ರಾಯಚೂರು: ಗ್ರಾಮದಲ್ಲಿ ಬಸ್ ನಿಲ್ಲಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಸಾರಿಗೆ ಬಸ್ ತಡೆದು ಪ್ರತಿಭಟಿಸಿ ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ರಾಯಚೂರಿನ ಸಿಂಧನೂರಿನ ಹೊಸಳ್ಳಿ ಕ್ಯಾಂಪ್ನಲ್ಲಿ ನಡೆದಿದೆ.
ಸಿಂಧನೂರಿನಿಂದ 5 ಕಿ.ಮೀ ದೂರದಲ್ಲಿರುವ ಹೊಸಳ್ಳಿ ಕ್ಯಾಂಪ್ನಲ್ಲಿ ಸಾಮಾನ್ಯ ಬಸ್ಗಳನ್ನೂ ಸಹ ನಿಲ್ಲಿಸಲ್ಲ. ನಿಲ್ಲಿಸಿದರೂ ಪಾಸ್ ಇರುವ ವಿದ್ಯಾರ್ಥಿಗಳನ್ನು ಬಸ್ ಹತ್ತಲು ಚಾಲಕ ಹಾಗೂ ನಿರ್ವಾಹಕರು ಬಿಡುತ್ತಿರಲಿಲ್ಲ. ಇದರಿಂದ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳಲು ತೊಂದರೆ ಅನುಭವಿಸುತ್ತಿದ್ದರು. ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ಮಾಡಿದ್ದಾರೆ.
ಬೆಳಿಗ್ಗೆ 7:30 ರಿಂದ 8:30ರ ಸಮಯದಲ್ಲಿ ಬಸ್ ವ್ಯವಸ್ಥೆ ಮಾಡಲು ಆಗ್ರಹಿಸಿದ್ದಾರೆ. ಚಾಲಕನ ಜೊತೆ ವಿದ್ಯಾರ್ಥಿಗಳು ಮಾತಿನ ಚಕಮಕಿ ನಡೆಸಿ ಥಳಿಸಿದ್ದಾರೆ. ಚಾಲಕ ಸಹ ವಿದ್ಯಾರ್ಥಿಗಳ ಮೇಲೆ ಕೈಮಾಡಿದ್ದಾನೆ. ಬಸ್ ತಡೆದಿದ್ದರಿಂದ ಪ್ರಯಾಣಿಕರು ಪರದಾಡಿದ್ದು ಪ್ರತ್ಯೇಕ ವ್ಯವಸ್ಥೆಯಲ್ಲಿ ತೆರಳಿದ್ದಾರೆ.