ಸೇಲಂ: ಹುಚ್ಚು ಹಿಡಿದಿದ್ದ ಬೀದಿ ನಾಯಿಯೊಂದು ಬರೋಬ್ಬರಿ 60ಕ್ಕೂ ಹೆಚ್ಚು ಮಂದಿ ಪಾದಚಾರಿಗಳ ಮೇಲೆ ದಾಳಿ ನಡೆಸಿ, ಅವರನ್ನು ಆಸ್ಪತ್ರೆಯತ್ತ ಮುಖಮಾಡುವಂತೆ ಮಾಡಿರುವ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ.
ಮೊದಲು ಕಿಚ್ಚಪಾಳ್ಯಂ ಪ್ರದೇಶದಲ್ಲಿ ಕಾಣಿಸಿಕೊಂಡ ಹುಚ್ಚು ನಾಯಿ ತನ್ನಷ್ಟಕ್ಕೆ ಬೀದಿ ಬೀದಿಗಳಲ್ಲಿ ಓಡಾಡುತ್ತಿತ್ತು. ಆದರೆ ಏಕಾಏಕಿ ಶುಕ್ರವಾರದಂದು ದಾರಿಹೋಕರಿಗೆ ಕಚ್ಚಿದೆ. ಬಳಿಕ ಸೇಲಂನ ಗಾಂಧಿ ಮಹಾನ್ ಪ್ರದೇಶ, ಕಲರಂಪಟ್ಟಿ, ಕುರಿಂಜಿನಗರ, ನಾರಾಯಣನ್ ನಗರ ಹಾಗೂ ಪಂಚಪಟ್ಟಿ ಪ್ರದೇಶಕ್ಕೆ ತೆರಳಿ ಸುಮಾರು 60ಕ್ಕೂ ಹೆಚ್ಚು ಮಂದಿ ಪಾದಚಾರಿಗಳಿಗೆ ಕಚ್ಚಿ ಹಲ್ಲೆ ಮಾಡಿದೆ.
ಕಣ್ಣಿಗೆ ಕಂಡವರ ಮೇಲೆಲ್ಲಾ ಹುಚ್ಚು ನಾಯಿ ಎಗರಿ ಕಚ್ಚಿದಾಗ ರೊಚ್ಚಿಗೆದ್ದ ಸ್ಥಳೀಯರು, ತಕ್ಷಣ ನಾಯಿಯನ್ನು ಹೊಡೆದು ಕೊಂದಿದ್ದಾರೆ. ಮೊದಲು ಕಿಚ್ಚಪಾಳ್ಯಂ ಪ್ರದೇಶದಲ್ಲಿ ಓಡಾಡುತ್ತಿತ್ತು, ಆದರೆ ಏಕಾಏಕಿ ಈ ರೀತಿ ಕಚ್ಚಿ ನಾಗರೀಕರನ್ನು ಆಸ್ಪತ್ರೆ ಪಾಲು ಮಾಡಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಆ ಬಳಿಕ ನಾಯಿ ಕಡಿತಕ್ಕೆ ತುತ್ತಾದವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, 2 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೀದಿಗಳಲ್ಲಿ ನಾಯಿಗಳ ಕಾಟ ಹೆಚ್ಚಾಗಿದೆ ಎಂದು ದೂರು ನೀಡಿದ್ದರೂ ಸೇಲಂ ನಗರಪಾಲಿಕೆ ಕ್ಯಾರೆ ಎನ್ನುತ್ತಿಲ್ಲ. ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ ನಗರಪಾಲಿಕೆ ಸಿಬ್ಬಂದಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.