ರಾಯಚೂರು: ಎಸ್ಎಸ್ಎಲ್ಸಿ ಪರೀಕ್ಷೆ ಹಿನ್ನೆಲೆ ಸ್ಕಾರ್ಪ್, ಬುರ್ಕಾ ಧರಿಸಿ ಬಂದ ವಿದ್ಯಾರ್ಥಿನಿಯರನ್ನ ಪರೀಕ್ಷಾ ಕೇಂದ್ರದ ಒಳಗಡೆ ಹೋಗಲು ಬಿಡುತ್ತಿಲ್ಲ. ಈ ಹಿನ್ನೆಲೆ ರಾಯಚೂರಿನ ಪರೀಕ್ಷಾ ಕೇಂದ್ರಗಳ ಮುಂದೆ ಪೋಷಕರು ಅಧಿಕಾರಿಗಳ ಜೊತೆ ವಾಗ್ವಾದ ಮಾಡಿದ್ದಾರೆ.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಟ್ಯಾಗೋರ್ ಮೆಮೋರಿಯಲ್ ಪರೀಕ್ಷಾ ಕೇಂದ್ರದ ಮುಂದೆ ಈ ಘಟನೆಗಳು ನಡೆದಿವೆ. ಪರೀಕ್ಷಾ ಕೇಂದ್ರದ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ ಪೋಷಕರು, ಮಕ್ಕಳೊಂದಿಗೆ ಪರೀಕ್ಷಾ ಕೆಂದ್ರದ ಒಳಗೆ ಬರಲು ಮುಂದಾಗಿದ್ದರು. ಈ ಹಿನ್ನೆಲೆ ಪೋಷಕರಿಗೆ ತಿಳಿ ಹೇಳಿ ಅಧಿಕಾರಿಗಳು ವಾಪಾಸ್ ಕಳುಹಿಸಿದ್ದಾರೆ. ಇದನ್ನೂ ಓದಿ: ಹದಿಹರೆಯದ ವಯಸ್ಸಲ್ಲಿ ಪ್ರೀತಿ ಪ್ರೇಮ – ಕೆರೆಗೆ ಹಾರಿ ಅಕ್ಕ, ತಂಗಿ ಆತ್ಮಹತ್ಯೆ
ನಗರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಪರೀಕ್ಷಾ ಕೇಂದ್ರದಲ್ಲಿ ಹಿಜಬ್, ಬುರ್ಕಾ ಧರಿಸಿ ಆಗಮಿಸಿದ ವಿದ್ಯಾರ್ಥಿನಿಯರು ಪರೀಕ್ಷಾ ಕೊಠಡಿಯಲ್ಲಿ ಹಿಜಬ್ ತೆಗೆಯುವುದಾಗಿ ಹೇಳಿ ಒಳಗೆ ಹೋಗಿದ್ದಾರೆ. ಆದ್ರೆ ಪರೀಕ್ಷಾ ಕೊಠಡಿಗಳಲ್ಲೂ ಹಿಜಬ್ ಧರಿಸಿಯೆ ವಿದ್ಯಾರ್ಥಿನಿಯರು ಕುಳಿತಿರುವ ದೃಶ್ಯಗಳು ಕಂಡುಬಂದಿವೆ. ಪರೀಕ್ಷೆ ಆರಂಭದ ವೇಳೆ ಹಿಜಬ್ ತೆಗೆಸುವ ಬಗ್ಗೆ ಸಿಬ್ಬಂದಿ ಸಮಜಾಯಿಸಿ ನೀಡಿದ್ದಾರೆ.
ಜಿಲ್ಲೆಯಲ್ಲಿ 114 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, 31,896 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷೆಗಾಗಿ 16 ಜಾಗೃತಿ ದಳ, 114 ಸ್ಥಾನಿಕ ಜಾಗೃತಿ ದಳ ಅಧಿಕಾರಿಗಳು ಸೇರಿದಂತೆ ಅಧೀಕ್ಷಕರು, ಉಪ ಅಧಿಕ್ಷಕರು, ಕಸ್ಟೋಡಿಯನ್ ಸೇರಿ 286 ಅಧಿಕಾರಿಗಳನ್ನು ನೇಮಿಸಲಾಗಿದೆ. ಜಿಲ್ಲೆಯಾದ್ಯಂತ ಎಲ್ಲೆಡೆ ಶಾಂತಿಯುತವಾಗಿ ಇಂದು ಪ್ರಥಮ ಭಾಷೆ ಪರೀಕ್ಷೆ ನಡೆಯುತ್ತಿದೆ. ಇದನ್ನೂ ಓದಿ: ಆಸ್ಕರ್ 2022: ಅತ್ಯುತ್ತಮ ಪೋಷಕ ಪಾತ್ರಗಳಿಗೆ ಅರಿಯಾನಾ ಡಿಬೋಸ್, ಟ್ರಾಯ್ಕೋಟ್ಸೂರ್ಗೆ ಅವಾರ್ಡ್