ಬೆಂಗಳೂರು: ಆನ್ಲೈನ್ ಶಾಪಿಂಗ್ ತಾಣ ಮಿಂತ್ರಾ ಕಾರ್ಯ ನಿರ್ವಹಣಾಧಿಕಾರಿ ಅನಂತ್ ನಾರಾಯಣನ್ ಮನೆಯಲ್ಲಿ 1 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣವನ್ನು ಪೊಲೀಸರು ಬೇಧಿಸಿದ್ದು ಮನೆಯ ಕೆಲಸದಾಕೆಯನ್ನು ಬಂಧಿಸಿದ್ದಾರೆ.
ಭವಾನಿ ಬಂಧಿತ ಆರೋಪಿಯಾಗಿದ್ದು, ತಮಿಳುನಾಡು ಮೂಲದ ಮತ್ತೊಬ್ಬ ಆರೋಪಿ ಸುರೇಶ್ಗಾಗಿ ಶೋಧ ಕಾರ್ಯವನ್ನು ಕಬ್ಬನ್ ಪಾರ್ಕ್ ಪೊಲೀಸರು ನಡೆಸುತ್ತಿದ್ದಾರೆ.
ಕದ್ದಿದ್ದು ಯಾಕೆ?
ಭವಾನಿ ಮತ್ತು ಸುರೇಶ್ 2 ವರ್ಷಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದು ಮದುವೆ ಆಗುವ ನಿರ್ಧಾರ ಮಾಡಿದ್ದರು. ಮದುವೆಯಾದ ಬಳಿಕ ಐಷಾರಾಮಿ ಜೀವನ ನಡೆಸುವ ಏನು ಮಾಡಬೇಕೆಂದು ಯೋಚಿಸುತ್ತಿದ್ದಾಗ ಈ ಕಳ್ಳತನ ನಡೆಸುವ ಯೋಜನೆ ರೂಪಿಸಿದ್ದರು.
ಕುಟುಂಬ ಸದಸ್ಯರು ವಿದೇಶಕ್ಕೆ ತೆರಳುವ ಮಾಹಿತಿ ತಿಳಿದಿದ್ದ ಭವಾನಿ ಅನಂತ್ ನಾರಾಯಣನ್ ಅವರ ಪತ್ನಿ ಪರ್ಸ್ ನಿಂದ ಲಾಕರ್ ಕೀಯನ್ನು ಕದ್ದಿದ್ದಳು. ಆನಂತ್ ನಾರಾಯಣನ್ ಕುಟುಂಬ ಸದಸ್ಯರು ವಿದೇಶಕ್ಕೆ ತೆರಳಿದ ಬಳಿಕ ಭವಾನಿ ಮತ್ತು ಸುರೇಶ್ ಆಭರಣವನ್ನು ಕದ್ದಿದ್ದರು.
ಪ್ಲಾನ್ ಹೀಗಿತ್ತು:
ತಮಿಳುನಾಡಿನ ಸುರೇಶ್ 7 ತಿಂಗಳ ಮುಂಚೆ ಅನಂತ್ ಅವರ ಮನೆಯಲ್ಲಿ ಕೆಲಸ ಬಿಟ್ಟು ದರೊಡೆ ಮಾಡಲು ಎಲ್ಲಾ ತಯಾರಿ ನಡೆಸುತ್ತಿದ್ದ. ಇದರ ನಡುವೆಯೇ ಅನಂತ್ ಕುಟುಂಬದ ಜೊತೆ ಫಾರಿನ್ ಗೆ ಹೋಗಿದ್ದರು. ಇದು ಸರಿಯಾದ ಸಮಯ ಎಂದು ಭವಾನಿ ಮನೆಯಲ್ಲಿದ್ದ ಚಿನ್ನಾಭರಣವನ್ನು ದೋಚಿದ್ದಳು. ನಂತರ ಎಲ್ಲಾ ಚಿನ್ನಾಭರಣವನ್ನು ಸುರೇಶ್ ಗೆ ಒಪ್ಪಿಸಿದ್ದಳು. ಚಿನ್ನ ಮಾರುವವರಿಗೂ ಕರೆ ಮಾಡದಂತೆ ಸುರೇಶ್ ಭವಾನಿಗೆ ತಿಳಿಸಿದ್ದ ವಿಚಾರ ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.
ಅನಂತ್ ಅವರ ಮನೆಯಲ್ಲಿ ಭವಾನಿ, ಸುರೇಶ್ ಹಾಗೂ ಪುಷ್ಪ ಕೆಲಸ ಮಾಡುತ್ತಿದ್ದರು. ಅನಂತ್ ಕೊಟ್ಟ ದೂರಿನ ಆಧಾರದ ಮೇರೆಗೆ ಮನೆಯ ಎಲ್ಲಾ ಕೆಲಸಗಾರರನ್ನೂ ವಿಚಾರಣೆ ನಡೆಸಿ ಮನೆ ಹಾಗೂ ಕಟ್ಟಡದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ನಡೆಸಲಾಗಿತ್ತು. ನಂತರ ಫಿಂಗರ್ ಪ್ರಿಂಟ್ ತಜ್ಞರನ್ನು ಕರೆಸಿ ಪರೀಕ್ಷಿಸಿದಾಗ ಭವಾನಿ ಕಳ್ಳತನ ಎಸಗಿದ್ದು ಸಾಬೀತಾಗಿತ್ತು.
ಅನುಮಾನ ನಿಜವಾಯ್ತು: ಕುಟುಂಬದ ಸದಸ್ಯರ ಜೊತೆ ವಿದೇಶ ಪ್ರವಾಸದಲ್ಲಿದ್ದಾಗ ಲ್ಯಾವೆಲ್ಲಿ ರೋಡ್ ನಲ್ಲಿರುವ ಮನೆಯಿಂದ ಏಳು ವಜ್ರದ ನೆಕ್ಲೇಸ್, ಆರು ಚಿನ್ನದ ಬಳೆ, ನಾಲ್ಕು ವಜ್ರದ ಬ್ರೇಸ್ಲೆಟ್, ಚಿನ್ನಾಭರಣ ಕಳುವಾಗಿದೆ ಎಂದು ಅನಂತ್ ನಾರಾಯಣನ್ ಸೆ.8ರಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸಮಾರಂಭವೊಂದಕ್ಕೆ ತೆರಳಲು ಮನೆಯಲ್ಲಿದ್ದವರು ಸಿದ್ಧರಾಗುತ್ತಿದ್ದ ಸಂದರ್ಭದಲ್ಲಿ ಆಭರಣ ಧರಿಸಲು ಬೀರು ತೆಗೆದಾಗ ಅದರಲ್ಲಿ ಯಾವುದೂ ಕಾಣಲಿಲ್ಲ. ಕಳವಾಗಿರುವ ಆಭರಣಗಳ ಮೌಲ್ಯ ಸುಮಾರು 1 ಕೋಟಿ ರೂಪಾಯಿ ಎಂದು ದೂರಿನಲ್ಲಿ ವಿವರಿಸಿದ್ದರು. ದೂರಿನಲ್ಲಿ ಅನಂತ್ ನಾರಾಯಣ್ ಅವರು ಮನೆಯ ಕೆಲಸದವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.
ಆರೋಪಿ ಭವಾನಿಯನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.