ಹೈದರಾಬಾದ್: ಹಾಸ್ಟೆಲ್ ಕಟ್ಟಡದ ನಾಲ್ಕನೇ ಮಹಡಿಯಿಂದ ಜಿಗಿದು ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಕಾಕಿನಾಡದಲ್ಲಿ ನಡೆದಿದೆ.
ಗೋದಾವರಿ ಜಿಲ್ಲೆಯ ಸುರಂಪಲೆಂ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚಿಲುಕುರಿ ಅಲೆಕ್ಯಾ (19) ಮೃತ ವಿದ್ಯಾರ್ಥಿನಿ. ಈಕೆ ಗೋದಾವರಿ ಜಿಲ್ಲೆಯ ಚಿಂತಲಪುಡಿ ಮಂಡಲದ ಪ್ರಗದವರಂ ಗ್ರಾಮದ ನಿವಾಸಿಯಾಗಿದ್ದು, ಆದಿತ್ಯಾ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಳು.
ಮೃತ ವಿದ್ಯಾರ್ಥಿನಿ ಕಳೆದ ಕೆಲವು ವರ್ಷಗಳಿಂದ ತಲೆನೋವಿನಿಂದ ಬಳಲುತ್ತಿದ್ದು, ವಿಜಯವಾಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಭಾನುವಾರ ವಿದ್ಯಾರ್ಥಿನಿ ತಲೆ ನೋವನ್ನು ಸಹಿಸಲಾಗದೆ ಹಾಸ್ಟೆಲ್ ಕಟ್ಟಡದ ನಾಲ್ಕನೇ ಮಹಡಿಯಿಂದ ಹಾರಿದ್ದಾಳೆ.
ಬಿದ್ದ ರಭಸಕ್ಕೆ ವಿದ್ಯಾರ್ಥಿನಿ ತಲೆಗೆ ತೀವ್ರವಾದ ಗಾಯವಾಗಿದೆ. ತಕ್ಷಣ ಸ್ನೇಹಿತರು ನೋಡಿ ಹಾಸ್ಟೆಲ್ ವಾರ್ಡನ್ಗೆ ತಿಳಿಸಿದ್ದಾರೆ. ವಾರ್ಡನ್ ತಕ್ಷಣ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿಯೇ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ವಿದ್ಯಾರ್ಥಿನಿ ತಂದೆ ಕೂಡ ತಲೆನೋವಿನಿಂದ ಬಳಲುತ್ತಿದ್ದಳು ಎಂದು ದೃಢಪಡಿಸಿದ್ದಾರೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಜೊತೆಗೆ ಸ್ಥಳದಲ್ಲಿ ಯಾವುದೇ ಡೆತ್ನೋಟ್ ಕಂಡು ಬಂದಿಲ್ಲ. ಹೀಗಾಗಿ ಕುಟುಂಬದವರು ನೀಡಿದ ದೂರಿ ಆಧಾರದ ಮೇರೆಗೆ ನಾವು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.