ಮಂಗಳೂರು: ಕೊರೊನಾ ಶಂಕಿತರ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತಷ್ಟು ಕಟ್ಟೆಚ್ಚರ ವಹಿಸಲು ನಿರ್ಧರಿಸಿದೆ. ಈಗಾಗಲೇ ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಗಡಿಭಾಗದಲ್ಲಿ ಕಟ್ಟೆಚ್ಚರಕ್ಕೆ ಸರ್ಕಾರ ಆದೇಶಿಸಿದೆ.
ಕೇರಳದಲ್ಲಿ ಈಗಾಗಲೇ 24 ಕೊರೊನಾ ಪೀಡಿತರಿದ್ದು ನಮ್ಮ ರಾಜ್ಯಕ್ಕೂ ಸೋಂಕು ಹರಡದಂತೆ ಕೇರಳದ ಗಡಿಭಾಗದಲ್ಲಿ ತಪಾಸಣೆಗೆ ಕರ್ನಾಟಕ ಸರ್ಕಾರ ಮುಂದಾಗಿದೆ. ಆದರೆ ಕೇರಳದ ಗಡಿಭಾಗ ತಲಪಾಡಿಯಲ್ಲಿ ಈವರೆಗೂ ಯಾವುದೇ ರೀತಿಯ ತಪಾಸಣೆಗಳು ಆರಂಭಗೊಂಡಿಲ್ಲ.
ಕೇರಳದ ಗಡಿಭಾಗ ಮಂಗಳೂರಿನ ತಲಪಾಡಿಯಲ್ಲಿ ಆರ್ ಟಿಓ, ಅರಣ್ಯ, ಅಬಕಾರಿ ಇಲಾಖೆಯ ಚೆಕ್ ಪೋಸ್ಟ್ ಗಳಿದ್ದು, ಅಲ್ಲಿ ವಾಹನಗಳ ತಪಾಸಣೆ ಎಂದಿನಂತೆ ನಡೆಯುತ್ತಿದೆ. ಆದರೆ ಕಾರು, ಜೀಪು, ಬಸ್ ಸೇರಿದಂತೆ ಇತರೆ ವಾಹನಗಳಲ್ಲಿ ಸಂಚರಿಸುವ ಜನರನ್ನು ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ತಪಾಸಣೆ ಮಾಡುವ ಕೇಂದ್ರಗಳನ್ನು ಇನ್ನೂ ಆರಂಭಿಸಿಲ್ಲ.
ಜೊತೆಗೆ ಕೇರಳದಿಂದ ರೈಲು ಮೂಲಕವೂ ಪ್ರತಿದಿನ ಸಾವಿರಾರು ಮಂದಿ ಮಂಗಳೂರಿಗೆ ಬರುತ್ತಾರೆ. ಅವರನ್ನೂ ತಪಾಸಣೆ ಮಾಡುತ್ತಿಲ್ಲ. ಹೀಗಾಗಿ ಸರಿಯಾದ ತಪಾಸಣೆಗಳು ನಡೆದರೆ ಮಂಗಳೂರು ಸೇರಿದಂತೆ ರಾಜ್ಯಕ್ಕೆ ಬರುವ ಕೊರೊನಾ ಪೀಡಿತರನ್ನು ತಡೆಗಟ್ಟಬಹುದಾಗಿದೆ.