ತುಮಕೂರು: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸೂಲಗಿತ್ತಿ ನರಸಮ್ಮ ಅವರ ಅಂತ್ಯ ಸಂಸ್ಕಾರ ಇಂದು ನಗರದ ಗಂಗಸಂದ್ರ ಸರ್ಕಾರಿ ಜಮೀನಿನಲ್ಲಿ ನೆರವೇರಿತು.
ಸಕಲ ಸರ್ಕಾರಿ ಗೌರವಗಳೊಂದಿಗೆ ಸೂಲಗಿತ್ತಿ ನರಸಮ್ಮ ಅವರಿಗೆ ಜಿಲ್ಲಾಡಳಿತವು ಅಂತಿಮ ನಮನ ಸಲ್ಲಿಸಿತು. ಅಂತ್ಯಸಂಸ್ಕಾರದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು ಭಾಗಿಯಾಗಿದ್ದರು. ನಗರದ ಗಾಜಿನ ಮನೆಯಿಂದ ಮೆರವಣಿಗೆ ಹೊರಟು ಗಂಗಸಂದ್ರ ಸರ್ಕಾರಿ ಜಮೀನು ತಲುಪಿತು. ಬಳಿಕ ಸಕಲ ವಿಧಿ ವಿಧಾನಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಯಿತು.
ನರಸಮ್ಮ ಅವರ ಕುಟುಂಬಸ್ಥರ ಮನವಿಯಂತೆ ಸಮಾಧಿ ಹಾಗೂ ಸ್ಮಾರಕ ನಿರ್ಮಾಣಕ್ಕೆ ಗಂಗಸಂದ್ರದಲ್ಲಿ ಒಂದು ಎಕರೆ ಸರ್ಕಾರಿ ಜಮೀನನ್ನು ಜಿಲ್ಲಾಡಳಿತವು ನಿಗದಿ ಮಾಡಿದೆ. ಆ ಜಮೀನಿನಲ್ಲಿಯೇ ಇಂದು ಅಂತ್ಯಸಂಸ್ಕಾರ ನೆರವೇರಿತು.
ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನರಸಮ್ಮ ಅವರಿಗೆ ಟ್ರೈಕ್ಯಾಸ್ಟಮಿ ಚಿಕಿತ್ಸೆ ಸಹ ನಡೆಸಲಾಗಿತ್ತು. ಕ್ರಮೇಣ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ನವೆಂಬರ್ 30ರಂದು ಸಿಗ್ನಲ್ ಮುಕ್ತ ಸಂಚಾರ ವ್ಯವಸ್ಥೆಯೊಂದಿಗೆ ಕೆಂಗೇರಿ ಬಳಿಯ ಬಿಜಿಎಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದರು. ತುಮಕೂರು ಭಾಗದ ಜನರು ಸೂಲಗಿತ್ತಿ ನರಸಮ್ಮ ಅವರನ್ನು ದೇವರ ಸ್ವರೂಪದಂತೆ ಕಾಣುತ್ತಾರೆ. ಇವರ ಸೇವೆಯನ್ನು ಗುರುತಿಸಿರುವ ಹಲವು ಸಂಘ ಸಂಸ್ಥೆಗಳು ಈಗಾಗಲೇ ಹಲವು ಪ್ರಶಸ್ತಿಗಳು ನೀಡಿ ಗೌರವಿಸಿವೆ. ದೇವರಾಜು ಅರಸು ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ವಯೋಶ್ರೇಷ್ಠ ಸಮ್ಮಾನ್ ರಾಷ್ಟ್ರೀಯ ಪ್ರಶಸ್ತಿ ಲಭಿಸಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv