ನೋಯ್ಡಾ: ಕಾನೂನು ಪದವಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಗೆಳೆಯ ತನ್ನ ಫೋನ್ ಕರೆಗೆ ಸ್ಪಂದಿಸಿಲ್ಲ ಎಂದು ವಸತಿ ನಿಲಯದಲ್ಲಿ ನೇಣಿಗೆ ಶರಣಾದ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.
ಹರಿದ್ವಾರದ ಕಂಖಾಲ್ ಮೂಲದ ಸ್ವಾತಿ ಸಾಹ್ನಿ(21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಸ್ವಾತಿ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಪದವಿ ಓದುತ್ತಿದ್ದಳು. ನೋಯ್ಡಾದ ವಸತಿ ನಿಲಯವೊಂದರಲ್ಲಿ ಗೆಳತಿ ಜೊತೆ ವಾಸವಿದ್ದ ಈಕೆ ಭಾನುವಾರ ರಾತ್ರಿ ಕೊಠಡಿಯಲ್ಲಿ ಯಾರು ಇಲ್ಲದ ವೇಳೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಹೊರಗೆ ತೆರೆಳಿದ್ದ ಸ್ವಾತಿಯ ಗೆಳತಿ ವಾಪಾಸ್ಸಾದಾಗ ಈ ಘಟನೆ ಬೆಳಕಿಗೆ ಬಂದಿದೆ. ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಸತಿ ನಿಲಯದಲ್ಲಿದ್ದ ಇತರೇ ವಿದ್ಯಾರ್ಥಿನಿಯರನ್ನು ವಿಚಾರಣೆ ಮಾಡಿದ್ದಾರೆ. ಆಗ ಸ್ವಾತಿ ರಾತ್ರಿ ವೇಳೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವಕನ ಜೊತೆ ಜಗಳವಾಡುತ್ತಿದ್ದಳು. ಬಳಿಕ ಆತ ಫೋನ್ ಕರೆಗೆ ಸ್ಪಂದಿಸುತ್ತಿಲ್ಲ ಎಂದು ಅಳುತ್ತಿದ್ದಳು ಎಂದು ತಿಳಿಸಿದ್ದಾರೆ.
ನಂತರ ಪೊಲೀಸರು ವಿದ್ಯಾರ್ಥಿನಿಯ ಮೊಬೈಲ್ ಪರಿಶೀಲಿಸಿದ್ದಾರೆ. ಆಗ ವಿದ್ಯಾರ್ಥಿನಿ ಹಲವು ಬಾರಿ ಯುವಕನಿಗೆ ಕರೆ ಮಾಡಿರುವ ಮಾಹಿತಿ ದೊರಕಿದೆ. ಈ ಕುರಿತು ವಿದ್ಯಾರ್ಥಿನಿಯ ಕುಟುಂಬಸ್ಥರು ಯಾವುದೇ ದೂರು ನೀಡದಿದ್ದರೂ ಸ್ವಯಂ ಪ್ರೇರಿತ ದೂರನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಮರಣೋತ್ತರ ಪರೀಕ್ಷೆ ಮುಗಿದ ಮೇಲೆ ವಿದ್ಯಾರ್ಥಿನಿಯ ಮೃತದೇಹವನ್ನು ಆಕೆಯ ಕುಟುಂಬಕ್ಕೆ ಒಪ್ಪಿಸಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv