-ಬಿಜೆಪಿ ಸರ್ಕಾರ ಸಾಂದರ್ಭಿಕ ಶಿಶು
ಬೆಳಗಾವಿ: ಪ್ರವಾಹದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಆದರೆ ರಾಜ್ಯ ಸರ್ಕಾರ ಜನರಿಗೆ ಸ್ಪಂದಿಸುತ್ತಿಲ್ಲ. ಸಿಎಂ ಯಡಿಯೂರಪ್ಪ ಅವರು ದೆಹಲಿ ಟು ಬೆಂಗಳೂರು ಅಲೆದಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬೆಳಗಾವಿಯ ಸರ್ಕ್ಯೂಟ್ ಹೌಸಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನರ ನಿಜವಾದ ಸಮಸ್ಯೆಗಳ ಬಗ್ಗೆ ಈ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ಡಿಸಿಎಂ ಯಾರನ್ನಾದರನ್ನ ಮಾಡಿಕ್ಕೊಳ್ಳಲಿ, ನಮಗೇಕೆ? ನಾವು ಮಾತ್ರ ಜನರ ಸಂಕಷ್ಟಕ್ಕೆ ಸ್ಪಂದನೆ ಮಾಡುತ್ತೇವೆ. ಪ್ರವಾಹ ಸಿಎಂ ದೆಹಲಿ-ಬೆಂಗಳೂರು ಅಲೆದಾಡುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಯಡಿಯೂರಪ್ಪ ಅವರಿಗೆ ಭೇಟಿ ಮಾಡಲು ಅವಕಾಶ ಕೊಡಲ್ಲ. ಅವರ ಕೈಯಲ್ಲಿ ರಾಜ್ಯದ ಆಡಳಿತ ಇದೆ. ಹಿಂದೆ ಬಿಜೆಪಿ ಅವರು ಕಾಂಗ್ರೆಸ್ ಬಗ್ಗೆ ಮಾತನಾಡುತ್ತಿದ್ದರು, ಆದರೆ ಈಗ ನಡೆಯುತ್ತಿರೋದು ಏನು? ಎಂದು ಪ್ರಶ್ನಿಸಿ ಸಿದ್ದರಾಮಯ್ಯ ಹರಿಹಾಯ್ದರು.
ಪ್ರವಾಹಕ್ಕೋಸ್ಕರ ಕೇಂದ್ರ ಎಷ್ಟು ಹಣ ಬಿಡುಗಡೆ ಮಾಡಿದೆ ಎನ್ನುವುದನ್ನ ಹೇಳಲಿ. 25 ಮಂದಿ ಸಂಸದರು ಏನು ಮಾಡುತ್ತಿದ್ದಾರೆ? ಸಂಸದರು ಪ್ರವಾಹ ಪೀಡಿತ ಪ್ರದೇಶಕ್ಕೆ ಕಾಟಾಚಾರದ ಭೇಟಿ ನಿಡುತ್ತಿದ್ದಾರೆ. ರಾಜ್ಯಕ್ಕೆ ಎಕ್ಸಪರ್ಟ್ ಟೀಮ್ ಬರಬೇಕು ಅಂತ ಏನಿಲ್ಲ. ಈಗ ಮಾಡಿರುವ ಟೀಮ್ಗಳ ವರದಿಯನ್ನ ಇಟ್ಟುಕ್ಕೊಂಡು ಕೇಂದ್ರ ಪರಿಹಾರ ಕೊಡಬೇಕು. ಪ್ರವಾಹ ಬಂದು 20 ದಿನ ಕಳೆದಿದೆ ಒಂದೇ ಒಂದು ಪೈಸೆ ಪರಿಹಾರ ಹಣವನ್ನು ಕೇಂದ್ರ ಬಿಡುಗಡೆ ಮಾಡಿಲ್ಲ. ಮಲತಾಯಿ ಧೋರಣೆ ತೋರುತ್ತಿದೆ. ಆದಷ್ಟು ಬೇಗ ಕೇಂದ್ರ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು
ಮಧ್ಯಂತರ ಚುನಾವಣೆ ಬರಬೇಕಂತೆನಿಲ್ಲ, ಕುದುರೆ ವ್ಯಾಪಾರ ಮಾಡಿ ವಾಮ ಮಾರ್ಗದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಸದ್ಯ ಬಿಜೆಪಿ ಸಾಂದರ್ಭಿಕ ಶಿಶುವಾಗಿದೆ. ಈ ಸರ್ಕಾರಕ್ಕೆ ಬಡವರು, ಪ್ರವಾಹ ಪೀಡಿತರು ಹಾಗೂ ರೈತರನ್ನು ಕಂಡರೆ ಗೌರವವಿಲ್ಲ. ಪ್ರಧಾನಿ ಅವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಬಾಯಿಮಾತಿಗೆ ಹೇಳುತ್ತಾರೆ ಎಂದು ಟಾಂಗ್ ಕೊಟ್ಟರು.
ಆಪರೇಷನ್ ಕಮಲ ಜನಕ ಸಿದ್ದರಾಮಯ್ಯ ಎಂದ ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಶ್ವರಪ್ಪ ಮೂರ್ಖ, ಅವರ ನಾಲಿಗೆಗೂ ಮತ್ತು ಬ್ರೆನ್ಗೆ ಲಿಂಕ್ ಇಲ್ಲ ಎಂದು ತಿರುಗೇಟು ಕೊಟ್ಟರು. ಜೊತೆಗೆ ಅನರ್ಹ ಶಾಸಕರ ವಿಚಾರವಾಗಿ ಮಾತನಾಡಿ, ಅವರಿಗೆ ತಕ್ಕ ಪಾಠ ಆಗಲಿ ಅಂತನೇ ಅನರ್ಹ ಮಾಡಿದ್ದು. ಮುಂದಿನ ದಿನಗಳಲ್ಲಿ ಅವರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.