ಬೀದರ್: ಜಿಲ್ಲೆಯಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ಔರಾದ್ ತಾಲೂಕಿನ ಗ್ರಾಮವೊಂದರ ಏಕೈಕ ರಸ್ತೆ ಕಡಿತಗೊಂಡಿದ್ದರಿಂದ ಶಾಲೆಗೆ ಹೋಗುತ್ತಿದ್ದ ಮಕ್ಕಳು ಮರಳಿ ಗ್ರಾಮಕ್ಕೆ ವಾಪಸ್ ಆಗುತ್ತಿದ್ದಾರೆ.
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನಿಡೋದಾ ಗ್ರಾಮ ನಡುಗಡೆಯಂತ್ತಾಗಿದ್ದು, ಗ್ರಾಮದ ಜನರು ಈ ಮಹಾಮಳೆಗೆ ಹೈರಾಣಾಗಿ ಹೋಗಿದ್ದಾರೆ. ಒಂದು ಕಡೆ ಮಾಂಜ್ರಾ ನದಿ ಮತ್ತೊಂದು ಕಡೆ ಹಳ್ಳ ತುಂಬಿ ಗ್ರಾಮದಿಂದ ಹೊರ ಹೋಗಲು ಸಾಧ್ಯವಾಗದೇ ಗ್ರಾಮಸ್ಥರು ಹರಸಾಹಸ ಪಡುತ್ತಿದ್ದಾರೆ.
ಸತತ ಮೂರು ಗಂಟೆಗಳಿಂದ ಹೋಬಳಿಗೆ ಹೋಗಲು ಹರಸಾಹಸ ಪಟ್ಟುಕೊಂಡು ಸ್ಥಳದಲ್ಲೇ ಕುಳಿತಿದ್ದಾರೆ. ಸೇತುವೆ ಬಳಿ ನೀರಿನ ಸೆಳೆತ ಹೆಚ್ಚಾಗಿ ಇರೋದ್ರಿಂದ ಮುನ್ನಚ್ಚರಿಕೆ ಕ್ರಮವಾಗಿ ಪೊಲೀಸ್ ಕಣ್ಣಗಾವಲು ಹಾಕಲಾಗಿದೆ. ಮೂರು ವರ್ಷಗಳಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೂ, ಶಾಸಕರಿಗೆ, ಅಧಿಕಾರಿಗಳು ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ. ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಇಂದು ನಾವು ಪರದಾಟ ಅನುಭವಿಸುತ್ತಿದ್ದೇವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಡರಾತ್ರಿ ಸುರಿಯುತ್ತಿರುವ ಮಳೆಗೆ ಒಂದೊಂದೆ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಜಿಲ್ಲೆಯ ಜನರು ಈ ಮಹಾಮಳೆಗೆ ಹೈರಾಣಾಗಿರವುದಂತು ಸುಳ್ಳಲ್ಲ.