ಎರಡ್ಮೂರು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು ಕಿಚ್ಚ ಸುದೀಪ್. ಮುಂದಿನ ವಾರದಲ್ಲೇ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಸಹಜವಾಗಿಯೇ ಅಭಿಮಾನಿಗಳಲ್ಲಿ ಆತಂಕ ಶುರುವಾಗಿತ್ತು. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದರಿಂದ, ಹಲವು ಊರುಗಳಲ್ಲಿ ಚಿತ್ರದ ಪ್ರಚಾರವನ್ನೂ ಮಾಡಬೇಕಿತ್ತು. ಏಕಾಏಕಿ ಜ್ವರ ಕಾಣಿಸಿಕೊಂಡಿದ್ದರಿಂದ ಮುಂದೇನು ಅನ್ನುವ ಗೊಂದಲ ಸಹಜವಾಗಿ ಚಿತ್ರತಂಡಕ್ಕೆ ಮೂಡಿತ್ತು. ಆದರೆ, ಕಿಚ್ಚ ಈ ನೋವಿನ ನಡುವೆಯೂ ಮುಂಬೈಗೆ ತೆರಳಿದ್ದಾರೆ. ಈ ಮೂಲಕ ತಮ್ಮ ವೃತ್ತಿ ಬದ್ಧತೆ ತೋರಿದ್ದಾರೆ.
ಕೊಚ್ಚಿ, ಚೆನ್ನೈ, ಮುಂಬೈ ಸೇರಿದಂತೆ ಹಲವು ಕಡೆ ಸಿನಿಮಾ ಪ್ರಚಾರದಲ್ಲಿ ಸುದೀಪ್ ಭಾಗಿಯಾಗಬೇಕಾಗಿತ್ತು. ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಪತ್ರಿಕಾಗೋಷ್ಠಿಗಳನ್ನು ರದ್ದು ಮಾಡಿದ್ದರು. ಈ ಕುರಿತು ಕ್ಷಮೆ ಕೂಡ ಕೇಳಿದ್ದರು. ಆದಷ್ಟು ಬೇಗ ಮಾಧ್ಯಮ ಗೆಳೆಯರನ್ನು ಭೇಟಿ ಮಾಡುವುದಾಗಿಯೂ ತಿಳಿಸಿದ್ದರು. ಮಾತುಕೊಟ್ಟಂತೆ ಅವರು ಜ್ವರ ಕಡಿಮೆ ಆಗುತ್ತಿದ್ದಂತೆಯೇ ಮುಂಬೈ ವಿಮಾನ ಏರಿದ್ದಾರೆ. ಇವತ್ತು ಮುಂಬೈನಲ್ಲಿ ಸಿನಿಮಾ ಪ್ರಚಾರ ಮಾಡಲಿದ್ದಾರೆ. ಇದನ್ನೂ ಓದಿ:ರಣ್ವೀರ್ ಸಂಪೂರ್ಣ ಬೆತ್ತಲೆ:ಕಣ್ಣುಮುಚ್ಚಿಕೊಂಡ ದೀಪಿಕಾ
ಅನೂಪ್ ಭಂಡಾರಿ ಮತ್ತು ಕಿಚ್ಚ ಸುದೀಪ್ ಕಾಂಬಿನೇಷನ್ ನ ವಿಕ್ರಾಂತ್ ರೋಣ ಸಿನಿಮಾ ಜು.28ಕ್ಕೆ ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲೂ ಸಿನಿಮಾ ಬಿಡುಗಡೆ ಆಗುತ್ತಿದ್ದು ದೇಶದ ನಾನಾ ಕಡೆ ಈಗಾಗಲೇ ಪ್ರಚಾರ ಆರಂಭವಾಗಿದೆ. ಅಭಿಮಾನಿಗಳು ಕೂಡ ಕಿಚ್ಚನ ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ. ಜ್ವರದ ನಡುವೆಯೂ ಕಿಚ್ಚ ಹಲವು ಕಡೆ ಪ್ರಚಾರದಲ್ಲಿ ತೊಡಗಿದ್ದಾರೆ.