ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಮಾರಮ್ಮ ದೇವಸ್ಥಾನದ ಪ್ರಸಾದ ಸೇವಿಸಿ ಮೃತಪಟ್ಟ ಹಾಗೂ ಅಸ್ವಸ್ಥಗೊಂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಚುರುಕುಗೂಳಿಸಿದ್ದಾರೆ.
ಟೊಮೆಟೋ ಬಾತ್ಗೆ ಬಳಸಿದ ಅಕ್ಕಿ ಮತ್ತಿತ್ತರ ಸಾಮಾಗ್ರಿಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅಕ್ಕಿ ತಂದಿದ್ದು ಎಲ್ಲಿಂದ, ತಂದವರು ಯಾರು..? ಎಂಬಿತ್ಯಾದಿ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಅಲ್ಲದೆ ಈಗಾಗಲೇ ಮೂರು ತಂಡಗಳನ್ನು ರಚಿಸಿ ಕಾರ್ಯಾಚರಣೆಗಿಳಿದಿದ್ದಾರೆ.
ಶನಿವಾರ ಸಂಜೆ ದೇವಸ್ಥಾನಕ್ಕೆ ಭೇಟಿ ನೀಡಿದ ದಕ್ಷಿಣ ವಲಯ ಐಜಿಪಿ ಶರತ್ಚಂದ್ರ, ಸತತ 5 ಗಂಟೆಗಳ ಕಾಲ ದೇವಸ್ಥಾನದ ಇಂಚಿಂಚೂ ಪರಿಶೀಲನೆ ನಡೆಸಿದ್ದರು. ಇದೇ ವೇಳೆ ದೇವಸ್ಥಾನ ಧರ್ಮಾಧಿಕಾರಿ ಚಿನ್ನಪ್ಪಿ, ಮ್ಯಾನೇಜರ್ ಮಾದೇಶ್ರನ್ನು ಕರೆದೊಯ್ದು ಸ್ಥಳ ಮಹಜರು ಮಾಡುವ ವೇಳೆಯೂ ಸ್ಥಳದಲ್ಲೇ ಉಪಸ್ಥಿತರಿದ್ದರು.
ಆಸ್ಪತ್ರೆಗೆ ದಾಖಲಾಗಿರುವ ಅಸ್ವಸ್ಥರಿಗೆ ಆಟ್ರೋಪೈನ್ ಸಲ್ಫಟ್ ಔಷಧ ನೀಡಲಾಗುತ್ತಿದೆ. ಸಾಮಾನ್ಯವಾಗಿ ಈ ಔಷಧವನ್ನು ಆರ್ಗನೋ ಪಾಸ್ಪರಸ್ ರಾಸಾಯನಿಕ ಸೇವಿಸಿದವರಿಗೆ ನೀಡಲಾಗುತ್ತದೆ. ಈ ರಾಸಾಯನಿಕ ರೋಗರ್ ಎಂಬ ಕೀಟನಾಶಕದಲ್ಲಿ ಮಾತ್ರ ಬಳಸಲಾಗುತ್ತೆ. ಹೀಗಾಗಿ ಪ್ರಸಾದದಲ್ಲಿ ರೋಗರ್ ಕೀಟನಾಶಕವನ್ನೇ ಬೆರೆಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಇಂದು ಸಂಜೆ ವಿಧಿವಿಜ್ಞಾನ ಪ್ರಯೋಗಾಲಯ ವರದಿ ಬರಲಿದ್ದು, ಪ್ರಸಾದಕ್ಕೆ ಏನು ಬೆರೆಸಲಾಗಿತ್ತು ಮತ್ತು ಯಾವ ಪ್ರಮಾಣದಲ್ಲಿ ಬೆರೆಸಲಾಗಿತ್ತು ಅನ್ನೋದು ಸ್ಪಷ್ಟವಾಗಲಿದೆ.
https://www.youtube.com/watch?v=beiR3uvrY9Q
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv