ಸುದೀಪ್ (Sudeep) ಮೇಲೆ ನಿರ್ಮಾಪಕ ಎನ್.ಕುಮಾರ್ (N. Kumar) ಮಾಡಿರುವ ಆರೋಪದ ಕುರಿತಂತೆ ನಿನ್ನೆಯಿಂದ ರವಿಚಂದ್ರನ್ ನಿವಾಸದಲ್ಲಿ ಸಂಧಾನ ಸಭೆ ನಡೆಯುತ್ತಿದೆ. ನಿನ್ನೆ ಈ ಸಭೆಗೆ ಶಿವರಾಜ್ ಕುಮಾರ್ ಆಗಮಿಸಲಿದ್ದಾರೆ ಎಂದು ಹೇಳಲಾಗಿತ್ತು. ತಡರಾತ್ರಿವರೆಗೂ ನಡೆದ ಸಭೆಗೆ ಶಿವಣ್ಣ ಹಾಜರಾಗಲಿಲ್ಲ. ಆದರೆ, ಈ ಕುರಿತಂತೆ ಶಿವರಾಜ್ ಕುಮಾರ್ (Shivaraj Kumar) ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಶಿವರಾಜ್ ಕುಮಾರ್, ‘ರವಿದು ನಂದು ಬೇರೆ ಬೇರೆ ಮಾತಿಲ್ಲ. ಅವರು ಏನು ಹೇಳಿದ್ರೆ ಅದೇ ನನ್ನ ಮಾತು. ಎಲ್ಲಾ ಒಳ್ಳೆಯ ರೀತಿಯಲ್ಲಿ ಆಗ್ಬೇಕು ಅನ್ನೊದು ನನ್ನ ಆಸೆ. ಆದಷ್ಟು ಬೇಗ ಕುಮಾರ್-ಸುದೀಪ್ ನಡುವಿನ ಸಮಸ್ಯೆ ಬಗೆಹರಿಯಬೇಕು. ಸಿನಿಮಾ ಅನ್ನುವುದು ಒಂದು ಕುಟುಂಬ. ಸಮಸ್ಯೆ ಆಗೋದು ಸಹಜ. ಆದಷ್ಟು ಬೇಗ ಸರಿ ಹೋಗಲಿ’ ಎಂದಿದ್ದಾರೆ.
ಆದರೆ, ನಿನ್ನೆಯ ಸಂಧಾನ ಯಶಸ್ವಿ ಆಗಿಲ್ಲ ಎಂದು ಹೇಳಲಾಗುತ್ತಿದೆ. ಕಿಚ್ಚ ಸುದೀಪ್ ಮತ್ತು ಕುಮಾರ್ ಪ್ರತ್ಯೇಕವಾಗಿ ತಮ್ಮ ನೋವುಗಳನ್ನು ಹೇಳಿಕೊಂಡಿದ್ದು, ಬಹುಶಃ ಎಂದು ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ನಿನ್ನೆಯ ಸಭೆಯಲ್ಲಿ ಶಿವರಾಜ್ ಕುಮಾರ್ ಗೈರಾಗಿದ್ದರು ಎಂದು ಹೇಳಲಾಗುತ್ತಿದೆ. ಇಂದು ಅವರು ಕೂಡ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎನ್ನುತ್ತವೆ ಬಲ್ಲ ಮೂಲಗಳು.
ಎನ್.ಕುಮಾರ್ ಈ ಹಿಂದೆ ಪ್ರತ್ಯೇಕವಾಗಿ ರವಿಚಂದ್ರನ್ (Ravichandran) ಮತ್ತು ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ್ದರು. ಸುದೀಪ್ ಮತ್ತು ತಮ್ಮ ನಡುವಿನ ಮನಸ್ತಾಪವನ್ನು ಬಗೆ ಹರಿಸುವಂತೆ ವಿನಂತಿಸಿಕೊಂಡಿದ್ದರು. ತಮಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸಿ ಎಂದು ಅವರು ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ:ಜುಲೈ 23ಕ್ಕೆ ವಿಶ್ವಕುಂದಾಪ್ರ ಕನ್ನಡ ದಿನಕ್ಕೆ ಸಿಎಂ, ರಿಷಬ್ ಶೆಟ್ಟಿ- ಪ್ರಮೋದ್ ಶೆಟ್ಟಿ ಸಾಥ್
ಈ ನಡುವೆ ಕುಮಾರ್ ವಿರುದ್ಧ ಸುದೀಪ್ ಕೋರ್ಟ್ ಮೆಟ್ಟಿಲು ಏರಿದ್ದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತ್ತು. ತಾವು ಯಾವುದೇ ಸಂಧಾನಕ್ಕೆ ಬರುವುದಿಲ್ಲ ಕೋರ್ಟ್ ನಲ್ಲೇ ನ್ಯಾಯ ಸಿಗಲಿ ಎಂದು ಸುದೀಪ್ ಹೇಳಿಕೆ ನೀಡಿದ್ದರು. ಈ ಮಾತಿನ ಬೆನ್ನಲ್ಲೇ ಕುಮಾರ್ ವಾಣಿಜ್ಯ ಮಂಡಳಿಯ ಮುಂದೆ ಧರಣೆಗೆ ಕೂತಿದ್ದರು.
ರವಿಚಂದ್ರನ್ ಅವರ ಮಾತಿನಂತೆ ಪ್ರತಿಭಟನೆಯಿಂದ ಹಿಂದೆ ಸರಿದಿದ್ದ ಕುಮಾರ್, ಆನಂತರ ಶಿವರಾಜ್ ಕುಮಾರ್ ಅವರನ್ನೂ ಭೇಟಿ ಮಾಡಿದ್ದರು. ಇದೀಗ ರವಿಚಂದ್ರನ್ ಇಬ್ಬರನ್ನೂ ಕರೆಯಿಸಿಕೊಂಡು ಮಾತುಕತೆ ನಡೆಸಿದ್ದಾರೆ. ಇಂದಿನ ಸಭೆಯ ನಂತರ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕು.
Web Stories