– ಕಾರ್ಯಕ್ರಮಕ್ಕೆ ಸಮಯಾವಕಾಶ ಕೇಳಿ ಜೂ.4ರಂದೇ ಪತ್ರ ಬರೆದಿದ್ದ ಡಿಸಿಪಿ
ಬೆಂಗಳೂರು: ಆರ್ಸಿಬಿ (RCB) ವಿಜಯೋತ್ಸವ ಹಿನ್ನೆಲೆಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣ (Stampede Case) ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಸಿಎಂ, ಡಿಸಿಎಂ, ಪರಮೇಶ್ವರ್ ರಾಜೀನಾಮೆಗೆ ವಿಪಕ್ಷಗಳು ಪಟ್ಟು ಹಿಡಿವೆ. ಈ ನಡುವೆ ಜೂನ್ ನಾಲ್ಕರಂದೇ ಭದ್ರತೆ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸೌದ ಭದ್ರತಾ ವಿಭಾಗದ ಡಿಸಿಪಿ ಬರೆದ ಪತ್ರ ಸಂಚಲನ ಮೂಡಿಸಿದೆ. ಇದರಿಂದ ಪೊಲೀಸರು ಬೇಡವೆಂದರೂ ಸರ್ಕಾರ ಹಠಕ್ಕೆ ಬಿದ್ದು ಕಾರ್ಯಕ್ರಮ ಮಾಡಿಸಿತಾ ಅನ್ನೋ ಪ್ರಶ್ನೆ ಹುಟ್ಟುಹಾಕಿದೆ.
ಹೌದು.. ಡಿಸಿಪಿ (Vidhan Soudha DCP) ಕರಿಬಸವನಗೌಡ ಅವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಸರ್ಕಾರದ ಮತ್ತೊಂದು ಭಂಡಾಟ ಬಯಲಾಗಿದೆ. ಆರ್ಸಿಬಿ ಅಭಿಮಾನಿಗಳ ಸಂಖ್ಯೆ ದೇಶಾದ್ಯಂತ ಇದೆ. ಆದ್ರೆ ನಮ್ಮಲ್ಲಿ ಸಿಬ್ಬಂದಿ ಕೊರತೆ ಇರೋದ್ರಿಂದ ಬಂದೋಬಸ್ತ್ಗೆ ತೊಂದರೆಯಾಗಲಿದೆ ಅನ್ನೋ ಅಂಶವನ್ನೂ ಪತ್ರದಲ್ಲಿ ಉಲ್ಲೇಖಿಸಿರುವುದು ಬೆಳಕಿಗೆ ಬಂದಿದೆ. ಇದರ ಇನ್ನಷ್ಟು ಎಕ್ಸ್ಕ್ಲೂಸಿವ್ ಮಾಹಿತಿ ತಿಳಿಯು ಕುತೂಹಲ ನಿಮಗಿದ್ದರೆ ಮುಂದೆ ಓದಿ..
ಭದ್ರತಾ ವಿಭಾಗದ ಡಿಸಿಪಿ ಬರೆದ ಪತ್ರದಲ್ಲಿ ಏನಿತ್ತು?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ತಂಡಕ್ಕೆ Fan Following ದೇಶಾದ್ಯಂತ ಇದ್ದು.. ವಿಧಾನಸೌಧ ಭವ್ಯ ಮೆಟ್ಟಿಲುಗಳ ಮುಂಭಾಗ, ಕಾರ್ಯಕ್ರಮವನ್ನು ಆತರುದಲ್ಲಿ ಆಯೋಜಿಸುವುದರಿಂದ ಲಕ್ಷಾಂತರ ಸಂಖ್ಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ವಿಧಾನಸೌಧಕ್ಕೆ ಆಗಮಿಸುವ ಸಾಧ್ಯತೆಯಿದೆ. ವಿಧಾನಸೌಧ ಭದ್ರತಾ ವಿಭಾಗದಲ್ಲಿ ಅಧಿಕಾರಿ/ಸಿಬ್ಬಂದಿಗಳ ಕೊರತೆ ಇರುವುದರಿಂದ ಬಂದೋಬಸ್ತ್ ಕರ್ತವ್ಯ ನಿರ್ವಹಣೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ.
ಜೂನ್ 4ರಂದು ಕಾರ್ಯಕ್ರಮವನ್ನು ವಿಧಾನಸೌಧ ಭವ್ಯ ಮೆಟ್ಟಿಲುಗಳ ಮುಂಭಾಗ ಆಯೋಜನೆ ಮಾಡುತ್ತಿರುವುದರಿಂದ, ಸದರಿ ದಿನದಂದು ಸಾರ್ವಜನಿಕರಿಗೆ ವಿಧಾನಸೌಧ ಪ್ರವೇಶಿಸಲು ವಿತರಣೆ ಮಾಡುವ ಆನ್ ಲೈನ್ ಮತ್ತು ಆಫ್ ಲೈನ್ ಪಾಸುಗಳನ್ನು ಸಂಪೂರ್ಣವಾಗಿ ನಿರ್ಭಂದಿಸಲು ಕೋರಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ರವರ ಸಮಾರಂಭ ಭವ್ಯ ಮೆಟ್ಟಿಲುಗಳ ಮುಂಭಾಗ ಜೂನ್ 4ರಂದು ಸಂಜೆ 4 ಗಂಟೆಗೆ ಆಯೋಜನೆಗೊಳ್ಳುತ್ತಿದ್ದು, ಸಚಿವಾಲಯದ ಅಧಿಕಾರಿ/ಸಿಬ್ಬಂದಿಗಳು ತಮ್ಮ ತಮ್ಮ ಕುಟುಂಬ ವರ್ಗದವರನ್ನು ಕರೆತರುವ ಸಾಧ್ಯತೆಗಳು ಹೆಚ್ಚಾಗಿದೆ. ಸಚಿವಾಲಯದ ಅಧಿಕಾರಿ/ಸಿಬ್ಬಂದಿಗಳಿಗೆ ಕುಟುಂಬ ವರ್ಗದವರನ್ನು ಕರೆತರದಂತೆ ಆದೇಶ ನೀಡಲು ಮತ್ತು ಸಚಿವಾಲಯದ ಅಧಿಕಾರಿ/ಸಿಬ್ಬಂದಿಗಳಿಗೆ ಅಂದು ಮಧ್ಯಾಹ್ನ ರಜೆ ಘೋಷಿಸಬೇಕು. ಸಚಿವಾಲಯದ ಅಧಿಕಾರಿ/ಸಿಬ್ಬಂದಿಗಳು ಕಾರ್ಯಕ್ರಮದ ಸ್ಥಳಕ್ಕೆ ಬರದಂತೆ ಸೂಚನೆ ಕಳುಹಿಸಬೇಕೆಂದು ಕೋರುತ್ತೇವೆ.
ವಿಧಾನಸೌದ ಕಟ್ಟಡವು Vital Installation ಕಟ್ಟಡವಾಗಿದ್ದು, ಕಟ್ಟಡದ ಸುರಕ್ಷತೆಯ ಸಂಬಂಧ ವಿಧಾನಸೌಧ ಅವರಣದ ಮತ್ತು ಮುಂಭಾಗಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಈ ಸನ್ಮಾನ ಕಾರ್ಯಕ್ರಮಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಕ್ರಿಕೆಟ್ ಆಗಮಿಸುತ್ತಿರುವುದರಿಂದ ಭದ್ರತೆಯ ದೃಷ್ಟಿಯಿಂದ ಸಿಸಿಟಿವಿಯ ಅವಶ್ಯಕತೆ ಇರುತ್ತದೆ. ಈಗ ಇರುವ ಇರುವ ಭದ್ರತಾ ವ್ಯವಸ್ಥೆಯಲ್ಲಿ ವ್ಯತಯ ಉಂಟಾಗುವ ಸಾಧ್ಯತೆ ಇರುತ್ತದೆ.
ಅಲ್ಲದೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ತಂಡಕ್ಕೆ Fan Following ದೊಡ್ಡದಾಗಿರುವುದರಿಂದ ಹೊರಗಡೆಯಿಂದ ಅಧಿಕಾರಿ/ಸಿಬ್ಬಂದಿಗಳನ್ನು ಬಂದೋಬಸ್ತ್ಗೆ ತೆಗೆದುಕೊಳ್ಳಬೇಕಾಗಿದ್ದು, ಇದಕ್ಕೆ ಸಮಯದ ಅವಶ್ಯಕತೆ ಇದೆ. ಈ ರೀತಿಯ ಬೃಹತ್ ಕಾರ್ಯಕ್ರಮಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಸಂಚಾರಿ ಪೊಲೀಸ್ ರೊಂದಿಗೆ co-ordination ಮಾಡಿಕೊಳ್ಳುವ ಅವಶ್ಯಕತೆ ಇದ್ದು, ಸಮಯವಕಾಶದ ಕೊರತೆ ಎನ್ನಿಸುತ್ತಿದೆ. ಅಲ್ಲದೇ ಇಂತಹ ಕಾರ್ಯಕ್ರಮಹಳಲ್ಲಿ ಡ್ರೋನ್ ಕ್ಯಾಮೆರಾ ಬಳಸುವ ಅವಶ್ಯಕತೆ ಇರುವುದರಿಂದ ಆಂಟಿ ಡ್ರೋನ್ ವ್ಯವಸ್ಥೆ ಅಳವಡಿಸುವ ಅವಶ್ಯಕತೆ ಇದೆ.
ಮುಂದುವರಿದು… ವಿಧಾನಸೌಧ ಕಟ್ಟಡವು ಪಾರಂಪರಿಕ ಕಟ್ಟಡವಾಗುವುದರಿಂದ ಮತ್ತು Vital Installation ಕಟ್ಟಡದ ವ್ಯಾಪ್ತಿಗೆ ಒಳಪಡುವುದರಿಂದ, ಭದ್ರತೆಯ ದೃಷ್ಟಿಯಿಂದ ಕಟ್ಟಡಕ್ಕೆ ಯಾವುದೇ ಧಕ್ಕೆಯಾಗದಂತೆ, ನಿಯಮಗಳನುಸಾರ ಕಾರ್ಯಕ್ರಮ ನಡೆಸಲು ಸಮಯದ ಅವಶ್ಯಕತೆ ಇರುತ್ತದೆ. ಅದಾಗ್ಯೂ ಸರ್ಕಾರ ತೆಗೆದುಕೊಳ್ಳುವ ನಿರ್ಣಯದಂತೆ ನಡೆದುಕೊಳ್ಳಲಾಗುವುದು ಎಂಬ ಅಭಿಪ್ರಾಯವನ್ನು ವರದಿಯನ್ನು ಸಲ್ಲಿಸಲಾಗಿದೆ ಎಂದು ಡಿಸಿಪಿ ಕರಿಬಸವನಗೌಡ ಅವರು ಸರ್ಕಾರದ ಕಾರ್ಯದರ್ಶಿಗಳಿಗೆ ಪತ್ರದಲ್ಲಿ ಬರೆದಿದ್ದಾರೆ.