‘ಬಿಗ್ ಬಾಸ್ ಕನ್ನಡ ಸೀಸನ್ 11’ರ (Bigg Boss Kannada 11) ಫಿನಾಲೆಗೆ ಇನ್ನೊಂದು ವಾರವೇ ಬಾಕಿ ಇದೆ. ಈ ವಾರ ಮುಗಿಯಿತೆಂದರೆ ಶುರುವಾಗುವುದು ಫಿನಾಲೆಯಲ್ಲಿ ಗೆದ್ದುಗೆ ಗುದ್ದಾಟ. ಇದೆಲ್ಲದರ ಮಧ್ಯೆ ಕಳೆದ ವಾರ ಅದ್ಭುತವಾಗಿ ಆಡಿದ ಹನುಮಂತುಗೆ ಫಿನಾಲೆ ಟಿಕೆಟ್ ದೊರೆತಿದೆ. ವಾರಾಂತ್ಯದ ಪಂಚಾಯಿತಿಯಲ್ಲಿ ಸುದೀಪ್, ಹನುಮಂತ (Hanumantha) ಅವರ ಆಟವನ್ನು ಬಹುವಾಗಿ ಕೊಂಡಾಡಿದರು. ಕರ್ನಾಟಕವೇ ಮೆಚ್ಚುವಂತೆ ಆಡುತ್ತಿದ್ದೀರಿ ಎಂದರು. ಇದನ್ನೂ ಓದಿ:ಈ ಬಾರಿಯೂ ಮೈಸೂರಿನಲ್ಲೇ ಸಂಕ್ರಾಂತಿ ಆಚರಿಸಲಿದ್ದಾರೆ ದರ್ಶನ್
ಈ ವಾರ ಫಿನಾಲೆ ಟಿಕೆಟ್ ಬಾಚಿಕೊಳ್ಳಲು ಹನುಮಂತನ ಆಟದ ವೈಖರಿಯನ್ನು ಸುದೀಪ್ ಹಾಡಿಹೊಗಳಿದ್ದಾರೆ. ಇತರೆ ಸ್ಪರ್ಧಿಗಳಿಗೆ ಹನುಮಂತನ ಆಟ ಹೇಗನ್ನಿಸಿತು? ಎಂಬುದನ್ನು ಸುದೀಪ್ ಕೇಳಿದ್ದಾರೆ. ಆ ವೇಳೆ, ಒಬ್ಬೊಬ್ಬರು ಒಂದೊಂದು ರೀತಿ ಹನುಮಂತನ ಆಟವನ್ನು ವಿಶ್ಲೇಷಿಸಿದರು. ಹನುಮಂತ ಎಲ್ಲವನ್ನೂ ಬಚ್ಚಿಟ್ಟುಕೊಳ್ಳುತ್ತಾನೆ ಬಹಳ ಸ್ಮಾರ್ಟ್ ಎಂದು ಭವ್ಯಾ ಹೇಳಿದರು. ಆಗ ಸುದೀಪ್, ಆ ಗುಣ ನನ್ನಲ್ಲೂ ಇದೆ. ನಾನು ಸಹ ಏನೂ ಮಾತನಾಡುವುದಿಲ್ಲ, ಏನನ್ನೂ ಹೇಳುವುದಿಲ್ಲ. ನನಗೆ ಹೇಳಲು ಇಷ್ಟ ಇಲ್ಲ ಎಂದಲ್ಲ. ಹೇಳಿದರೆ ಅವರಿಗೆ ಅರ್ಥ ಆಗುವುದಿಲ್ಲ. ಬರೀ ವಾದ ನನಗೆ ಇಷ್ಟವಿಲ್ಲ. ಈ ವಿಷಯದಲ್ಲಿ ಹನುಮಂತನ ಗುಣ ನನ್ನಲ್ಲೂ ಇದೆ. ಹಾಗಿದ್ದರೆ ನಾನೂ ಸಹ ಸ್ಮಾರ್ಟ್ ಹಾ ಎಂದು ಪ್ರಶ್ನೆ ಮಾಡಿದರು.
ಹನುಮಂತ ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ತನ್ನ ಮುಂದಿರುವ ಗುರಿ ನೋಡುತ್ತಾನೆ. ಅದನ್ನು ಆಡಿ ಗೆಲ್ಲುತ್ತಾನೆ ಬೇರೆ ಏನೇನೋ ಲೆಕ್ಕಾಚಾರ ಹಾಕುವುದಿಲ್ಲ, ಓವರ್ ಥಿಂಕಿಂಗ್ ಮಾಡುವುದಿಲ್ಲ ಅದೇ ಅವನ ಗೆಲುವಿನ ಸೂತ್ರ ಎಂದು ಸುದೀಪ್ (Sudeep) ಕೊಂಡಾಡಿದ್ದಾರೆ. ಎಲ್ಲರೂ ಕಪ್ ಗೆಲ್ಲೋಕೆ ಆಡುತ್ತಿದ್ದಾರೆ ನಾವು ಟಾಸ್ಕ್ ಗೆಲ್ಲೋಣ ಎನ್ನುತ್ತಾರೆ ಹನುಮಂತು. ಅವರಷ್ಟು ಸುಲಭವಾಗಿ ಆಟವನ್ನು ತೆಗೆದುಕೊಂಡಿರುವವರನ್ನು ನಾನು ಬಹಳ ಕಡಿಮೆ ಸ್ಪರ್ಧಿಗಳನ್ನು ನೋಡಿದ್ದೇನೆ. ಯಾರು ಹೀಗೆ ಸಿಂಪಲ್ ಆಗಿ ಆಟವನ್ನು ತೆಗೆದುಕೊಳ್ಳುತ್ತಾರೋ ಅವರೇ ಅಂತಿಮವಾಗಿ ಗೆಲ್ಲುತ್ತಾರೆ. ವಾರಾಂತ್ಯದಲ್ಲಿ ಎಲ್ಲರೂ ಚೆನ್ನಾಗಿ ಮೇಕಪ್ ಮಾಡಿಕೊಂಡು ಬರುತ್ತಾರೆ. ಈ ವ್ಯಕ್ತಿ ಒಂದು ಶರ್ಟ್, ಪಂಚೆ ತೊಟ್ಟು ಸರಳವಾಗಿ ಬರುತ್ತಾರೆ. ಅತಿಯಾಗಿ ಯಾವ ವಿಚಾರವನ್ನು ಅವರು ತಲೆ ಕೆಡಿಸಿಕೊಳ್ಳುವುದಿಲ್ಲ.
ಮೊದಲ ವಾರವೇ ಟಾಸ್ಕ್ ಆಡಲಾಗದೆ ತಲೆಸುತ್ತಿ ಬಿದ್ದು ಹೋಗಿದ್ದರು. ಈಗ ಕರ್ನಾಟಕವೇ ಮೆಚ್ಚುವಂತೆ ಹನುಮಂತ ಆಟ ಆಡುತ್ತಿದ್ದಾರೆ ಎಂದು ಸುದೀಪ್ ಮನಸಾರೆ ಹೊಗಳಿದರು. ಹನುಮಂತ ಮಾತನಾಡಿ, ನಾನೇನು ಗೆಲ್ಲಲೇಬೇಕು ಎಂದು ಆಡುವುದಿಲ್ಲ ರೀ, ನನಗೆ ಹೇಗೆ ಬರುತ್ತದೆಯೋ ಹಾಗೆ ಆಡುತ್ತೇನೆ ಎಂದಿದ್ದಾರೆ. ಮಾತನ್ನು ಸುದೀಪ್ ಮೆಚ್ಚಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹನುಮಂತ ಆಟ ನೋಡಿ ಬಿಗ್ ಬಾಸ್ ಟ್ರೋಫಿಯನ್ನು ಇವರೇ ಗೆಲ್ಲಬಹುದು ಎಂದು ಪ್ರೇಕ್ಷಕರು ಊಹಿಸುತ್ತಿದ್ದಾರೆ.