ರಾಯಚೂರು: ಮಂತ್ರಾಲಯ ಹಾಗೂ ಕರ್ನೂಲು ಲೋಕಸಭಾ ಕ್ಷೇತ್ರವನ್ನು ಕರ್ನಾಟಕಕ್ಕೆ ಸೇರಿಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮಿ ನಿರಾಕರಿಸಿದ್ದಾರೆ. ಇದು ರಾಜಕೀಯವಾದ ವಿಷಯ ಸದ್ಯಕ್ಕೆ ಪ್ರತಿಕ್ರಿಯಿಸಲ್ಲ ಎಂದಿದ್ದಾರೆ.
ರಾಯಚೂರಿನ ಜವಾಹರ ನಗರದ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ರಾಯಚೂರು ಜಿಲ್ಲಾ ಬ್ಲೈಂಡ್ನೆಸ್ ಕಂಟ್ರೋಲ್ ಸೊಸೈಟಿ ಹಾಗೂ ಶಂಕರ್ ನೇತ್ರಾಲಯ, ಕಣ್ಣಿನ ವೈದ್ಯಶಾಲೆ ಸಹಯೋಗದಲ್ಲಿ ಕಣ್ಣಿನ ತಪಾಸಣೆ ಶಿಬಿರದ ಸಮಾರೋಪವನ್ನು ಆಯೋಜಿಸಲಾಗಿತ್ತು.
ಈ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಸುಬುಧೇಂದ್ರ ತೀರ್ಥ ಸ್ವಾಮಿ, ನಾನು ಮೆಡಿಕಲ್ ಕ್ಯಾಂಪ್ ವಿಚಾರವಾಗಿ ಬಂದಿದ್ದೇನೆ. ಮಂತ್ರಾಲಯ ಕರ್ನಾಟಕಕ್ಕೆ ಸೇರಿಸುವ ಬಗ್ಗೆ ಪ್ರತ್ಯೇಕವಾಗಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ಕಳೆದ ಒಂದು ತಿಂಗಳಿಂದ ಆಂಧ್ರದ ರಾಯಲ ಸೀಮಾ ಭಾಗವನ್ನು ಕರ್ನಾಟಕಕ್ಕೆ ಸೇರಿಸುವಂತೆ ದೊಡ್ಡ ಮಟ್ಟದ ಕೂಗು ಕೇಳಿ ಬರುತ್ತಿದೆ. ಈಗಾಗಲೇ ಆಂಧ್ರದ ಟಿಡಿಪಿ ಮಾಜಿ ಶಾಸಕ ತಿಕ್ಕಾರೆಡ್ಡಿ ಕನ್ನಡಿಗರನ್ನು ಒಗ್ಗೂಡಿಸಿ ಹೋರಾಟಕ್ಕೆ ಅಣಿಗೊಳಿಸುತ್ತಿದ್ದಾರೆ.