗಾಗಿ ಇಂದು ನಾಮಪತ್ರ ಸಲ್ಲಿಸಿ ಅಧಿಕೃತವಾಗಿ ಪ್ರಚಾರಕ್ಕೆ ಧುಮುಕಿದ್ದಾರೆ.
ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕಿನಲ್ಲಿ ಸುಮಲತಾ ಬೃಹತ್ ಸಮಾವೇಶ ನಡೆಸಿದ್ದು, ಈ ವೇಳೆ ಸುಮಲತಾ ಅವರಿಗೆ ನಟರಾದ ಯಶ್ ಹಾಗೂ ದರ್ಶನ್ ಎಡಬಲ ನಿಂತು ಮತ್ತಷ್ಟು ಬಲ ನೀಡಿದ್ದಾರೆ. ಅಲ್ಲದೆ ಈ ವೇಳೆ ಸಾವಿರಾರು ಮಂದಿ ಅಂಬಿ ಅಭಿಮಾನಿಗಳು ರೋಡ್ ಶೋದಲ್ಲಿ ಭಾಗಿಯಾಗಿದ್ದಾರೆ. ಸಮಲತಾ, ಯಶ್ ಹಾಗೂ ದರ್ಶನ್ ಜನರತ್ತ ಕೈ ಬೀಸುವ ಮೂಲಕ ನಾವು ನಿಮ್ಮೊಂದಿಗೆ ಇದ್ದೇವೆ ಎಂಬ ಸಂದೇಶವನ್ನು ಪಾಸ್ ಮಾಡಿದ್ದಾರೆ.
ಒಟ್ಟಿನಲ್ಲಿ ಜೆಡಿಎಸ್ ಭದ್ರಕೋಟೆ ಎಂದೇ ಪ್ರಖ್ಯಾತವಾದ ಮಂಡ್ಯದಲ್ಲಿ ಸುಮಲತಾ ಇಂದು ರೋಡ್ ಶೋ ನಡೆಸುವ ಮೂಲಕ ರಣಕಹಳೆ ಮೊಳಗಿಸಿದ್ದಾರೆ.
ಇಂದು ಬೆಳಗ್ಗೆ ಚಾಮುಂಡಿ ತಾಯಿಯ ದರ್ಶನ ಪಡೆದು, ಪೂಜೆ ಸಲ್ಲಿಸಿದ ಬಳಿಕ ಅಲ್ಲಿಂದ ನೇರವಾಗಿ ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ್ದರು. ಸುಮಾರು 11 ಗಂಟೆಯ ನಂತರ ಸುಮಲತಾ ಅವರು ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಡಿಸಿ ಕಚೇರಿಯಿಂದ ನಗರದ ವಿಶ್ವಶ್ವರಯ್ಯ ಪ್ರತಿಮೆಯ ಬಳಿ ಬಂದು ಮಾಲಾರ್ಪಣೆ ಮಾಡಿದ್ರು. ಇದಾದ ಬಳಿಕ ರೋಡ್ ಶೋ ಆರಂಭ ಮಾಡಿದ್ರು. ಈ ವೇಳೆ ನಟ ಯಶ್ ಹಾಗೂ ದರ್ಶನ್ ಜೊತೆಯಾದ್ರು. ರೋಡ್ ಶೋ ವೇಳೆ ಸಾವಿರಾರು ಅಂಬಿ ಅಭಿಮಾನಿಗಳು ಹಾಗೂ ಜಾನಪದ ಕಲಾತಂಡಗಳು ಸುಮಲತಾ ಅವರಿಗೆ ಸಾಥ್ ನೀಡಿತ್ತು.
ರೋಡ್ ಶೋ ವೇಳೆ ಅಭಿಮಾನಿಗಳು ತಮ್ಮ ನೆಚ್ಚಿನ ನಟರನ್ನು ನೋಡಲು ಮರ ಹತ್ತಿದ್ದಾರೆ. ರೋಡ್ ಶೋನಿಂದಾಗಿ ಹೈವೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಹೀಗಾಗಿ ಸಾಲುಗಟ್ಟಿ ನಿಂತ ವಾಹನಗಳ ಮೇಲೆ ನಿಂತು ಅಭಿಮಾನಿಗಳು ಮೆರವಣಿಗೆ ವೀಕ್ಷಿಸಿದ್ದಾರೆ.