Public TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos

Archives

  • November 2025
  • October 2025
  • September 2025
  • August 2025
  • July 2025
  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021
  • September 2021
  • August 2021
  • July 2021
  • June 2021
  • May 2021
  • April 2021
  • March 2021
  • February 2021
  • January 2021
  • December 2020
  • November 2020
  • October 2020
  • September 2020
  • August 2020
  • July 2020
  • June 2020
  • May 2020
  • April 2020
  • March 2020
  • February 2020
  • January 2020
  • December 2019
  • November 2019
  • October 2019
  • September 2019
  • August 2019
  • July 2019
  • June 2019
  • May 2019
  • April 2019
  • March 2019
  • February 2019
  • January 2019
  • December 2018
  • November 2018
  • October 2018
  • September 2018
  • August 2018
  • July 2018
  • June 2018
  • May 2018
  • April 2018
  • March 2018
  • February 2018
  • January 2018
  • December 2017
  • November 2017
  • October 2017
  • September 2017
  • August 2017
  • July 2017
  • June 2017
  • May 2017
  • April 2017
  • March 2017
  • February 2017

Categories

  • 31 Districts
  • Advertisement
  • Astrology
  • Automobile
  • Ayodhya Ram Mandir
  • Ayodhya Updates
  • Bagalkot
  • BELAKU
  • Belgaum
  • Bellary
  • Bengaluru City
  • Bengaluru Rural
  • Bidar
  • Big Bulletin
  • Bollywood
  • Chamarajanagar
  • Chikkaballapur
  • Chikkamagaluru
  • Chitradurga
  • Cinema
  • Column
  • Corona
  • Court
  • Cricket
  • Crime
  • Dakshina Kannada
  • Davanagere
  • Delhi Election 2025
  • Dharwad
  • Dina Bhavishya
  • Districts
  • Education
  • Election News
  • Entertainment Videos
  • Explainer
  • Fashion
  • Featured
  • Food
  • Gadag
  • Hassan
  • Haveri
  • Health
  • Kalaburagi
  • Karnataka
  • Karnataka Budget 2022
  • Karnataka Budget 2023
  • Karnataka Budget 2024
  • Karnataka Election
  • Karnataka Election 2023
  • Kodagu
  • Kolar
  • Koppal
  • Latest
  • Main Post
  • Mandya
  • Monsoon
  • Most Shared
  • Mysuru
  • National
  • National
  • News Videos
  • Non Veg
  • Other Sports
  • Out of the box
  • Photos
  • Political News
  • Public Hero
  • Raichur
  • Ramanagara
  • Rameshwaram Cafe
  • Sandalwood
  • Shivamogga
  • Smartphones
  • South cinema
  • Special
  • Sports
  • States
  • Stories
  • Tech
  • Telangana
  • Telecom
  • Top Stories
  • Travel
  • Tumakuru
  • TV Shows
  • Udupi
  • Uncategorized
  • Uttara Kannada
  • Veg
  • Videos
  • Vijayapura
  • World
  • Yadgir
  • ಆತ್ಮಹತ್ಯೆ
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Karnataka

ಛಿದ್ರ ಛಿದ್ರವಾದ ಆ ಬಸ್ಸಿನಲ್ಲಿದ್ದ 40 ವೀರ ಯೋಧರ ರೋಚಕ ಕಥೆ ನಿಮಗೆ ತಿಳಿದಿರಲೇಬೇಕು

Public TV
Last updated: February 16, 2019 3:20 pm
Public TV
Share
25 Min Read
CRPF Jawans
SHARE

ಬೆಂಗಳೂರು: ಪುಲ್ವಾಮಾದ ಆವಂತಿಪುರದಲ್ಲಿ ನಡೆದ ಭಯಾನಕ ಉಗ್ರ ದಾಳಿಯಲ್ಲಿ ಭಾರತದ 16 ರಾಜ್ಯಗಳ ಒಟ್ಟು 40 ಯೋಧರು ವೀರಮರಣವನ್ನಪ್ಪಿದ್ದಾರೆ. ಅವರೆಲ್ಲರ ಬಗ್ಗೆ ಒಂದಷ್ಟು ಮಾಹಿತಿ ನೀವು ತಿಳಿದುಕೊಳ್ಳಲೇಬೇಕು. ಮೊನ್ನೆ ವೀರಮರಣವನ್ನಪ್ಪಿದವರಲ್ಲಿ ಹಲವರು ಆಗಷ್ಟೇ ರಜೆ ಮುಗಿಸಿ ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಬಂದವರು. ಮೊನ್ನೆಯಷ್ಟೇ ನಮ್ಮ ಕಣ್ಣಮುಂದಿನಿಂದ ಹೊರಟು ನಿಂತವರು ಇಂದು ನಮ್ಮ ಜೊತೆ ಇಲ್ಲ ಎನ್ನುವಂತಹ ಪರಿಸ್ಥಿತಿ ಈ ಯೋಧರ ಕುಟುಂಬದ್ದು. ಬಸ್ ಹತ್ತಿದಾಗ ಫೋನ್ ಮಾಡಿದವರಿದ್ದಾರೆ, ಬಸ್ ಇಳಿದ ಮೇಲೆ ಫೋನ್ ಮಾಡ್ತೀನಿ ಎಂದು ಫೋನಿಟ್ಟ ಯೋಧರೂ ಇದ್ದಾರೆ. ಒಂದಂತೂ ನಿಜ ಅವರು ಯಾರಿಗೂ ಅದು ತಮ್ಮ ಜೀವನದ ಕೊನೆಯ ಯಾತ್ರೆಯಾಗುತ್ತದೆ ಎಂಬುದರ ಅರಿವೇ ಇರಲಿಲ್ಲ. ವೀರ ಮರಣವನ್ನಪ್ಪಿದ ನಮ್ಮ ನೆಲದ ಆ 40 ಯೋಧರ ಕಥೆಯಿದು.

Contents
  • ಕರ್ನಾಟಕ
  • ಉತ್ತರ ಪ್ರದೇಶ
  • ಕೇರಳ
  • ರಾಜಸ್ಥಾನ
  • ಪಂಜಾಬ್
  • ಉತ್ತರಾಖಂಡ
  • ಮಹಾರಾಷ್ಟ್ರ
  • ತಮಿಳುನಾಡು
  • ಜಾರ್ಖಂಡ್
  • ಪಶ್ಚಿಮ ಬಂಗಾಳ
  • ಅಸ್ಸಾಂ
  • ಒಡಿಶಾ
  • ಬಿಹಾರ್
  • ಹಿಮಾಚಲ ಪ್ರದೇಶ
  • ಮಧ್ಯಪ್ರದೇಶ
  • ಜಮ್ಮು ಮತ್ತು ಕಾಶ್ಮೀರ

ಕರ್ನಾಟಕ

ಗುರು ಎಚ್, ವಯಸ್ಸು-33, ಪೇದೆ, ಊರು: ಗುಡಿಗೆರೆ ಕಾಲೋನಿ, ಮಂಡ್ಯ

Guu 2
ಗುರು ಅವರು ಸಿ.ಆರ್.ಪಿ.ಎಫ್.ನ 82ನೇ ಬೆಟಾಲಿಯನ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದು, 2011ರಲ್ಲಿ ಸಿ.ಆರ್.ಪಿ.ಎಫ್.ಗೆ ಸೇರ್ಪಡೆಯಾಗಿದ್ದರು. ಜಾರ್ಖಂಡ್ ನಲ್ಲಿ 94ನೇ ಬೆಟಾಲಿಯನ್ ನಲ್ಲಿದ್ದ ಗುರು ಬಳಿಕ ಶ್ರೀನಗರದಲ್ಲಿ ಸೇವೆ ಸಲ್ಲಿಸಲು ನಿಯೋಜನೆಗೊಂಡಿದ್ದರು. ಗುಡಿಗೆರೆ ಕಾಲೋನಿಯ ಹೊನ್ನಯ್ಯ ಹಾಗೂ ಚಿಕ್ಕೋಳಮ್ಮ ದಂಪತಿಯ ಮೂವರು ಮಕ್ಕಳಲ್ಲಿ ಹಿರಿಯ ಪುತ್ರ ಗುರು. ಇವರಿಗೆ ಇಬ್ಬರು ತಮ್ಮಂದಿರಿದ್ದು ಮಧು ಕೆಇಬಿಯಲ್ಲಿ ಕೆಲಸ ಮಾಡುತ್ತಿದ್ದು, ಆನಂದ್ ಹೋಂ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಗುರು ಅವರ ಅಪ್ಪ ಅಮ್ಮ ಕೆಎಂ ದೊಡ್ಡಿಯಲ್ಲಿ ಇಸ್ತ್ರಿ ಅಂಗಡಿ ಇಟ್ಟುಕೊಂಡು ದುಡಿಯುತ್ತಿದ್ದರು.  www.publictv.in

ಒಂದು ವರ್ಷ ಹಿಂದೆ ಗೃಹ ಪ್ರವೇಶ ಮಾಡಿಕೊಂಡಿದ್ದ ಗುರು ಅವರಿಗೆ 10 ತಿಂಗಳ ಹಿಂದೆ ಮದುವೆಯಾಗಿತ್ತು. ಸ್ವಂತ ಮಾವನ ಮಗಳಾದ, ಹಲಗೂರು ಬಳಿಯ ಸಾಸಲಾಪುರ ಗ್ರಾಮದವರಾದ ಕಲಾವತಿಯನ್ನು ವಿವಾಹವಾಗಿದ್ದರು. 15 ದಿನದ ಹಿಂದೆ ರಜೆಗೆಂದು ಬಂದಿದ್ದ ಗುರು ಅವರು ಫೆಬ್ರವರಿ 10ರಂದು ಗುಡಿಗೆರೆ ಕಾಲೋನಿಯಿಂದ ರಜೆ ಮುಗಿಸಿಕೊಂಡು ಹೊರಟಿದ್ದರು. ಹೀಗೆ ಹೊರಟಿದ್ದ ಗುರು ಗುರುವಾರವಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ, ಕರ್ತವ್ಯಕ್ಕೆ ವಾಪಸ್ ಬರುತ್ತಿದ್ದಂತೆಯೇ ಮಾರಣಹೋಮದಲ್ಲಿ ಸಾವನ್ನಪ್ಪಿದ್ದು ವಿಧಿ ವಿಪರ್ಯಾಸ. ಘಟನೆ ನಡೆದ ದಿನ ಬೆಳಗ್ಗೆ 11 ಗಂಟೆ ಸುಮಾರಿಗೆ ಪತ್ನಿಗೆ ಕಾಲ್ ಮಾಡಿದ್ದರು. ಆದರೆ ಮನೆ ಕೆಲಸದಲ್ಲಿ ನಿರತರಾಗಿದ್ದ ಪತ್ನಿ ಕಲಾವತಿ ಆಮೇಲೆ ಮಾತನಾಡಿದರಾಯಿತು ಎಂದು ಫೋನ್ ಕರೆ ಸ್ವೀಕರಿಸಿರಲಿಲ್ಲ.

ಉತ್ತರ ಪ್ರದೇಶ

ಶ್ಯಾಂ ಬಾಬು, ವಯಸ್ಸು – 32, ಪೇದೆ, ಊರು – ಕಾನ್ಪುರ

shyam babu
ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಶ್ಯಾಂ ಬಾಬು ತಂದೆ ರಾಮ್ ಪ್ರಸಾದ್ (60) ಅವರಿಗೆ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪುತ್ರ ಹುತಾತ್ಮನಾದ ಸುದ್ದಿ ತಿಳಿಯುತ್ತದೆ. 29 ವರ್ಷದ ಪತ್ನಿ ರೂಬಿ ದೇವಿ, 5 ವರ್ಷದ ಪುತ್ರ ಆಯುಷ್ ಹಾಗೂ 6 ತಿಂಗಳ ಹಸುಗೂಸು ಆಯುಷಿಯನ್ನು ಅಗಲಿದ್ದಾರೆ.

6 ವರ್ಷದ ಹಿಂದೆಯಷ್ಟೇ ಶ್ಯಾಂ ಬಾಬುವಿಗೆ ಮದುವೆಯಾಗಿತ್ತು. 2005ರಲ್ಲಿ ಸಿ.ಆರ್.ಪಿ.ಎಫ್.ನಲ್ಲಿ ಸೇವೆಗೆ ನಿಯೋಜನೆಗೊಂಡಿದ್ದರು. ಸದ್ಯ ಅವರ ಮನೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು 45 ದಿನಗಳ ರಜೆಗಾಗಿ ಡಿಸೆಂಬರ್ ತಿಂಗಳಲ್ಲಿ ಊರಿಗೆ ಬಂದು ಹೋಗಿದ್ದರು. ಜನವರಿ 29ಕ್ಕೆ ಕೆಲಸಕ್ಕೆ ಮತ್ತೆ ಹಾಜರಾಗಿದ್ದ ಶ್ಯಾಂ ಬಾಬು ಫೆಬ್ರವರಿ 1ರಂದು ಮತ್ತೆ ವಾಪಸ್ ಬಂದಿದ್ದರು. ಫೆ.10ಕ್ಕೆ ಮತ್ತೆ ಹೊರಟು ನಿಂತಾಗ ಅದೇ ನಮ್ಮ ಕೊನೆಯ ಭೇಟಿ ಆಗಿರಬಹುದು ಎಂದು ಕನಸು ಮನಸಿನಲ್ಲೂ ಊಹಿಸಿರಲಿಲ್ಲ ಎಂದು ಸಂಬಂಧಿಕರು ಹೇಳುತ್ತಿದ್ದಾರೆ. www.publictv.in

ಅಜಿತ್ ಕುಮಾರ್ ಆಜಾದ್, ವಯಸ್ಸು 32, ಪೇದೆ, ಊರು – ಉನ್ನಾವ್

ajit kumar azad
ಆದಾಯ ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿ ಪ್ಯಾರೇಲಾಲ್ ಎಂಬವರ ಪುತ್ರ. ಪುತ್ರನನ್ನು ಕಳೆದುಕೊಂಡ ದುಃಖವಿದೆ. ಆದರೆ ನನ್ನ ಮಗ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ. ಈ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಹೇಳುತ್ತಿದ್ದಾರೆ ಪ್ಯಾರೇಲಾಲ್. 2007ರಲ್ಲಿ ಸಿ.ಆರ್.ಪಿ.ಎಫ್.ನಲ್ಲಿ ಸೇವೆಗೆ ಸೇರಿದ ದಿನದಿಂದಲೂ ಅಜಿತ್ ಕುಮಾರ್ ತಂದೆ ಬಳಿ, ಒಂದಲ್ಲಾ ಒಂದು ದಿನ ನೀವು ನಾನು ದೇಶಕ್ಕಾಗಿ ಪ್ರಾಣ ಬಿಟ್ಟೆ ಎಂಬ ಸುದ್ದಿಯನ್ನು ಕೇಳುತ್ತೀರಿ ಎಂದು ಹೇಳುತ್ತಿದ್ದರಂತೆ. ನಾನು ಮಗನ ಬಳಿ ಕೆಲಸ ಬಿಡು ಎಂದರೂ ಆತ ಕೇಳುತ್ತಿರಲಿಲ್ಲ. ದೇಶಸೇವೆ ಮಾಡುವುದೇ ನನ್ನ ಕೆಲಸ ಎನ್ನುತ್ತಿದ್ದ. ಇದೇ ಜನವರಿಯಲ್ಲಿ ಒಂದು ತಿಂಗಳ ರಜೆಯಲ್ಲಿ ಬಂದಿದ್ದ. ಫೆಬ್ರವರಿ 10ಕ್ಕೆ ವಾಪಸ್ ಶ್ರೀನಗರಕ್ಕೆ ತೆರಳಬೇಕಾದರೆ ನಾನು ಜೂನ್‍ನಲ್ಲಿ ವಾಪಸ್ ಬರುತ್ತೇನೆ ಎಂದು ಪ್ಯಾರೇಲಾಲ್ ಅವರಿಗೆ ಹೇಳಿದ್ದರಂತೆ. ಪಬ್ಲಿಕ್ ಟಿವಿ

Pulwama terror attack

ಐವರು ಸಹೋದರರಲ್ಲಿ ಅಜಿತ್ ದೊಡ್ಡವನು. ಪತ್ನಿ ಮೀನಾ (28), 9 ವರ್ಷದ ಇಶಾ, 7 ವರ್ಷದ ಶ್ರೇಯಾ ಪುತ್ರಿಯರು. ನನ್ನ ಅಪ್ಪ ತುಂಬಾ ಒಳ್ಳೆಯ ವ್ಯಕ್ತಿ. ನಮಗೆ ಒಳ್ಳೆಯದನ್ನೇ ಹೇಳಿಕೊಟ್ಟಿದ್ದಾರೆ. ಎಂದಿಗೂ ನಮ್ಮನ್ನು ಜಗಳವಾಡಲು ಬಿಟ್ಟಿಲ್ಲ. ಹಿರಿಯರನ್ನು ಗೌರವಿಸುವುದನ್ನು ಹೇಳಿಕೊಟ್ಟಿದ್ದಾರೆ ಎನ್ನುತ್ತಾಳೆ ಇಶಾ. ನಾನು ಡಾಕ್ಟರ್ ಆಗಬೇಕು. ತಂಗಿ ಸೇನೆಯನ್ನು ಸೇರಬೇಕು ಎನ್ನುವುದು ನನ್ನ ಅಪ್ಪನ ಕನಸಾಗಿತ್ತು. ನಾವಿಬ್ಬರೂ ಆರ್ಮಿ ಸ್ಕೂಲ್ ಸೇರುತ್ತೇವೆ ಎಂದು ಮಾತು ಮುಗಿಸಿದಳು ಇಶಾ.

ಅಮಿತ್ ಕುಮಾರ್, ವಯಸ್ಸು- 22, ಪೇದೆ, ಊರು – ಶಾಮ್ಲಿ.

amit kumar
ಶಾಮ್ಲಿಯ ರೇಲ್‍ಪಾರ್ ಪ್ರದೇಶದ ನಿವಾಸಿ. ಗುರುವಾರ ಸಂಜೆ ಪುಲ್ವಾಮಾದಲ್ಲಿ ಉಗ್ರರ ಆತ್ಮಾಹುತಿ ದಾಳಿ ನಡೆದ ಸುದ್ದಿಯನ್ನು ನ್ಯೂಸ್ ಚಾನೆಲ್ ಗಳಲ್ಲಿ ವೀಕ್ಷಿಸುತ್ತಿದ್ದ ಅಮಿತ್ ಕುಮಾರ್ ಸಹೋದರ ಪ್ರಮೋದ್ ಸಿಂಗ್ ಅವರಿಗೆ ತನ್ನ ಸೋದರನೂ ಇದೇ ಬಸ್ ನಲ್ಲಿದ್ದ ಎಂಬ ವಿಷಯವೇ ತಿಳಿದಿರಲಿಲ್ಲ. ಆದರೆ ಶುಕ್ರವಾರ ಬೆಳಗ್ಗೆ ಜಮ್ಮು ಕಾಶ್ಮೀರದಿಂದ ಸಿ.ಆರ್.ಪಿ.ಎಫ್ ಅಧಿಕಾರಿಯೊಬ್ಬರು ಕರೆ ಮಾಡಿ ಅಮಿತ್ ಕುಮಾರ್ ಹುತಾತ್ಮನಾದ ವಿಷಯ ತಿಳಿಸಿದ್ದಾರೆ. ಬೆಳಗ್ಗೆ ವಿಚಾರ ತಿಳಿದಾಗ ನಮಗೆ ಶಾಕ್ ಆಯಿತು. ಅಮಿತ್ ನಮ್ಮ ಜೊತೆಗಿಲ್ಲ ಎನ್ನುವುದನ್ನು ನಂಬಲು ನಮಗೆ ಸಾಧ್ಯವಾಗುತ್ತಿಲ್ಲ. www.publictv.in

2017ರಲ್ಲಿ ನಮ್ಮ ಸಹೋದರ ಅಮಿತ್ ಸಿ.ಆರ್.ಪಿ.ಎಫ್.ಗೆ ಸೇರ್ಪಡೆಯಾಗಿದ್ದ. ನಮ್ಮ ಕುಟುಂಬದಿಂದ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸಲು ಸೇರ್ಪಡೆಯಾಗಿದ್ದ ಏಕೈಕ ವ್ಯಕ್ತಿಯಾಗಿದ್ದ ಅಮಿತ್. ನಮ್ಮ ಕುಟುಂಬದ ಎಲ್ಲಾ ಯುವಕರಿಗೂ ಅಮಿತ್ ಸ್ಫೂರ್ತಿಯಾಗಿದ್ದ ಎನ್ನುತ್ತಾರೆ ಅಮಿತ್ ಅವರ ಮತ್ತೊಬ್ಬ ಸಹೋದರ ಅರ್ಜುನ್ ಸಿಂಗ್. 15 ದಿನದ ರಜೆಗೆಂದು ಊರಿಗೆ ಬಂದಿದ್ದ ಅಮಿತ್ ಫೆಬ್ರವರಿ 12ರಂದು ವಾಪಾಸಾಗಿದ್ದರು. ಗುರುವಾರ ನಾವು ಅಮಿತ್ ಜೊತೆ ಮಾತಾನಾಡಿದ್ದೆವು. ಕುಟುಂಬದ ಎಲ್ಲಾ ಸದಸ್ಯರ ಬಗ್ಗೆಯೂ ಅಮಿತ್ ವಿಚಾರಿಸಿದ್ದರಂತೆ.

ಪ್ರದೀಪ್ ಕುಮಾರ್, ವಯಸ್ಸು – 38, ಪೇದೆ, ಊರು – ಶಾಮ್ಲಿ.

pradeep kumar
2003ರಲ್ಲಿ ಸಿ.ಆರ್.ಪಿ.ಎಫ್.ಗೆ ಸೇರ್ಪಡೆಯಾಗಿದ್ದರು. ಶಾಮ್ಲಿಬ ಬಾನತ್ ನಿವಾಸಿ. ಪತ್ನಿ ಶರ್ಮಿಷ್ಠಾ ದೇವಿ, ಸಿದ್ದಾರ್ಥ್ ಮತ್ತು ವಿಜಯಾಂತ್ ಪುತ್ರರು. ಗುರುವಾರ ರಾತ್ರಿ ನಮಗೆ ಅಪ್ಪನ ಸಾವಿನ ಸುದ್ದಿ ತಿಳಿಯಿತು. ಇದಕ್ಕೂ ಮುನ್ನ ನಾವು ಜಮ್ಮ ಕಾಶ್ಮೀರಕ್ಕೆ ಫೋನ್ ಕಾಲ್ ಮಾಡಿ ವಿಷಯ ತಿಳಿಯಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಆ ಬಸ್‍ನಲ್ಲಿ ನಮ್ಮ ಅಪ್ಪ ಇದ್ದರಾ ಎಂಬುದನ್ನು ತಿಳಿಯಲು ನ್ಯೂಸ್ ಚಾನೆಲ್ ನೋಡುತ್ತಿದ್ದೆವು ಎನ್ನುತ್ತಾನೆ ಹಿರಿಯ ಪುತ್ರ ಸಿದ್ಧಾರ್ಥ್. ಪ್ರದೀಪ್ ಹಿರಿಯ ಸೋದರ ಅಮಿತ್ ಕುಮಾರ್ ಇದೇ ತಿಂಗಳಲ್ಲಿ ಸೇನೆಯಿಂದ ನಿವೃತ್ತರಾಗಿದ್ದಾರೆ.

Pulwama Terror Attack

ಯುವಕರು ಸೇನೆ ಸೇರಬೇಕು ಎಂದು ನಮ್ಮಪ್ಪ ಪ್ರೇರೇಪಣೆ ನೀಡುತ್ತಿದ್ದರು. 15 ದಿನದ ರಜೆ ಮುಗಿಸಿ ಫೆಬ್ರವರಿ 12ರಂದು ಮತ್ತೆ ದೇಶಕ್ಕಾಗಿ ಸೇವೆ ಸಲ್ಲಿಸಲು ಹೊರಟಿದ್ದರು. ಗುರುವಾರ ಫೋನ್ ಮಾಡಿ ನಮ್ಮನ್ನು ವಿಚಾರಿಸಿಕೊಂಡಿದ್ದರು. ಆದರೆ ಆ ವೇಳೆ ಮಾತನಾಡಿದ್ದೇ ಕೊನೆಯಾಗುತ್ತದೆ ಎಂದು ನಾವಂದುಕೊಂಡಿರಲಿಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತು ಮಾತು ಮುಗಿಸಿದ ಸಿದ್ಧಾರ್ಥ್. www.publictv.in

ಪ್ರದೀಪ್ ಸಿಂಗ್, ವಯಸ್ಸು – 35, ಪೇದೆ, ಊರು – ಕನೌಜ್.

pradeep singh
ಕನೌಜ್ ನ ಆಜಾನ್ ಗ್ರಾಮದ ನಿವಾಸಿ. ಬುಧವಾರ ಬೆಳಗ್ಗೆ ಫೋನ್ ಮಾಡಿ ಕುಟುಂಬಸ್ಥರ ಜೊತೆ ಮಾತನಾಡಿದ್ದ ಪ್ರದೀಪ್ ಆಗಷ್ಟೇ ಜಮ್ಮುವಿನಿಂದ ಶ್ರೀನಗರಕ್ಕೆ ಹೊರಡುವುದಾಗಿ ಹೇಳಿದ್ದರು. ಆದರೆ ಸಂಜೆ ವೇಳೆ ಪ್ರದೀಪ್ ಸಾವಿನ ಸುದ್ದಿ ತಿಳಿಯಿತು ಎನ್ನುತ್ತಾರೆ ಸಂಬಂಧಿ ನೀರಜ್ ಯಾದವ್. ಪತ್ನಿ ನೀರಜಾ ದೇವಿ, 11 ವರ್ಷದ ಪುತ್ರಿ ಸುಪ್ರಿಯಾ ಹಾಗೂ 3 ವರ್ಷದ ಮಗು ಸೋನಾ. ಸಿ.ಆರ್.ಪಿ.ಎಫ್.ಗೆ 2003ರಲ್ಲೇ ಸೇರ್ಪಡೆಯಾಗಿದ್ದರೂ ಬೇರೆ ಬೇರೆ ಕಾರಣಗಳಿಂದ ಪ್ರದೀಪ್ ಗೆ ಭಡ್ತಿ ಸಿಕ್ಕಿರಲಿಲ್ಲ. ಕನೌಜ್ ನಲ್ಲಿ ಮನೆ ಕಟ್ಟಲು ಬ್ಯಾಂಕ್ ಲೋನ್ ಮಾಡಿಕೊಂಡಿದ್ದರು. ಇದರಲ್ಲಿ ಸ್ವಲ್ಪ ಮೊತ್ತ ಮರುಪಾವತಿಯಾಗಿದೆ. ಇನ್ನುಳಿದ ಹಣವನ್ನು ಪತ್ನಿಯೇ ಕಟ್ಟಬೇಕು. ಆದರೆ ಪತ್ನಿ ನೀರಜಾಗೆ ಉದ್ಯೋಗವಿಲ್ಲ. ಅವರು ಹೇಗೆ ಲೋನ್ ಕಟ್ಟುತ್ತಾರೆ ಅನ್ನೋದೇ ಸದ್ಯ ಸಂಬಂಧಿಕರ ಆತಂಕ. ಒಂದು ತಿಂಗಳ ರಜೆಯಲ್ಲಿ ಬಂದಿದ್ದ ಪ್ರದೀಪ್ ಫೆಬ್ರವರಿ 10ರಲ್ಲಿ ರಜೆ ಮುಗಿಸಿ ಹೊರಟಿದ್ದರು.

ವಿಜಯ್ ಕುಮಾರ್ ಮೌರ್ಯ, ವಯಸ್ಸು – 38, ಪೇದೆ, ಊರು – ದೇವರಿಯಾ.

vijay kumar mourya
ಭತ್ನಿಯ ದೇವರಿಯಾ ನಿವಾಸಿ. 2008ರಲ್ಲಿ ಸಿ.ಆರ್.ಪಿ.ಎಫ್.ಗೆ ಸೇರ್ಪಡೆಯಾಗಿದ್ದರು. ಪತ್ನಿ ವಿಜಯಲಕ್ಷ್ಮಿ ಹಾಗೂ 2 ವರ್ಷದ ಮಗಳು ಆರಾಧ್ಯ.

ಯಾವಾಗ ದಾಳಿಯ ವಿಚಾರ ತಿಳಿಯಿತೋ ತಕ್ಷಣ ಕುಟುಂಬದವರು ಫೋನ್ ಮಾಡಿ ಏನಾಯಿತು ಎಂದು ತಿಳಿಯಲು ಯತ್ನಿಸಿದ್ದಾರೆ. ಆದರೆ ಯಾರಿಗೆ ಫೋನ್ ಮಾಡಿದರೂ ಸರಿಯಾದ ಉತ್ತರ ಸಿಕ್ಕಿರಲಿಲ್ಲ. ಆದರೆ ಘಟನೆ ನಡೆದ ದಿನ ಸಂಜೆ ಸಿ.ಆರ್.ಪಿ.ಎಫ್. ಅಧಿಕಾರಿಯೊಬ್ಬರು ಫೋನ್ ಮಾಡಿ ವಿಜಯ್ ಕುಮಾರ್ ಸಾವನ್ನು ಖಚಿತಪಡಿಸಿದ್ದರು ಎನ್ನುತ್ತಾರೆ ವಿಜಯ್ ಅಳಿಯ ಬಾಲ್ಮೀಕಿ ಕುಶ್ವಾ. 10 ದಿನದ ರಜೆಗೆ ಬಂದಿದ್ದ ವಿಜಯ್ ಫೆಬ್ರವರಿ 9ರಂದು ಕರ್ತವ್ಯಕ್ಕೆ ಹೊರಟಿದ್ದರು. www.publictv.in

ಪಂಕಜ್ ಕುಮಾರ್ ತ್ರಿಪಾಠಿ, ವಯಸ್ಸು -26, ಪೇದೆ, ಊರು – ಮಹಾರಾಜ್ ಗಂಜ್.

pankaj kumar
ಗುರುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಪಂಕಜ್ ಕುಮಾರ್ ತ್ರಿಪಾಠಿ ಪತ್ನಿ ರೋಹಿಣಿಗೆ ಕರೆ ಮಾಡಿದ್ದರು. ಆದರೆ ಇದಾಗಿ ಕೆಲವೇ ಗಂಟೆಗಳಲ್ಲಿ ಭಯಾನಕ ಸುದ್ದಿ ಟಿವಿಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ನಮಗೆ ವಿಷಯ ತಿಳಿಯಿತು. ನಾವು ತಕ್ಷಣ ಪಂಕಜ್ ಅವರ ಹಿರಿಯ ಅಧಿಕಾರಿಗಳಿಗೆ ಫೋನ್ ಮಾಡಿ ಅವರಿದ್ದರಾ ಎಂದು ತಿಳಿಯಲು ಯತ್ನಿಸಿದೆವು. ಆದರೆ ತಕ್ಷಣಕ್ಕೆ ಅವರು ಯಾವುದನ್ನೂ ಖಚಿತಪಡಿಸಲಿಲ್ಲ. ಆದರೆ ಬಳಿಕ ಅವರೇ ರೋಹಿಣಿಯವರಿಗೆ ಫೋನ್ ಮಾಡಿ ವಿಷಯ ತಿಳಿಸಿದರು.

ಪತ್ನಿ ರೋಹಿಣಿ, 3 ವರ್ಷದ ಮಗ ಪ್ರತೀಕ್. ತಂದೆ ಕೃಷಿಕ. ಮುಂದಿನ ನವೆಂಬರ್ ನಲ್ಲಿ ಆತ ರಜೆಯಲ್ಲಿ ಊರಿಗೆ ಬರಬೇಕಿತ್ತು. ಆದರೆ ಈಗ ಹೀಗಾಗಿದೆ.

ರಮೇಶ್ ಯಾದವ್, ವಯಸ್ಸು – 26, ಪೇದೆ, ಊರು – ವಾರಾಣಸಿ

ramesh yadav
ಒಂದು ವಾರದ ರಜೆಯಲ್ಲಿ ಊರಿಗೆ ಬಂದಿದ್ದ ರಮೇಶ್ ಯಾದವ್ ಮಂಗಳವಾರವಷ್ಟೇ ರಜೆ ಮುಗಿಸಿ ವಾಪಸ್ ಹೋಗಿದ್ದರು. ಇದಾಗಿ ಎರಡೇ ದಿನಕ್ಕೆ ಅವರ ಸಾವಾಗಿದೆ. ಪತ್ನಿ ರೇಣು, 2 ವರ್ಷದ ಮಗ ಆಯುಷ್. ಗುರುವಾರ ರಾತ್ರಿ 9 ಗಂಟೆಗೆ ಸಿ.ಆರ್.ಪಿ.ಎಫ್. ಅಧಿಕಾರಿಗಳು ಫೋನ್ ಮಾಡಿ ರಮೇಶ್ ಸಾವಿನ ವಿವರ ನೀಡಿದರು ಎಂದು ಹೇಳುತ್ತಾರೆ ಹಿರಿಯ ಸಹೋದರ ಕನ್ಹೈಯ್ಯಾ.

ಮಹೇಶ್ ಕುಮಾರ್, ವಯಸ್ಸು – 26, ಪೇದೆ, ಊರು – ಪ್ರಯಾಗ್ ರಾಜ್

mahesh kumar
ಒಂದು ವಾರದ ರಜೆಗೆ ಊರಿಗೆ ಬಂದಿದ್ದ ಮಹೇಶ್ ಕುಮಾರ್ ಅವರದ್ದೂ ಅದೇ ಕಥೆ. ಸೋಮವಾರ ಅವರು ಮನೆಯಿಂದ ಮತ್ತೆ ಕೆಲಸಕ್ಕೆ ಹೊರಟಿದ್ದರು. ಮಹೇಶ್ ತಂದೆ ಮುಂಬೈಯಲ್ಲಿ ಆಟೋ ಚಾಲನೆ ಮಾಡುತ್ತಿದ್ದಾರೆ. ಮಹೇಶ್ ಸೋದರ ಹಾಗೂ ಸೋದರಿ ಇನ್ನೂ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. www.publictv.in

2 ದಿನಗಳ ಹಿಂದಷ್ಟೇ ಮಹೇಶ್ ಫೋನಲ್ಲಿ ಪತ್ನಿ ಸಂಜು ದೇವಿ ಜೊತೆ ಮಾತನಾಡಿದ್ದರು. ಸಿ.ಆರ್.ಪಿ.ಎಫ್. ಅಧಿಕಾರಿಗಳು ಮನೆಗೆ ಬಂದು ಹೇಳಿದಾಗ ನಮಗೆ ವಿಷಯ ಗೊತ್ತಾಯಿತು. 2011ರಲ್ಲಿ ಮದುವೆಯಾಗಿದ್ದ ಮಹೇಶ್-ಸಂಜು ದಂಪತಿಗೆ 6 ವರ್ಷದ ಸಮರ್, 5 ವರ್ಷದ ಸಮೀರ್ ಮಕ್ಕಳು.

ಅವಧೇಶ್ ಕುಮಾರ್ ಯಾದವ್, 30, ಮುಖ್ಯ ಪೇದೆ, ಊರು – ಚಾಂಡೌಲಿ

awadesh
ಅವಧೇಶ್ ಕುಮಾರ್ ಅವರು ಫೆ.11ರಂದು ರಜೆ ಮುಗಿಸಿ ಮತ್ತೆ ಸೇವೆಗೆ ಹಾಜರಾಗಿದ್ದರು. ಗುರುವಾರ ಬೆಳಗ್ಗೆಯೂ ಪತ್ನಿ ಶಿಲ್ಪಿ ಜೊತೆ ಫೋನಲ್ಲಿ ಮಾತನಾಡಿದ್ದರು. ನಾನೀಗ ಬಸ್ ಹತ್ತಿದ್ದೇನೆ, ಆಮೇಲೆ ಕಾಲ್ ಮಾಡುತ್ತೇನೆ ಎಂದು ಫೋನಿಟ್ಟಿದ್ದರು. ಪತಿಯ ಕಾಲ್ ನಿರೀಕ್ಷೆಯಲ್ಲಿದ್ದ ಪತ್ನಿಗೆ ಬಂದಿದ್ದು ಅವರದೇ ಊರಿನ ಮತ್ತೊಬ್ಬ ಸಹೋದ್ಯೋಗಿ ಫೋನ್ ಕಾಲ್. ಅವರು ನಡೆದ ಘಟನೆ ಎಲ್ಲಾ ವಿವರಿಸಿ ಅವಧೇಶ್ ಹುತಾತ್ಮನಾದ ವಿಷಯ ತಿಳಿಸುತ್ತಾರೆ. ಪತ್ನಿ ಹಾಗೂ 2 ವರ್ಷದ ಪುತ್ರನನ್ನು ಅಗಲಿದ್ದಾರೆ.

ರಾಮ್ ವಕೀಲ್, ವಯಸ್ಸು 37, ಮುಖ್ಯ ಪೇದೆ, ಊರು: ಮೇನ್‍ಪುರಿ

ram vakeel
ರಾಮ್ ವಕೀಲ್ ರಜೆ ಮುಗಿಸಿ ಫೆಬ್ರವರಿ 10ರಂದು ಕರ್ತವ್ಯಕ್ಕೆ ಹಾಜರಾಗಿದ್ದರು. ಪತ್ನಿ ಗೀತಾ ದೇವಿ(35) ಅವರೊಂದಿಗೆ ಕೆಲ ದಿನಗಳ ಹಿಂದೆ ಕೊನೆಯ ಬಾರಿ ಮಾತನಾಡಿದ್ದರು. ರಾಮ್ ವಕೀಲ್ ಮೂರು ಮಕ್ಕಳನ್ನು ಅಗಲಿದ್ದು, ಪುತ್ರರಾದ ರಾಹುಲ್ (10), ಅರ್ಪಿತ್ (8), ಮತ್ತು ಅಂಶ(2) ಇಟಾವಾದ ಕೇಂದ್ರಿಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ರಾಮ್ ವಕೀಲ್ ಸಂಬಂಧಿ ಆಗ್ರಾದಲ್ಲಿ ಪೊಲೀಸ್ ಇನ್ಸ್‍ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಐದು ವರ್ಷಗಳ ಹಿಂದೆ ರಾಮ್ ತಂದೆ ಅಪಘಾತದಲ್ಲಿ ವಿಧಿವಶರಾಗಿದ್ದರು. www.publictv.in

ಕೌಶಲ್ ಕುಮಾರ್ ರಾವತ್, ವಯಸ್ಸು 47, ಪೇದೆ, ಊರು – ಆಗ್ರಾ

koushal kumar rawat
ಕೌಶಲ್ ಕುಮಾರ್ ಕೊನೆಯ ಬಾರಿಗೆ ಸೋದರ ಕಮಲ್ ರಾವತ್ (40) ಅವರೊಂದಿಗೆ ಫೋನ್ ನಲ್ಲಿ ಬುಧವಾರ ಮಾತನಾಡಿದ್ದರು. ಈ ವೇಳೆ ತಮಗೆ ಬೇರೊಂದು ಸ್ಥಳಕ್ಕೆ ವರ್ಗಾವಣೆಯಾಗಿದೆ. ವರ್ಗಾವಣೆಗೊಂಡ ಸ್ಥಳಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದ್ದರು. ಕೌಶಲ್ ಕುಮಾರ್ ಈ ಮೊದಲು ಸಿಲಿಗುರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪಬ್ಲಿಕ್ ಟಿವಿ

2018 ಅಕ್ಟೋಬರ್ ನಲ್ಲಿ ಕೌಶಲ್ 10 ದಿನದ ರಜೆ ಪಡೆದು ಗ್ರಾಮಕ್ಕೆ ಆಗಮಿಸಿದ್ದರು. ಪತ್ನಿ ಮಮತಾ ರಾವಲ್ (47) ಮಕ್ಕಳಾದ ಅಪೂರ್ವ (18), ಅಭಿನವ್ (21) ಮತ್ತು ವಿಕಾಸ್ (20) ಅಗಲಿದ್ದಾರೆ.

ಕೇರಳ

ವಿ.ವಿ.ವಸಂತ್ ಕುಮಾರ್, ವಯಸ್ಸು – 42, ಪೇದೆ, ಊರು: ವಯನಾಡು

vasantha kumar vv
ವಸಂತ್ ಕುಮಾರ್ ಜಮ್ಮುವಿನಿಂದ ಶ್ರೀನಗರಕ್ಕೆ ತೆರಳುವ ಮುನ್ನ ಗುರುವಾರ ಬೆಳಗ್ಗೆ ತಾಯಿ ಶಾಂತಾರಿಗೆ ಕರೆ ಮಾಡಿ ಮಾತನಾಡಿದ್ದರು. ಶ್ರೀನಗರದ ಹೊಸ ಬೆಟಾಲಿಯನ್ ಗೆ ವರ್ಗವಾಗಿದ್ದು, ತಲುಪಿದ ಬಳಿಕ ಕರೆ ಮಾಡುತ್ತೇನೆ ಎಂದು ಹೇಳಿದ್ದರು.

ದಾಳಿಯ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಪತ್ನಿ ಶೀನಾ, ಪತಿಗೆ ಹಲವು ಬಾರಿ ಕರೆ ಮಾಡಿದ್ದರು. ಘಟನೆಯ ಬಳಿಕ ವಸಂತ್ ಕುಮಾರ್ ಸಹೋದ್ಯೋಗಿ ಕರೆ ಮಾಡಿ ಈ ದುರಂತದ ವಿಷಯ ತಿಳಿಸಿದರು ಎಂದು ವಸಂತ್ ನೆರೆ ಮನೆಯ ಉಷಾ ಕುಮಾರಿ ತಿಳಿಸಿದ್ದಾರೆ. www.publictv.in

Martyr Pulwama

ವಸಂತ್ ಕುಮಾರ್ ಕೇರಳದ ವಯನಾಡು ಜಿಲ್ಲೆಯ ಲಕ್ಕಿಡಿ ಗ್ರಾಮದಲ್ಲಿ ವಾಸವಾಗಿದ್ದರು. ಇತ್ತೀಚೆಗೆ ರಜೆಯ ಮೇಲೆ ಗ್ರಾಮಕ್ಕೆ ಆಗಮಿಸಿದ್ದ ವಸಂತ್ ಕುಮಾರ್ ಫೆ.8ರಂದು ಜಮ್ಮುವಿಗೆ ಹಿಂದಿರುಗಿದ್ದರು. ವಸಂತ್ Pುಮಾರ್ 2001ರಿಂದ ಸಿ.ಆರ್.ಪಿ.ಎಫ್.ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಎರಡು ವರ್ಷಗಳ ಬಳಿಕ ನಿವೃತ್ತಿ ಪಡೆದುಕೊಳ್ಳಲಿದ್ದೇನೆ ಎಂದು ಕುಟುಂಬಸ್ಥರಿಗೆ ತಿಳಿಸಿದ್ದರು. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿ ವಸಂತ್ ಹುತಾತ್ಮರಾಗಿದ್ದಾರೆ.

ರಾಜಸ್ಥಾನ

ರೋಹಿತಾಶ್ ಲಂಬಾ, ವಯಸ್ಸು-28, ಪೇದೆ, ಊರು-ಜೈಪುರ (ರಾಜಸ್ಥಾನ)

rohitash lamba
ರೋಹಿತಾಶ್ ಡಿಸೆಂಬರ್ 10ರಂದು ಗಂಡು ಮಗುವಿನ ತಂದೆಯಾಗಿದ್ದರು. ಆದರೆ ಆಗ ರಜೆ ಸಿಗದ ಕಾರಣ ಮಗುವನ್ನು ನೋಡಲು ಜನವರಿ 16ಕ್ಕೆ ಊರಿಗೆ ಆಗಮಿಸಿ ಜನವರಿ 31ರಂದು ಹಿಂದಿರುಗಿದ್ದರು. ಮಾಧ್ಯಮಗಳಿಂದ ನಮಗೆ ಉಗ್ರರ ದಾಳಿಯ ಮಾಹಿತಿ ತಿಳಿಯಿತು. ಗುರುವಾರ ಸಂಜೆ ಸೇನಾ ಕಚೇರಿಯ ಅಧಿಕಾರಿಗಳು ಕರೆ ಮಾಡಿ ನಿಮ್ಮ ಮಗ ಹುತಾತ್ಮನಾಗಿದ್ದಾನೆ ಎಂಬ ವಿಷಯವನ್ನು ತಿಳಿಸಿದರು. ಜಮ್ಮುವಿಗೆ ಹೊರಡುವ ಮುನ್ನ ಹೋಳಿ ಹಬ್ಬಕ್ಕೆ ಬರುತ್ತೇನೆಂದು ಮಾತು ಕೊಟ್ಟಿದ್ದ. ಆದರೆ ಈಗ ಆತ ಇನ್ಯಾವತ್ತೂ ಬಾರದ ಲೋಕಕ್ಕೆ ಹೋಗಿದ್ದಾನೆ ಎಂದು ರೋಹಿತಾಶ್ ತಂದೆ ಬಾಬು ಲಾಲ್ ಹೇಳಿದ್ದಾರೆ. ರೋಹಿತಾಶ್ ಪತ್ನಿ ಮಂಜು ದೇವಿ ಮತ್ತು ಪುತ್ರ ಧೃವ ಅವರನ್ನು ಅಗಲಿದ್ದಾರೆ.

ನಾರಾಯಣ್ ಲಾಲ್ ಗುರ್ಜರ್, ವಯಸ್ಸು-40, ಮುಖ್ಯ ಪೇದೆ, ಊರು-ರಾಜಸಮಂದ

narayan lal
ಒಂದು ತಿಂಗಳು ದೀರ್ಘ ರಜೆ ಪಡೆದು ರಾಜಸಮಂದ ಜಿಲ್ಲೆಯ ಬಿನೊಲ್ ಗ್ರಾಮಕ್ಕೆ ಬಂದಿದ್ದ ನಾರಾಯಣ್ ಲಾಲ್ ಫೆಬ್ರವರಿ ಆರಂಭದಲ್ಲಿ ಸೇನೆಗೆ ಹಿಂದಿರುಗಿದ್ದರು. ನಾರಾಯಣ್ ತಮ್ಮ ಜೀವವನ್ನು ಭಾರತಕ್ಕೆ ತ್ಯಾಗ ಮಾಡಿದ್ದಕ್ಕೆ ನಮಗೆ ಹಮ್ಮೆಯಿದೆ. ಉಗ್ರರ ದಾಳಿಗೆ ಪ್ರತೀಕಾರ ಬೇಕು ಎಂದು ಸೋದರ ಗೋವರ್ಧನ್ ಆಗ್ರಹಿಸಿದ್ದಾರೆ. www.publictv.in

mnd soldier brother 3

ಗುರುವಾರ ನಡೆದ ಉಗ್ರರ ದಾಳಿಯಲ್ಲಿ ನಾರಾಯಣ್ ಪತ್ನಿ ಮೋಹಿನಿ, ಪುತ್ರಿ ಹೇಮಲತ (14) ಮತ್ತು ಪುತ್ರ ಮುಖೇಶ್ (12)ನನ್ನು ಅಗಲಿದ್ದಾರೆ. ಗುರುವಾರದ ದಾಳಿಯ ಬಳಿಕ ನಾರಾಯಣ್ ಅವರು ಈ ಹಿಂದೆ ಮಾತಾನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಳೆದ ಮೂರು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಾವು ನಮ್ಮ ಸಹೋದ್ಯೋಗಿಗಳನ್ನು ಕಳೆದುಕೊಂಡಿದ್ದೇವೆ. ನನ್ನ 15 ವರ್ಷದ ಸೇವೆಯಲ್ಲಿ 9 ವರ್ಷವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದಿದ್ದೇನೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುವ ಅದೃಷ್ಟ ಎಲ್ಲರಿಗೂ ಸಿಗಲ್ಲ ಎಂದು ಹೇಳಿದ್ದಾರೆ.

ಹೇಮರಾಜ್ ಮೀನಾ, ವಯಸ್ಸು -44, ಮುಖ್ಯ ಪೇದೆ, ಊರು-ಕೋಟಾ

hemraj meena
ಹೇಮರಾಜ್ ಪತ್ನಿ ಮಧು ಮತ್ತು ನಾಲ್ಕು ಮಕ್ಕಳು. ಪುತ್ರಿ ರೀನಾ ಪದವಿ ವ್ಯಾಸಂಗ ಮಾಡುತ್ತಿದ್ದು, ಅಂತಿಮಾ 9ನೇ ತರಗತಿ ಓದುತ್ತಿದ್ದಾಳೆ. ಅಜಯ್ 7ನೇ ವರ್ಗ ಹಾಗು ಕೊನೆಯ ಪುತ್ರ ರಿಷಭ್ ನರ್ಸರಿ ಓದುತ್ತಿದ್ದಾನೆ.

ಗುರುವಾರ ಸಂಜೆ ಬಂದ ಕರೆಯನ್ನು ಸ್ವೀಕರಿಸಿದ ಹಿರಿಯ ಪುತ್ರಿ ರೀನಾಗೆ ಸೇನಾಧಿಕಾರಿಗಳು ನಿಮ್ಮ ತಂದೆ ಹುತಾತ್ಮರಾಗಿದ್ದಾರೆ ಎಂಬ ವಿಷಯವನ್ನು ತಿಳಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಸ್ಥಳೀಯ ರಾಜಕಾರಣಿಗಳು, ಮುಖಂಡರು, ಸಂಬಂಧಿಕರು ಮಾಧ್ಯಮದವರು ಸ್ಥಳಕ್ಕೆ ಆಗಮಿಸಿ ಸಾಂತ್ವನ ಹೇಳುತ್ತಿದ್ದಾರೆ. ಉಗ್ರರ ದಾಳಿಗೆ ಭಾರತ ತಕ್ಕ ಉತ್ತರ ನೀಡಬೇಕೆಂದು ಹೇಮರಾಜ್ ಸೋದರ ರಾಮ್ ಬಿಲಾಸ್ ಒತ್ತಾಯಿಸಿದ್ದಾರೆ.

ಜೀತ್ ರಾಮ್, ವಯಸ್ಸು-30, ಪೇದೆ, ಊರು – ಭರತ್‍ಪುರ

jeeti ram
ಇದುವರೆಗೂ ಜೀತ್ ರಾಮ್ ಪೋಷಕರಿಗೆ ಮಗ ಹುತಾತ್ಮನಾಗಿರುವ ವಿಷಯವನ್ನು ತಿಳಿಸಿಲ್ಲ. ಪೋಷಕರಿಗೆ ವಯಸ್ಸಾಗಿದ್ದರಿಂದ ಪಾರ್ಥಿವ ಶರೀರ ತಲುಪಿದ ಕೂಡಲೇ ವಿಷಯ ತಿಳಿಸಲಾಗುವುದು ಎಂದು ಜೀತ್ ರಾಮ್ ಸೋದರ ವಿಕ್ರಂ ರಾಮ್ ತಿಳಿಸಿದ್ದಾರೆ. www.publictv.in

ಉಗ್ರರ ದಾಳಿ ಬಳಿಕ ಮಾಧ್ಯಮಗಳಲ್ಲಿ ಹುತಾತ್ಮ ಯೋಧರ ಹೆಸರಿನ ಪಟ್ಟಿಯಲ್ಲಿ ಸೋದರನ ಹೆಸರು ನೋಡಿದಾಗ ಶಾಕ್ ಆಯ್ತು. ಗುರುವಾರ ರಾತ್ರಿ ಸೇನಾಧಿಕಾರಿಗಳು ಕರೆ ಮಾಡಿ ವಿಷಯವನ್ನು ಖಚಿತಪಡಿಸಿದರು. ಜೀತ್ ರಾಮ್ ಪತ್ನಿ ಸುಂದರಿ, 18 ತಿಂಗಳ ಪುತ್ರಿ ಮತ್ತು 4 ತಿಂಗಳ ಮಗುವನ್ನ ಅಗಲಿದ್ದಾನೆ ಎಂದು ವಿಕ್ರಂ ಕಣ್ಣೀರು ಹಾಕುತ್ತಾರೆ.

ಭಗೀರಥ್ ಸಿಂಗ್, ವಯಸ್ಸು – 26, ಪೇದೆ, ಊರು-ಧೋಲ್ಪುರ

bhagirath singh
ರೈತನ ವೀರಪುತ್ರನಾಗಿರುವ ಭಗೀರಥ್ ಆರು ವರ್ಷಗಳ ಹಿಂದೆ ಸೇನೆಗೆ ಸೇರಿದ್ದರು. ಭಗೀರಥ್ ಸೋದರ ಉತ್ತರ ಪ್ರದೇಶದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ನಿ ರಂಜನಾ, ಮೂರು ವರ್ಷದ ಓರ್ವ ಪುತ್ರ ಮತ್ತು ವರ್ಷದ ಪುತ್ರಿಯನ್ನು ಅಗಲಿದ್ದಾರೆ.

ಇತ್ತೀಚೆಗೆ ರಜೆಯ ಮೇಲೆ ಸ್ವಗ್ರಾಮಕ್ಕೆ ಆಗಮಿಸಿದ್ದ ಭಗೀರಥ್ ಕಳೆದ ವಾರ ಸೇನೆಗೆ ಮರಳಿದ್ದರು ಎಂದು ಗೆಳೆಯರು ಹೇಳುತ್ತಾರೆ.

ಪಂಜಾಬ್

ಕುಲ್ವಿಂದರ್ ಸಿಂಗ್, ವಯಸ್ಸು-26, ಪೇದೆ, ಊರು-ಆನಂದಪುರ ಸಾಹಿಬ್

kulwinder singh
10 ದಿನಗಳ ರಜೆ ಪಡೆದು ಸಂಬಂಧಿಯ ಮದುವೆಗೆ ಆಗಮಿಸಿದ್ದ ಕುಲ್ವಿಂದರ್ ಸಿಂಗ್ ಭಾನುವಾರ ಸೇನೆಗೆ ಹಿಂದಿರುಗಿದ್ದರು. ಮೂರು ವರ್ಷಗಳ ಹಿಂದೆ ಸಂಬಂಧಿ ಯುವತಿ ಜೊತೆ ನಿಶ್ಚಿತಾರ್ಥವಾಗಿತ್ತು. ಮನೆಯ ನಿರ್ಮಾಣದ ಕೆಲಸದ ಬಳಿಕ ಈ ವರ್ಷ ನವೆಂಬರ್ ನಲ್ಲಿ ಮದುವೆ ದಿನಾಂಕ ನಿಗದಿಯಾಗಿತ್ತು ಎಂದು ಕುಲ್ವಿಂದರ್ ಸಿಂಗ್ ಸಂಬಂಧಿ ಕಿರಣ್‍ದೀಪ್ ಸಿಂಗ್ ಹೇಳುತ್ತಾರೆ. ಪಬ್ಲಿಕ್ ಟಿವಿ

MND DC 2

ಎರಡು ತಿಂಗಳ ಹಿಂದೆ ಮನೆಯ ಕಾಮಗಾರಿ ಪೂರ್ಣಗೊಂಡಿದ್ದು, ಕಲರಿಂಗ್ ಬಾಕಿ ಉಳಿದುಕೊಂಡಿತ್ತು. ಗುರುವಾರ ಬೆಳಗ್ಗೆ 8 ಗಂಟೆಗೆ ತಂದೆಗೆ ಕರೆ ಮಾಡಿದ್ದ ಕುಲ್ವಿಂದರ್ ಸಿಂಗ್ ಪೇಂಟರ್ ನಂಬರ್ ಪಡೆದಿದ್ರು. ಬಳಿಕ ಮಧ್ಯಾಹ್ನ 3.50ಕ್ಕೆ ನಾನು ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಎಂದು ತಂದೆ ದರ್ಶನ್ ಸಿಂಗ್ ಪುತ್ರನನ್ನು ನೆನೆದು ಕಣ್ಣೀರಿಡುತ್ತಿದ್ದಾರೆ. ದರ್ಶನ್ ಸಿಂಗ್ ಟ್ರಕ್ ಚಾಲಕರಾಗಿದ್ದು, ತಾಯಿ ಅಮರ್ ಜಿತ್ ಕೌರ್ ಗೃಹಿಣಿಯಾಗಿದ್ದಾರೆ.

ಜೈಮಲ್ ಸಿಂಗ್, ವಯಸ್ಸು-44, ಮುಖ್ಯ ಪೇದೆ, ಮೊಗ

jaimal singh
ಗುರುವಾರ ಬೆಳಗ್ಗೆ 8 ಗಂಟೆಗೆ ಪತ್ನಿ ಸುಖ್ಜಿತ್ ಅವರಿಗೆ ಕರೆ ಮಾಡಿದ್ದ ಜೈಮಲ್ ಸಿಂಗ್, ಚಾಲಕನೋರ್ವನ ಅನುಪಸ್ಥಿತಿಯಲ್ಲಿ ಆತನ ಬದಲಾಗಿ ಶ್ರೀನಗರಕ್ಕೆ ತೆರಳುತ್ತಿದ್ದೇನೆ. ಶ್ರೀನಗರ ತಲುಪಿದ ಬಳಿಕ ಮತ್ತೆ ಫೋನ್ ಮಾಡುವುದಾಗಿ ಪತ್ನಿಗೆ ತಿಳಿಸಿದ್ದರು. ನಮ್ಮ ಮದುವೆಯ 18 ವರ್ಷದ ಬಳಿಕ ನಮಗೆ ಸಂತಾನವಾಗಿದ್ದು, ಪುತ್ರನನ್ನು ತಮ್ಮ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು ಎಂದು ಸುಖ್ಜಿತ್ ಭಾವುಕರಾಗಿ ಕಣ್ಣೀರುಡುತ್ತಿದ್ದಾರೆ. www.publictv.in

ಜೈಮಲ್ ತಂದೆ ಜಸ್ವಂತ್ ಸಿಂಗ್ ಗ್ರಾಮದ ಸಿಖ್ ಧರ್ಮ ಗುರುಗಳಾಗಿದ್ದು, ನನಗೆ ಅವಶ್ಯವಿರೋ ಸಮಯದಲ್ಲಿ ಮಗ ನಮ್ಮನ್ನು ಅಗಲಿ ಹೋಗಿದ್ದಾನೆ. ದೇಶಕ್ಕಾಗಿ ಮಗ ವೀರಮರಣ ಹೊಂದಿದ್ದರ ಬಗ್ಗೆ ಹೆಮ್ಮೆ ಪಡುತ್ತೇವೆ. ದೇಶದ ಘನತೆಯ ಪ್ರಶ್ನೆ ಬಂದಾಗ ಜೀವನದಲ್ಲಿ ಯಾವುದೂ ಅವಶ್ಯ ಎಂದು ಅನ್ನಿಸುವುದಿಲ್ಲ ಎಂದು ಹೇಳುತ್ತಾರೆ.

ಸುಖಜಿಂದರ್ ಸಿಂಗ್, ವಯಸ್ಸು-32, ಪೇದೆ, ಊರು: ತಾರ್ಣ್ ತಾರಣ್

sukhjinder singh
ಸುಖಜಿಂದರ್ ಸಿಂಗ್ ಅವರು ಮದುವೆಯಾದ 8 ವರ್ಷದ ನಂತರ ಮೊದಲ ಮಗುವಿಗೆ ತಂದೆ ಆಗಿದ್ದರು. ಸುಖಜಿಂದರ್ ಸಿಂಗ್ ಲೋಹರಿ ಹಬ್ಬ ಆಚರಿಸಿದ ಬಳಿಕ ಇತ್ತೀಚೆಗೆ ಕೆಲಸಕ್ಕೆ ಹಿಂತಿರುಗಿದ್ದರು. ಮಗುವಿಗೆ ತಂದೆ ಆದ ಬಳಿಕ ಅವರು ಖುಷಿಯಲ್ಲಿದ್ದರು. ಮಗುವಿಗಾಗಿ ಸುಖಜಿಂದರ್ ಸಿಂಗ್ ದೇವರಲ್ಲಿ ಪ್ರಾರ್ಥಿಸುತ್ತಿದ್ದರು. ಮಗುವಿನ ಭವಿಷ್ಯದ ಬಗ್ಗೆ ಪ್ಲಾನ್ ಮಾಡುತ್ತಿದ್ದ ಅವರು 4 ವರ್ಷದಲ್ಲಿ ನಿವೃತ್ತರಾಗಬೇಕಿತ್ತು.

mnd wife crying

ನಾವು ಎಲ್ಲವನ್ನು ಕಳೆದುಕೊಂಡಿದ್ದೇವೆ. ಎಲ್ಲವೂ ಈಗ ಮುಗಿದು ಹೋಗಿದೆ. ಸುಖಜಿಂದರ್ ಆ ಬಸ್ಸಿನಲ್ಲಿ ಕೂರುವ ಮೊದಲು ನಾನು ಆತನ ಜೊತೆ ಮಾತನಾಡಿದ್ದೆ. ಆಗ ಅವನು ಸ್ಥಳಕ್ಕೆ ತೆರಳಿದ ಮೇಲೆ ನನಗೆ ಕರೆ ಮಾಡುತ್ತೇನೆ ಎಂದು ಮಾತು ನೀಡಿದ. ಬಳಿಕ ರಾತ್ರಿ 10 ಗಂಟೆಗೆ ಅವನು ಹುತಾತ್ಮನಾಗಿದ್ದಾನೆ ಎಂದು ಸಿ.ಆರ್.ಪಿ.ಎಫ್ ನಿಂದ ಕರೆ ಬಂತು ಎಂದು ತಂದೆ ಹೇಳಿದ್ದಾರೆ. ಪಬ್ಲಿಕ್ ಟಿವಿ

ಮಣಿಂದರ್ ಸಿಂಗ್ ಅತ್ರಿ, ವಯಸ್ಸು-27, ಪೇದೆ, ಊರು-ಗುರುದಾಸ್‍ಪುರ:

mahinder singh attri
ಹುತಾತ್ಮ ಯೋಧ ಮಣಿಂದರ್ ಸಿಂಗ್ ಅತ್ರಿ(27) ಅವರು ಒಂದೂವರೆ ವರ್ಷದ ಹಿಂದೆ ಸಿ.ಆರ್.ಪಿ.ಎಫ್.ಗೆ ಸೇರಿದ್ದರು. ಅವರ ಸಹೋದರ ಪ್ಯಾರಾಮಿಲಿಟರಿ ಫೋರ್ಸ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ದಾಳಿ ನಡೆದ 2 ದಿನದ ಹಿಂದೆ ಮಣಿಂದರ್ ಕೆಲಸಕ್ಕೆ ಹಿಂತಿರುಗಿದ್ದರು. ಮಣಿಂದರ್ ಅವರ ತಂದೆ ಸಪ್ತಪಲ್ ಅತ್ರಿ ಅವರು ನಿವೃತ್ತ ಸರ್ಕಾರಿ ಉದ್ಯೋಗಿ ಆಗಿದ್ದು, ಈಗಲೂ ತಮ್ಮ ಮಗ ಮನೆಯಲ್ಲಿ ಕೊನೆಯದಾಗಿ ನಗುತ್ತಾ ಇದ್ದ ಬಗ್ಗೆ ನೆನಪಿಸಿಕೊಳ್ಳುತ್ತಿದ್ದಾರೆ.

mnd guru mother 2

ನನ್ನ ಮಗ ಮನೆಗೆ ಬಂದಿದ್ದಾಗ ನಾನು ಆತನಿಗೆ ಟೀ ಮಾಡಿಕೊಟ್ಟಿದ್ದೆ. ಆಗ ಅವನು ತುಂಬಾ ಖುಷಿಯಾಗಿದ್ದ. ಅಲ್ಲದೇ ಶೀಘ್ರವೇ ಹಿಂತಿರುಗುತ್ತೇನೆ ಎಂದು ನನಗೆ ಮಾತು ನೀಡಿದ್ದ ಎಂದು ಸಪ್ತಪಲ್ ಅವರು ಮಗನ ಬಗ್ಗೆ ಮಾತನಾಡಿದ್ದಾರೆ. ಮಣಿಂದರ್ ಹುತಾತ್ಮರಾದ ವಿಷಯವನ್ನು ಗುರುವಾರ ಮಧ್ಯರಾತ್ರಿ ಅವರ ಕುಟುಂಬದವರಿಗೆ ತಿಳಿಸಲಾಗಿತ್ತು. ಮಣಿಂದರ್ ಮದುವೆ ಆಗಲು ಪ್ಲಾನ್ ಮಾಡುತ್ತಿದ್ದ. ಆತ ಒಳ್ಳೆಯ ಕ್ರೀಡಾಪಟು ಕೂಡ ಎಂದು ಮಣಿಂದರ್ ಶಾಲಾ ಗೆಳೆಯ ರಮೇಶ್ ಕುಮಾರ್ ಹೇಳಿದ್ದಾರೆ. www.publictv.in

ಉತ್ತರಾಖಂಡ

ಮೋಹನ್ ಲಾಲ್, ವಯಸ್ಸು-50 ಎಎಸ್‍ಐ, ಊರು-ಉತ್ತರಕಾಶಿ

mohan lal
ಹುತಾತ್ಮ ಯೋಧ ಮೋಹನ್ ಲಾಲ್ ಉತ್ತರಖಂಡದ ಉತ್ತರಕಾಶಿ ಜಿಲ್ಲೆಯ ಬರ್ಕೋಟ್ ಗ್ರಾಮದ ನಿವಾಸಿ. ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಲಿ ಎಂದು ಮೋಹನ್ ಲಾಲ್ ಕೆಲವು ವರ್ಷಗಳ ಹಿಂದೆ ಡೆಹ್ರಾಡೂನ್ ನಲ್ಲಿ ಎರಡು ರೂಂ ಇರುವ ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದರು ಎಂದು ಮೋಹನ್ ಲಾಲ್ ಅಳಿಯ ಸರ್ವೇಶ್ ಕುಮಾರ್ ತಿಳಿಸಿದ್ದಾರೆ.

ಮೋಹನ್ ಲಾಲ್ ಜಾಲಿ ಆಗಿದ್ದ ವ್ಯಕ್ತಿ. ಮೋಹನ್ ಕಳೆದ ವರ್ಷ ಡಿಸೆಂಬರ್‍ನಲ್ಲಿ ಮನೆಗೆ ಆಗಮಿಸಿದ್ದರು. ಅವರು 1988ರಲ್ಲಿ ಸಿ.ಆರ್.ಪಿ.ಎಫ್.ಗೆ ಸೇರಿದ್ದರು. ಅವರ ಪತ್ನಿ ಸರಿತಾ(50), 17, 22 ಹಾಗೂ 31 ವರ್ಷದ ಮೂವರು ಹೆಣ್ಣು ಮಕ್ಕಳಿದ್ದು, 14 ಹಾಗೂ 25 ವರ್ಷದ ಪುತ್ರರು ಇದ್ದಾರೆ ಎಂದು ಸರ್ವೇಶ್ ತಿಳಿಸಿದ್ದಾರೆ.

ವಿರೇಂದ್ರ ಸಿಂಗ್, ವಯಸ್ಸು-30, ಪೇದೆ, ಊರು-ಉಧಮ್ ಸಿಂಗ್ ನಗರ:

virendra singh
ವಿರೇಂದ್ರ ಸಿಂಗ್ ಅವರು 20 ದಿನ ರಜೆ ಮುಗಿಸಿಕೊಂಡು ಮಂಗಳವಾರ ಜಮ್ಮು ಹಾಗೂ ಕಾಶ್ಮೀರದಲ್ಲಿ ಕೆಲಸಕ್ಕೆ ಹಿಂತಿರುಗಿದ್ದರು. ಇವರು ಥಾರು ಬುಡಕಟ್ಟು ಜನಾಂಗಕ್ಕೆ ಸೇರಿದ್ದು, ಮೂವರು ಸಹೋದರರಲ್ಲಿ ಇವರು ಕಿರಿಯರು. ನನ್ನ ಸಹೋದರನ ಬಗ್ಗೆ ನನಗೆ ಹೆಮ್ಮೆ ಇದೆ. ಅವನು ತನ್ನ ದೇಶಕ್ಕಾಗಿ ಪ್ರಾಣವನ್ನು ತ್ಯಾಗ ಮಾಡಿದ್ದಾನೆ. ಆತನ ದೇಹ ತ್ಯಾಗಕ್ಕೆ ಸರ್ಕಾರ ಪ್ರತೀಕಾರ ತೆಗೆದುಕೊಳ್ಳಲೇಬೇಕು ಎಂದು ವಿರೇಂದ್ರ ಅವರ ಹಿರಿಯ ಸಹೋದರ, ನಿವೃತ್ತ ಬಿಎಸ್‍ಎಫ್ ಅಧಿಕಾರಿ ಜೈ ರಾಮ್ ಸಿಂಗ್ ತಿಳಿಸಿದ್ದಾರೆ. ವಿರೇಂದ್ರ ತಮ್ಮ ಪತ್ನಿ ರೇಣು(31), ಪುತ್ರಿ ರೂಹಿ(5) ಹಾಗೂ ವ್ಯಾನ್(2) ಅವರನ್ನು ಅಗಲಿದ್ದಾರೆ. www.publictv.in

ಮಹಾರಾಷ್ಟ್ರ

ಸಂಜಯ್ ರಜಪೂತ್, ವಯಸ್ಸು-45, ಹಿರಿಯ ಪೇದೆ, ಊರು-ಬುಲ್ದಾನಾ

sanjay rajput
ಸಂಜಯ್ ರಜಪುತ್ ಬುಲ್ದಾನಾ ಜಿಲ್ಲೆಯ ಮಲ್ಕಾಪುರದ ನಿವಾಸಿಯಾಗಿದ್ದು, 1996ರಲ್ಲಿ ಸಿ.ಆರ್.ಪಿ.ಎಫ್.ಗೆ ಸೇರಿದ್ದರು. ಗುರುವಾರ ಮಧ್ಯಾಹ್ನ ಸುಮಾರು 1.30ಕ್ಕೆ ಸಂಜಯ್ ಅವರು ತಮ್ಮ ಸಹೋದರಳಿಯ ಪಿಯೂಶ್ ಬೈಸ್ ಜೊತೆ ಫೋನಿನಲ್ಲಿ ಮಾತನಾಡಿದ್ದರು. ಅದು ಅವರ ಕುಟುಂಬದ ಜೊತೆ ಆಡಿದ ಕೊನೆಯ ಮಾತುಗಳಾಗಿತ್ತು. ಸಂಜಯ್ ಅವರು ತಮ್ಮ ಪತ್ನಿ ಸುಷ್ಮಾ(38), ಜಯ್(13) ಹಾಗೂ ಶುಭಂ (11) ಅವರನ್ನು ಅಗಲಿ ಹುತಾತ್ಮರಾಗಿದ್ದಾರೆ. ಇದು ತುಂಬಲಾರದ ನಷ್ಟ ಮತ್ತು ಅವರ ಪತ್ನಿ ಹಾಗೂ ಮಕ್ಕಳ ದುಃಖವನ್ನು ನೋಡಲು ಸಾಧ್ಯವಾಗುತ್ತಿಲ್ಲ. ದೇಶಕ್ಕಾಗಿ ಅವರು ಮಾಡಿದ ತ್ಯಾಗ ದೊಡ್ಡದು. ಆದರೆ ನಾವು ನಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದೇವೆ. ಈ ಘಟನೆ ಬಗ್ಗೆ ಸರ್ಕಾರ ಶಾಶ್ವತ ಪರಿಹಾರವನ್ನು ಕಂಡು ಹಿಡಿಯಬೇಕು ಎಂದು ಸಂಜಯ್ ಅವರ ಸಹೋದರ ರಾಜೇಶ್ ಅವರು ಹೇಳಿದ್ದಾರೆ.

ನಿತಿನ್ ಶಿವಾಜಿ ರಾಥೋಡ್, ವಯಸ್ಸು-37, ಪೇದೆ, ಊರು-ಬುಲ್ದಾನಾ

rathod nitin
ಉಗ್ರರ ದಾಳಿ ಆಗುವ ಕೆಲವು ಗಂಟೆಗಳ ಮೊದಲು ಅಂದರೆ ಗುರುವಾರ ಬೆಳಗ್ಗೆ ನಿತಿನ್ ಶಿವಾಜಿ ಅವರು ತಮ್ಮ ಪತ್ನಿ ವಂದನಾ ಅವರ ಜೊತೆ ಫೋನಿನಲ್ಲಿ ಮಾತನಾಡಿದ್ದರು. ನಿತಿನ್ ಅವರಿಗೆ ಜೀವನ್ (10) ಹಾಗೂ ಜಿವಿಶಾ (5) ಇಬ್ಬರು ಮಕ್ಕಳಿದ್ದಾರೆ.

ನನಗೆ ನಿತಿನ್ ಪತ್ನಿ, ಮಕ್ಕಳು ಹಾಗೂ ಆತನ ಪೋಷಕರಿಗೆ ಹೇಗೆ ಸಮಾಧಾನ ಮಾಡಬೇಕು ಎಂದು ಗೊತ್ತಾಗುತ್ತಿಲ್ಲ. ಯಾವಾಗಲೂ ನನ್ನ ಜೊತೆ ಇದ್ದ ಸಹೋದರನನ್ನು ನಾನು ಕಳೆದುಕೊಂಡಿದ್ದೇನೆ. ಉಗ್ರರು ಹೇಡಿತನದ ಮೂಲಕ ನಮ್ಮ ಮೇಲೆ ದಾಳಿ ಮಾಡಲು ಯತ್ನಿಸುತ್ತಿದ್ದಾರೆ. ನಮ್ಮ ನಾಯಕರು ಇದಕ್ಕೆ ಸೂಕ್ತ ಉತ್ತರ ನೀಡಬೇಕು ಎಂದು ನಿತಿನ್ ಅವರ ಸಹೋದರ ಪ್ರವೀಣ್ ತಿಳಿಸಿದ್ದಾರೆ. ನಿತಿನ್ ತಮ್ಮ ಕುಟುಂಬದ ಜೊತೆ ಸಮಯ ಕಳೆದು ಫೆ. 11ರಂದು ಕೆಲಸಕ್ಕೆ ಹಿಂತಿರುಗಿದ್ದರು.

ತಮಿಳುನಾಡು

ಸುಬ್ರಮಣಿಯನ್ ಜಿ, ವಯಸ್ಸು-28, ಪೇದೆ, ಊರು-ಟ್ಯುಟಿಕೋರಿನ್

subramanian g
ಸುಬ್ರಮಣಿಯನ್ ಅವರ ತಂದೆ ವಿ. ಗಣಪತಿ ಕೃಷಿಕ. ತಂದೆಯ ವೈದ್ಯಕೀಯ ಚಿಕಿತ್ಸೆಗಾಗಿ ಅವರು ಒಂದು ತಿಂಗಳು ರಜೆಯನ್ನು ತೆಗೆದುಕೊಂಡಿದ್ದರು. ರಜೆ ಮುಗಿದ ಬಳಿಕ ಅಂದರೆ ಭಾನುವಾರ ಮನೆಯಿಂದ ಹೊರಟಿದ್ದರು. ಗುರುವಾರ ಮಧ್ಯಾಹ್ನ ಸುಮಾರು 2.15ಕ್ಕೆ ಅವರ ಪತ್ನಿ ಕೃಷ್ಣವೇಣಿ ಅವರಿಗೆ ಫೋನ್ ಮಾಡಿ ಮಾತನಾಡಿದ್ದರು. www.publictv.in

1c1f23e3 add4 4f0c b5e1 5dabf4c1cf87

ಕಳೆದ ವಾರ ನಾನು ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ಹೀಗಾಗಿ ನನಗೆ ಔಷಧಿಗಳನ್ನು ತೆಗೆದುಕೊಳ್ಳುವಂತೆ ಹಾಗೂ ಧೂಳಿನಿಂದ ದೂರವಿರುವಂತೆ ಹೇಳಲು ಕೊನೆಯ ಕರೆಯಾಗಿ ಬುಧವಾರ ರಾತ್ರಿ ಮಾಡಿದ್ದ. ಅವನು ಹುತಾತ್ಮನಾಗುವ ಒಂದು ಗಂಟೆಯ ಮುಂಚೆ ಅವನ ಪತ್ನಿಗೆ ಫೋನ್ ಮಾಡಿ ಮಾತನಾಡಿದ್ದಾನೆ ಎಂದು ತಂದೆ ಗಣಪತಿ ಹೇಳಿದ್ದಾರೆ.

ಸಿ. ಶಿವಚಂದ್ರನ್, ವಯಸ್ಸು-32, ಪೇದೆ, ಊರು-ಅರಿಯಾಳೂರ್

sivachandran c
ಯೋಧ ಶಿವಚಂದ್ರನ್ ಅವರು ತಮಿಳುನಾಡಿನ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ಅರಿಯಾಳೂರಿನ ಕಾರ್ಗುಡಿ ಗ್ರಾಮದ ನಿವಾಸಿಯಾಗಿದ್ದು, ಸಿ.ಆರ್.ಪಿ.ಎಫ್.ಗೆ 2010ರಲ್ಲಿ ಸೇರ್ಪಡೆಯಾಗಿದ್ದರು. ಇವರಿಗೆ ಎರಡು ವರ್ಷದ ಮಗನಿದ್ದಾನೆ. ಉಗ್ರರ ದಾಳಿಯ ಎರಡು ಗಂಟೆಯ ಮುಂಚೆ ಶಿವಚಂದ್ರನ್ ಅವರು ತಮ್ಮ ಗರ್ಭಿಣಿ ಪತ್ನಿ ಗಾಂಧಿಮತಿ ಅವರಿಗೆ ಕರೆ ಮಾಡಿ ಮಾತನಾಡಿದ್ದರು. ಪಬ್ಲಿಕ್ ಟಿವಿ

ಶಿವಚಂದ್ರನ್ ಪತ್ನಿ ಅವರಿಗೆ ಯಾವುದೇ ಉದ್ಯೋಗವಿಲ್ಲ. ಅವರ ತಂದೆ ಮತ್ತು ತಾಯಿ ಇಬ್ಬರೂ ಕೃಷಿ ಕಾರ್ಮಿಕರಾಗಿದ್ದಾರೆ. ಹೀಗಾಗಿ ಅವರು ಯಾವುದೇ ಆದಾಯವನ್ನು ಹೊಂದಿಲ್ಲ. ಅವರು ಒಂದು ತಿಂಗಳ ರಜೆಗೆಂದು ಜನವರಿ 7 ರಂದು ಮನೆಗೆ ಬಂದಿದ್ದರು. ಆದರೆ ಇನ್ನು ಮುಂದೆ ಅವರು ಇಲ್ಲವೆಂದು ನಾವು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಸೋದರ ಸಂಬಂಧಿ ಅರುಣ್ ಹೇಳಿದ್ದಾರೆ.

ಜಾರ್ಖಂಡ್

ವಿಜಯ್ ಸೋರೆಂಗ್, ವಯಸ್ಸು-47, ಮುಖ್ಯಪೇದೆ, ಊರು-ಗುಮ್ಲಾ

vijay kumar mourya 1
ವಿಜಯ್ ಸೋರೆಂಗ್ ಒಂದು ವಾರ ಹಿಂದೆ ತಮ್ಮ ಮನೆಗೆ ಭೇಟಿ ನೀಡಿದ್ದರು. ನಮ್ಮ ತಂದೆ ಕೂಡ ಭದ್ರತಾ ಪಡೆಯಲ್ಲಿ ಇದ್ದರು. ನನ್ನ ಸಹೋದರ ಕೂಡ ದೇಶದ ಸೇವೆ ಮಾಡಲು ಇಷ್ಟಪಟ್ಟಿದ್ದರು. ಅವರ ಪತ್ನಿ ರಾಂಚಿಯಲ್ಲಿ ಜಾರ್ಖಂಡ್ ಸಶಸ್ತ್ರ ಮೀಸಲು ಪಡೆಯಲ್ಲಿ ಉದ್ಯೋಗದಲ್ಲಿದ್ದಾರೆ ಎಂದು ಅವರ ಸಹೋದರ ಸಂಜಯ್ ಹೇಳಿದ್ದಾರೆ. ನಮ್ಮ ಸಹೋದರ ದೇಶಕ್ಕೆ ಸೇವೆ ಸಲ್ಲಿಸಿ ಹುತಾತ್ಮರಾಗಿದ್ದಾರೆ. ಹೀಗಾಗಿ ನಾವು ಹೆಮ್ಮೆಪಡುತ್ತೇವೆ. ಆದರೆ ಇದೇ ಸಂದರ್ಭದಲ್ಲಿ ನಾವು ಉಗ್ರರ ದಾಳಿಯನ್ನು ತಡೆಯಲು ಸಾಧ್ಯವಾಗದ್ದಕ್ಕೆ ನಮಗೆ ಅಸಮಾಧಾನವಿದೆ ಎಂದು ತಿಳಿಸಿದ್ದಾರೆ. www.publictv.in

ಪಶ್ಚಿಮ ಬಂಗಾಳ

ಸುದೀಪ್ ಬಿಸ್ವಾಸ್, ವಯಸ್ಸು-27, ಪೇದೆ, ಊರು-ನಾಡಿಯಾ

sudip biswas
ಇಡೀ ಕುಟುಂಬಲ್ಲಿ ಯೋಧ ಸುದೀಪ್ ಬಿಸ್ವಾಸ್ ಅವರೇ ಉದ್ಯೋಗದಲ್ಲಿದ್ದು, ತಂದೆ ಸನ್ಯಾಸಿ ಬಿಸ್ವಾಸ್ ಕೃಷಿ ಕಾರ್ಮಿಕರಾಗಿದ್ದರು. ಸುದೀಪ್ ಸಿ.ಆರ್.ಪಿ.ಎಫ್.ಗೆ 2014ರಲ್ಲಿ ಸೇರ್ಪಡೆಯಾಗಿದ್ದರು. ನಂತರ ಕುಟುಂಬವು ನಿಧಾನವಾಗಿ ಬಡತನದಿಂದ ಹೊರಬರುತ್ತಿತ್ತು. ಈ ವರ್ಷದ ಕೊನೆಯಲ್ಲಿ ಮದುವೆಯಾಗಬೇಕೆಂದು ನಿರ್ಧಾರ ಮಾಡಿದ್ದರು ಎಂದು ಅವರ ಸೋದರ ಸಂಬಂಧಿ ಬಿಸ್ವಾಸ್ ಹೇಳಿದ್ದಾರೆ. ಅವರು ನನಗೆ ಗುರುವಾರ ಸುಮಾರು 10 ಗಂಟೆಗೆ ಹಾಗೂ ಮಧ್ಯಾಹ್ನ 3.10ಕ್ಕೆ ಫೋನ್ ಮಾಡಿದ್ದರು. ಬಳಿಕ ಮಾತನಾಡುತ್ತಿದ್ದಾಗಲೇ ಕರೆ ಕಟ್ ಆಗಿತ್ತು. ಆದರೆ ಶುಕ್ರವಾರ ಬೆಳಗ್ಗೆ ದಾಳಿಯ ಬಗ್ಗೆ ತಿಳಿಯಿತು ಎಂದು ತಿಳಿಸಿದ್ದಾರೆ.

ಬಬ್ಲೂ ಸಂತ್ರಾ, ವಯಸ್ಸು-39, ಮುಖ್ಯ ಪೇದೆ, ಊರು: ಪಶ್ಚಿಮ ಬಂಗಾಳ

bablu santra
ಬಬ್ಲೂ ಸಾಂಟ್ರಾ ತಮ್ಮ ಹೊಸ ಎರಡು ಅಂತಸ್ತಿನ ಮನೆಗೆ ಪೇಂಟಿಂಗ್ ಮಾಡಿಸಲು ಮಾರ್ಚ್ 3 ರಂದು ಹೋಗಬೇಕಿತ್ತು. ಇನ್ನೂ 8 ತಿಂಗಳಲ್ಲಿ ಅವರು ಹೊಸ ಮನೆಗೆ ಹೋಗುತ್ತಿದ್ದರು. ಬಬ್ಲೂ ಅವರು ಡಿಸೆಂಬರ್ ತಿಂಗಳಿನಲ್ಲಿ ಮನೆಯ ನಿರ್ಮಾಣದ ಕೆಲಸವನ್ನು ಮುಗಿಸಿದ್ದರು. ಮಾರ್ಚ್ 3 ರಂದು ಮನೆಗೆ ಹೋಗಬೇಕೆಂದು ನಿರ್ಧರಿಸಿ ಟಿಕೆಟ್ ಗಳನ್ನು ಸಹ ಬುಕ್ ಮಾಡಿದ್ದರು.

Babu Mother

ಮನೆಯ ಪೇಂಟಿಂಗ್ ಕೆಲಸ ಮುಗಿದ ನಂತರ ನಾವೆಲ್ಲರೂ ಹೊಸ ಮನೆಗೆ ಹೋಗೋಣ ಎಂದಿದ್ದರು. ಇನ್ನೂ 8 ತಿಂಗಳು ಕಳೆದರೆ ಅವರಿಗೆ 40 ವರ್ಷವಾಗುತ್ತಿತ್ತು. ಆಗ ಸಿ.ಆರ್.ಪಿ.ಎಫ್. ಕೆಲಸ ಬಿಡಲು ನಿರ್ಧರಿಸಿದ್ದರು. ಗುರುವಾರ ಸುಮಾರು 10 ಗಂಟೆಗೆ ನನಗೆ ಫೋನ್ ಮಾಡಿ ಕುಟುಂಬದ ಬಗ್ಗೆ ಕೇಳಿದ್ದರು ಎಂದು ಸಹೋದರ ಕಲ್ಯಾಣ್ ಹೇಳಿದ್ದಾರೆ. ಗುರುವಾರ ಫೋನ್ ಮಾಡಿದ್ದ ವೇಳೆ ಮಾತನಾಡಿದ್ದೇ ಕೊನೆಯ ಬಾರಿಗೆ ಮಾತನಾಡಿದ್ದು ಎಂದು ಬಬ್ಲೂ ತಾಯಿ ಬನಮಾಲಾ ಹೇಳಿದ್ದಾರೆ. ಬಬ್ಲೂ ಅವರು ಪತ್ನಿ ಮಿತಾ ಮತ್ತು ಮಗಳು ಪಿಯಾಲ್ (6) ರನ್ನು ಅಗಲಿದ್ದಾರೆ. www.publictv.in

ಅಸ್ಸಾಂ

ಮನೇಶ್ವರ್ ಬಸುಮಾಟರಿ, ವಯಸ್ಸು-48, ಮುಖ್ಯ ಪೇದೆ, ಊರು-ಬಕ್ಸಾ

maneswar basunmatari
ಮನೇಶ್ವರ್ ಅವರು ಒಂದು ತಿಂಗಳ ಅವಧಿಯ ರಜೆಯ ಮುಗಿಸಿ ಮನೆಯಿಂದ ಫೆಬ್ರವರಿ 4 ರಂದು ಹೊರಟಿದ್ದರು. ಹೋಗುವ ಮೊದಲು ಅವರ ಪತ್ನಿ ಸನ್ಮತಿ ಅವರಿಗೆ ನಾನು ನಮ್ಮ ಮನೆಗೆ ಹತ್ತಿರದ ಸ್ಥಳದಲ್ಲಿ ಪೋಸ್ಟಿಂಗ್ ಹಾಕಿಸಿಕೊಳ್ಳಲು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದರು. ಮನೇಶ್ವರ್ ಅವರು ಬೊಡೋ ಸಮುದಾಯದಿಂದ ಬಂದಿದ್ದು, 20 ವರ್ಷದ ಮಗಳು ಡಿಡ್ವಿಮಿಸ್ರಿ ಮತ್ತು ಮಗ ಧನಂಜಯ್ ಅವರನ್ನು ಅಗಲಿದ್ದಾರೆ.

mnd guru teacher 2

ನಾನು ಕಳೆದ ಗುರುವಾರ ಅವರ ಜೊತೆ ಕೊನೆಯದಾಗಿ ಮಾತನಾಡಿದ್ದೆ. ಅವರು ಜಮ್ಮುವಿನಿಂದ ಶ್ರೀನಗರಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದ್ದರು. ಆಗ ನಾವು ಸಾಮಾನ್ಯವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲಸ ಮಾಡುವಾಗ ಆಗುವ ಅಪಾಯಗಳ ಕುರಿತು ಮಾತನಾಡುತ್ತಿದ್ದೆವು. ಅವರು ಶೀಘ್ರದಲ್ಲೇ ಸ್ವಯಂನಿವೃತ್ತಿ ಹೊಂದುವುದಾಗಿ ಹೇಳಿದ್ದರು. ಆದರೆ ನಾನು ನಮ್ಮ ಮಕ್ಕಳು ವ್ಯಾಸಂಗ ಮಾಡುತ್ತಿದ್ದ ಕಾರಣ ಅವರಿಗೆ ಬುದ್ಧಿವಾದ ಹೇಳಿದ್ದೆ. ಅವರು ಅಸ್ಸಾಂನಲ್ಲಿ ಪೋಸ್ಟಿಂಗ್ ಹಾಕಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು ಎಂದು ಪತ್ನಿ ತಿಳಿಸಿದ್ದಾರೆ.

ಒಡಿಶಾ

ಪ್ರಸನ್ನ ಕುಮಾರ್ ಸಾಹೂ, ವಯಸ್ಸು-46, ಮುಖ್ಯಪೇದೆ, ಶಿಖರ್ ಗ್ರಾಮ, ಜಗತ್ ಸಿಂಗ್ ಪುರ

p k sahoo
ಒಡಿಶಾ ಜಗತಿಸಿಂಗ್‍ಪುರದ ಪ್ರಸನ್ನಕುಮಾರ್ ಸಿ.ಆರ್.ಪಿ.ಎಫ್.ನಲ್ಲಿ ಹೆಡ್ ಕಾನ್ ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಪತ್ನಿ, 18 ವರ್ಷದ ಮಗಳು, 16 ವರ್ಷದ ಮಗನನ್ನು ಸಾಹೋ ಅಗಲಿದ್ದಾರೆ. ಪಬ್ಲಿಕ್ ಟಿವಿ

ಕಾಲೇಜು ಓದುತ್ತಿರುವ ಪುತ್ರಿ, ತಂದೆ ದೇಶಕ್ಕಾಗಿ ವೀರ ಮರಣವನ್ನು ಅಪ್ಪಿದ್ದಕ್ಕೆ ಹೆಮ್ಮೆ ಪಟ್ಟಿದ್ದಾಳೆ. ಸಂಬಂಧಿ ಸುದರ್ಶನ್ ಮಾತನಾಡಿ, ಸಿ.ಆರ್.ಪಿ.ಎಫ್. ನ ಯಾರೋ ಕರೆ ಮಾಡಿ ಸಾಹೋ ಮೃತಪಟ್ಟಿದ್ದಾರೆ ಎಂದು ತಿಳಿಸಿದರು. ಆದರೆ ಪತ್ನಿಗೆ ಹಿಂದಿ ಅರ್ಥವಾಗಲಿಲ್ಲ. ಟಿವಿ ವಾಹಿನಿಗಳಲ್ಲಿ ಸುದ್ದಿ ಬಂದ ನಂತರ ಮೃತಪಟ್ಟಿದ್ದಾರೆ ಎನ್ನುವ ವಿಚಾರ ಗೊತ್ತಾಯಿತು ಎಂದು ಹೇಳಿದ್ದಾರೆ.

ಮನೋಜ್ ಕುಮಾರ್ ಬೆಹೆರಾ, ವಯಸ್ಸು-33, ಪೇದೆ, ಊರು-ಕಟಕ್

manoja kr behera
ಒಡಿಶಾದ ಕಟಕ್ ಮೂಲದ ಮನೋಜ್ ಕುಮಾರ್ ಕಳೆದ ಡಿಸೆಂಬರ್ ನಲ್ಲಿ ಮನೆಗೆ ವಾರ್ಷಿಕ ರಜೆಯಲ್ಲಿ ಬಂದಿದ್ದರು. ಫೆ.6 ರಂದು ತನ್ನ ಪುತ್ರಿಯ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿ ಕರ್ತವ್ಯಕ್ಕಾಗಿ ಜಮ್ಮುವಿಗೆ ತೆರಳಿದ್ದರು. ತಂದೆ ಜಿತೇಂದ್ರ ಬೆಹೆರಾ ಮಾತನಾಡಿ, ದಾಳಿ ನಡೆಯುವ ಕೆಲವೇ ಗಂಟೆಗಳ ಮೊದಲು ಮನೋಜ್ ಪತ್ನಿಗೆ ಕರೆ ಮಾಡಿ ಮಾತನಾಡಿದ್ದ. ಉಗ್ರರ ದಾಳಿ ವಿಚಾರ ಗೊತ್ತಾದ ಬಳಿಕ ನಾವು ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ಹೇಳಿದರು. www.publictv.in

ಬಿಹಾರ್

ರತನ್ ಕುಮಾರ್ ಠಾಕೂರ್, ವಯಸ್ಸು-30, ಪೇದೆ, ಊರು-ಭಗಲ್ಪುರ

ratan kumar
ಗುರುವಾರ ಮಧ್ಯಾಹ್ನ 1.30ಕ್ಕೆ ರತನ್ ಕುಮಾರ್ ಪತ್ನಿಗೆ ಕರೆ ಮಾಡಿ ಇವತ್ತು ಸಂಜೆ ಶ್ರೀನಗರಕ್ಕೆ ತಲುಪುತ್ತೇವೆ ಎಂದು ಹೇಳಿದ್ದ. ಗುರುವಾರ ಸಂಜೆ 4 ಗಂಟೆಯ ವೇಳೆಗೆ ಸಿ.ಆರ್.ಪಿ.ಎಫ್. ನಿಂದ ಕರೆ ಬಂತು. ಈ ವೇಳೆ ರತನ್ ಫೋನ್ ನಂಬರ್ ಕೇಳಿದರು. ಆದರೆ ಅವರು ಅಧಿಕೃತವಾಗಿ ಮಾಹಿತಿ ನೀಡಲಿಲ್ಲ. ನನ್ನ ಒಬ್ಬನೇ ಮಗ ರತನ್. ನನಗೆ ಬೇಸರವಾಗುತ್ತಿದೆ. ಆದರೆ ದೇಶಕ್ಕಾಗಿ ನನ್ನ ಮಗ ಮೃತಪಟ್ಟಿದ್ದಾನೆ ಎನ್ನುವ ವಿಚಾರ ಕೇಳಿದಾಗ ಹೆಮ್ಮೆಯಾಗುತ್ತಿದೆ ಎಂದು ತಂದೆ ರಾಮ್ ನಿರಂಜನ್ ಠಾಕೂರ್ ಹೇಳಿದ್ದಾರೆ. ರತನ್ ಅವರು 2011 ರಲ್ಲಿ ಸಿ.ಆರ್.ಪಿ.ಎಫ್ ಸೇರಿದ್ದರು. ಈಗ ಗರ್ಭಿಣಿ ಪತ್ನಿ ಮತ್ತು 4 ವರ್ಷದ ಮಗನನ್ನು ರತನ್ ಅಗಲಿ ಹೋಗಿದ್ದಾರೆ.

c5blmgg terror attack in

ಈ ವರ್ಷದ ಹೋಳಿ ಹಬ್ಬವನ್ನು ಆಚರಿಸಲು ಬರುತ್ತೇನೆ. ಅಷ್ಟೇ ಅಲ್ಲದೇ ನನ್ನ ಸಹೋದರಿ ನೀತುಗೆ ಉತ್ತಮ ವರನನ್ನು ಹುಡುಕಲು ಸಹಾಯ ಮಾಡಬೇಕು ಎಂದು ಕೇಳಿಕೊಂಡಿದ್ದ ಎಂದು ಸಂಬಂಧಿ ರಾಮ್ ಹೇಳಿದ್ದಾರೆ. ರತನ್ ತಂದೆ ಕೂಲಿ ಕೆಲಸ ಮಾಡಿ ಮಗನನ್ನು ಓದಿಸಿದ್ದರು. ಮಗನಿಗೆ ಉದ್ಯೋಗ ಸಿಕ್ಕಿದ ಬಳಿಕ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಿತ್ತು. ಪಬ್ಲಿಕ್ ಟಿವಿ

ಸಂಜಯ್ ಕುಮಾರ್ ಸಿನ್ಹಾ, ವಯಸ್ಸು-45, ಮುಖ್ಯಪೇದೆ, ಪಾಟ್ನಾ

sanjay kumar sinha 2
ಬಿಹಾರದ ಸಂಜಯ್ ಕುಮಾರ್ ಸಿನ್ಹಾ ಒಂದು ತಿಂಗಳ ರಜೆಯನ್ನು ಮುಗಿಸಿ ಫೆ.8 ರಂದು ತೆರಳಿದ್ದರು. 15 ದಿನದ ನಂತರ ಸಂಜಯ್ ಕುಮಾರ್ ಅವರು ಪುತ್ರಿಗಾಗಿ ವರನನ್ನು ಹುಡುಕಲು ಮನೆಗೆ ಬರಬೇಕಿತ್ತು. ಸಂಜಯ್ ಕುಮಾರ್ ಸಿಂಗ್ ಅವರ ಹಿರಿಯ ಮಗಳು ಪದವಿ ಓದಿದ್ದು, ಮಗ ವೈದ್ಯಕೀಯ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿದ್ದಾನೆ. ಹಿರಿಯ ಸಹೋದರ ಶಂಕರ್ ಸಹ ಸಿ.ಆರ್.ಪಿ.ಎಫ್.ನಲ್ಲಿ ಉದ್ಯೋಗದಲ್ಲಿದ್ದಾರೆ. ದೇಶಕ್ಕಾಗಿ ಮಗ ಪ್ರಾಣ ಕೊಟ್ಟಿದ್ದಕ್ಕೆ ನನಗೆ ಹೆಮ್ಮೆಯಿದೆ. ಉಗ್ರರ ದಾಳಿಗೆ ಸರ್ಕಾರ ಪ್ರತೀಕಾರ ತೀರಸಲೇ ಬೇಕು ಎಂದು ತಂದೆ ಮಹೇಂದ್ರ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

ಹಿಮಾಚಲ ಪ್ರದೇಶ

ತಿಲಕ್ ರಾಜ್, ವಯಸ್ಸು-30, ಪೇದೆ, ಊರು-ಕಾಂಗ್ರಾ

tilak raj
ಹಿಮಾಚಲ ಪ್ರದೇಶದ ಕಾಂಗ್ರಾದ ತಿಲಕ್ ರಾಜ್ 6 ವಾರಗಳ ರಜೆ ಪಡೆದು ಮನೆಗೆ ಬಂದಿದ್ದರು. 25 ವರ್ಷದ ಪತ್ನಿ ಸಾವಿತ್ರಿ 23 ದಿನದ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಸೋಮವಾರ ಕರ್ತವ್ಯಕ್ಕೆ ತೆರಳಿದ್ದರು. ಗುರುವಾರ ಬೆಳಗ್ಗೆ 11 ಗಂಟೆಗೆ ಪತ್ನಿಗೆ ಕರೆ ಮಾಡಿ ಮಾತನಾಡಿ ಶುಕ್ರವಾರ ಕರೆ ಮಾಡುತ್ತೇನೆ ಎಂದು ತಿಲಕ್ ರಾಜ್ ತಿಳಿಸಿದ್ದರು. ಗಾಯಕರಾಗಿದ್ದ ಕಾರಣ ಇವರು ಗ್ರಾಮದಲ್ಲಿ ಪರಿಚಿತರಾಗಿದ್ದರು. ಕಳೆದ 6 ತಿಂಗಳ ಹಿಂದೆ ಮೂರು ಹಾಡುಗಳನ್ನು ರೆಕಾರ್ಡ್ ಮಾಡಿ ಯೂ ಟ್ಯೂಬ್ ಗೆ ಅಪ್ಲೋಡ್ ಮಾಡಿದ್ದು, 3 ಲಕ್ಷ ವ್ಯೂ ಕಂಡಿದೆ. www.publictv.in

ಮಧ್ಯಪ್ರದೇಶ

ಅಶ್ವನಿ ಕಾಚಿ, ವಯಸ್ಸು-28, ಪೇದೆ, ಊರು-ಖುದಾವಲ್ ಗ್ರಾಮ, ಜಬಲ್ಪುರ

ashvani kumar
ಒಂದು ವೇಳೆ ಶತ್ರು ನನಗೆ ಮುಖಾಮುಖಿಯಾದರೆ ನಾನು ಬೆನ್ನು ಹಿಂದೆ ಹಾಕಿ ಹೋಗುವುದಿಲ್ಲ. ಮನೆಗೆ ತ್ರಿವರ್ಣ ಧ್ವಜವನ್ನು ಹೊದಿಸಿಕೊಂಡು ಬರುತ್ತೇನೆ ಎಂದು ಅಶ್ವನಿ ಅವರು ಅಕ್ಟೋಬರ್ ನಲ್ಲಿ ಮನೆಗೆ ಬಂದಾಗ ತಮ್ಮ ಸ್ನೇಹಿತರ ಜೊತೆ ಹೇಳಿದ್ದರು. ಐವರು ಮಕ್ಕಳಲ್ಲಿ ಕಿರಿಯವರಾದ ಅಶ್ವನಿ 2017ರ ಮಾರ್ಚ್ ನಲ್ಲಿ ಸಿ.ಆರ್.ಪಿ.ಎಫ್. ಸೇರಿದ್ದರು. ಕುಟುಂಬದ ಸದಸ್ಯರು ಅಶ್ವನಿ ಅವರಿಗೆ ಮದುವೆ ಮಾಡಿಸಲು ಹುಡುಗಿಯನ್ನು ಹುಡುಕುತ್ತಿದ್ದರು. ತಂದೆ ಕೂಲಿ ಕೆಲಸ ಮಾಡುತ್ತಿದ್ದು, ತಾಯಿ ಬೀಡಿ ಕಟ್ಟುತ್ತಿದ್ದಾರೆ.

ಜಮ್ಮು ಮತ್ತು ಕಾಶ್ಮೀರ

ನಸೀರ್ ಅಹ್ಮದ್, ವಯಸ್ಸು-46, ಮುಖ್ಯಪೇದೆ, ಊರು-ರಜೌರಿ

naseer ahmed
ನಸೀರ್ ಅಹ್ಮದ್ 2014ರಲ್ಲಿ ನೆರೆ ಬಂದಾಗ ಪುಲ್ವಾಮದಲ್ಲಿ ಕಾರ್ಯಾಚರಣೆಯ ತಂಡದಲ್ಲಿ ಭಾಗಿಯಾಗಿದ್ದರು. ಐದು ವರ್ಷದ ಬಳಿಕ ಅದೇ ಪುಲ್ವಾಮ ಜಿಲ್ಲೆಯಲ್ಲಿ ಹುತಾತ್ಮರಾಗಿದ್ದಾರೆ. 6 ಮಕ್ಕಳಲ್ಲಿ ಕಿರಿಯರಾದ ನಸೀರ್ ಅವರಿಗೆ 8 ಮತ್ತು 6 ವರ್ಷದ ಇಬ್ಬರು ಮಕ್ಕಳಿದ್ದಾರೆ. ಇವರ ಹಿರಿಯ ಸಹೋದರ ಸಿರಾಜ್ ಜಮ್ಮುವಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ. www.publictv.in

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

TAGGED:CRPFindian armyJammu and KashmirPublic TVPulwamaPulwama terrorists attackwarriorsಜಮ್ಮು ಮತ್ತು ಕಾಶ್ಮೀರಪಬ್ಲಿಕ್ ಟಿವಿಪುಲ್ವಾಮಾಪುಲ್ವಾಮಾ ಉಗ್ರರ ದಾಳಿಭಾರತೀಯ ಸೇನೆಯೋಧರುಸಿಆರ್ ಪಿಎಫ್
Share This Article
Facebook Whatsapp Whatsapp Telegram

Cinema news

Arvind Reddy 1 1
ಮದುವೆ ಆಗ್ತೀನಿ, ರಿಲೇಷನ್‌ಶಿಪ್‌ನಲ್ಲಿ ಇರ್ತೀನಿ ಅಂತ ಇನ್ನೂ ಮೂವರಿಗೆ ಮೋಸ ಮಾಡಿದ್ದಾಳೆ: ನಟಿ ವಿರುದ್ಧ ಅರವಿಂದ್ ರೆಡ್ಡಿ ಆರೋಪ
Cinema Latest Main Post Sandalwood
Cockroach sudhi
ʻನಮ್ಮ ಮನೇಲಿ ನಾನು… ನನ್ನ ಹೆಂಡ್ತಿ & ಸಿಲ್ಕ್ ಸ್ಮಿತಾ ಇದ್ವಿʼ: ಕಾಕ್ರೋಚ್ ಸುಧಿ
Cinema Latest Sandalwood Top Stories
Cockroach Sudhi Rakshitha Shetty
ರಕ್ಷಿತಾಗೆ ಆ *** ಪದ ಬಳಸಿದ್ದಕ್ಕೆ ಬೇಜಾರಿದೆ, ಕೈಮುಗಿದು ಕ್ಷಮೆ ಕೇಳ್ತೀನಿ: ಕಾಕ್ರೋಚ್ ಸುಧಿ
Cinema Latest Main Post TV Shows
QPL season 2 1
QPL ಸೀಸನ್ 2: ಶಿವಮೊಗ್ಗ ಕ್ವೀನ್ಸ್ ತಂಡಕ್ಕೆ ಚಾಂಪಿಯನ್ ಪಟ್ಟ
Cinema Cricket Latest Sandalwood Shivamogga Sports Top Stories

You Might Also Like

Transport of Human Heart Through Namma Metro
Bengaluru City

ನಮ್ಮ ಮೆಟ್ರೋದಲ್ಲಿ ಯಶಸ್ವಿಯಾಗಿ ಮಾನವ ಹೃದಯ ಸಾಗಣೆ

Public TV
By Public TV
7 hours ago
siddaramaiah mallikarjun kharge
Bengaluru City

ಸಂಪುಟ ಪುನಾರಚನೆಯೋ, ಸಿಎಂ ಕುರ್ಚಿ ಗಟ್ಟಿಯೋ? – ಖರ್ಗೆ ಬಳಿ 10+2 ಪ್ರಸ್ತಾಪ ಮುಂದಿಟ್ಟ ಸಿದ್ದರಾಮಯ್ಯ

Public TV
By Public TV
7 hours ago
01 12
Big Bulletin

ಬಿಗ್‌ ಬುಲೆಟಿನ್‌ 17 November 2025 ಭಾಗ- 1

Public TV
By Public TV
7 hours ago
02 11
Big Bulletin

ಬಿಗ್‌ ಬುಲೆಟಿನ್‌ 17 November 2025 ಭಾಗ- 2

Public TV
By Public TV
8 hours ago
03 11
Big Bulletin

ಬಿಗ್‌ ಬುಲೆಟಿನ್‌ 17 November 2025 ಭಾಗ- 3

Public TV
By Public TV
8 hours ago
Bengaluru Cold Weather 1
Bagalkot

ಇಂದಿನಿಂದ ನ.20 ರವರೆಗೆ ಕಲಬುರಗಿ ಸೇರಿ 5 ಜಿಲ್ಲೆಗಳಲ್ಲಿ ಶೀತ ಗಾಳಿ ಎಚ್ಚರಿಕೆ – ಮುನ್ನೆಚ್ಚರಿಕೆ ವಹಿಸಲು ಸೂಚನೆ

Public TV
By Public TV
8 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?