ಎರಡು ಬಾರಿ ಪಾಸಾಗಿ, ಒಂದು ಬಾರಿ ಫೇಲ್ ಆಗಿದ್ದಕ್ಕೆ ಆತ್ಮಹತ್ಯೆ

Public TV
1 Min Read
SUCIDE

ಚಂಡೀಗಢ: ಮಹರ್ಷಿ ದಯಾನಂದ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯೊಬ್ಬಳು ಜೂನಿಯರ್ ರಿಸರ್ಚ್ ಫೆಲೋಶಿಪ್ ಪರೀಕ್ಷೆಯಲ್ಲಿ ಫೇಲ್ ಆದ ಕಾರಣ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಯಾಣದ ರೋಹ್ಟಕ್ ನಲ್ಲಿ ನಡೆದಿದೆ.

ರಾಖಿ ರಾಣಿ (24) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಈಕೆ ಝಾಜ್ಜರ್ ತಲಾವ್ ಗ್ರಾಮದವಳಾಗಿದ್ದು, ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದಳು. ರಾಣಿ ಕಳೆದ ವರ್ಷ ಮಹರ್ಷಿ ದಯಾನಂದ ವಿಶ್ವವಿದ್ಯಾನಿಲಯದಲ್ಲಿ ಭೌಗೋಳಿಕ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದ್ದಳು.

ಶನಿವಾರ ಜ್ಯೂನಿಯರ್ ರಿಸರ್ಚ್ ಫೆಲೋಶಿಪ್(ಜೆಆರ್‍ಎಫ್) ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಅದರಲ್ಲಿ ರಾಣಿ ಜೆಆರ್‍ಎಫ್ ಪರೀಕ್ಷೆಯಲ್ಲಿ ಅರ್ಹತಾ ಅಂಕಗಳನ್ನು ಪಡೆಯಲು ಸಾಧ್ಯವಾಗದೇ ಫೇಲ್ ಆಗಿದ್ದಳು. ಇದರಿಂದ ರಾಣಿ ಬೇಸರಗೊಂಡಿದ್ದಳು. ಅಷ್ಟೇ ಅಲ್ಲದೇ ಈಕೆ ಹರಿಯಾಣದಲ್ಲಿ ಶಿಕ್ಷಕ ಅರ್ಹತಾ ಪರೀಕ್ಷೆ (HTET)ಗಾಗಿ ಅಪ್ಲಿಕೇಷನ್ ಹಾಕಿದ್ದು, ಭಾನುವಾರ ಪರೀಕ್ಷೆ ಬರೆಯಬೇಕಿತ್ತು.

ಭಾನುವಾರ ಮೃತ ರಾಣಿಯ ಗೆಳತಿ ರೀನಾ ದೇವಿಯು ಬೆಳಿಗ್ಗೆ ಅವಳನ್ನು ಎಬ್ಬಿಸಲು ರೂಮಿಗೆ ಹೋಗಿದ್ದಾಳೆ. ಆದರೆ ರಾಣಿ ಎಷ್ಟೇ ಕರೆದರೂ ಬಾಗಿಲು ತೆಗೆಯಲಿಲ್ಲ. ಕೊನೆಗೆ ದೇವಿ ರೂಮಿಗೆ ಬಾಗಿಲು ತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ ರೂಮಿನ ಬಾಗಿಲು ಒಳಗಡೆಯಿಂದ ಲಾಕ್ ಮಾಡಲಾಗಿತ್ತು. ನಂತರ ದೇವಿ ಕಿಟಕಿಯ ಮೂಲಕ ರೂಮಿನ ಒಳಗೆ ನೋಡಿದ್ದಾರೆ. ಆಗ ರಾಣಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ದೇವಿ ತಕ್ಷಣ ಎಲ್ಲರನ್ನು ಕೂಗಿದ್ದು, ಹಾಸ್ಟೆಲ್ ವಾರ್ಡನ್ ತಿಳಿಸಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಹಾಸ್ಟೆಲ್ ಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಮೃತ ರಾಣಿ ಎರಡು ಬಾರಿ ನೀಟ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದು, ಜೆಆರ್‍ಎಫ್ ಪಾಸ್ ಆಗಲು ತುಂಬಾ ಕಷ್ಟಪಟ್ಟು ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.

ರಾಣಿ ಸಾವಿನ ಬಗ್ಗೆ ವಿಶ್ವವಿದ್ಯಾನಿಲಯವು ಇನ್ನೂ ಯಾವುದೇ ರೀತಿಯ ಹೇಳಿಕೆಯನ್ನು ನೀಡಿಲ್ಲ. ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ಎಲ್ಲ ಆಯಾಮಗಳಲ್ಲೂ ತನಿಖೆಯನ್ನು ನಡೆಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *