ಮೈಸೂರು: ರಾಮನಗರದಲ್ಲಿ ಕಾರ್ಯಕ್ರಮದಲ್ಲಿ ನಡೆದ ಜಟಾಪಟಿಯಲ್ಲಿ ಕಾಂಗ್ರೆಸ್ ಹಾಗೂ ಸಂಸದ ಡಿ.ಕೆ.ಸುರೇಶ್ ತೋರಿರುವ ವರ್ತನೆ ಸರಿಯಿಲ್ಲ, ಇದು ರೌಡಿಸಂ ವರ್ತನೆ ಮಾಡಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಅಶ್ವಥ್ ನಾರಾಯಣ್ ಭಾಷಣ ಮಾಡುತ್ತಿದ್ದಾಗ ಮೈಕ್ ಕಿತ್ತುಕೊಂಡ ಸಂಸದ ಡಿ.ಕೆ.ಸುರೇಶ್ ರೌಡಿಸಂ ವರ್ತನೆಯನ್ನು ತೋರಿದ್ದಾರೆ. ಮುಖ್ಯಮಂತ್ರಿಗಳು ತಾಳ್ಮೆಯಿಂದ ಎಲ್ಲವನ್ನು ಕೇಳುತ್ತಿದ್ದರು. ಆ ಸಮಯದಲ್ಲಿ ಗಲಾಟೆ ಮಾಡಿರುವುದು ತಪ್ಪು. ಸಮಸ್ಯೆಯನ್ನು ತಿಳಿಸದೇ ಮುಖ್ಯಮಂತ್ರಿಗಳ ವಿರುದ್ಧ ಸುಮ್ಮನೆ ಘೋಷಣೆ ಕೂಗಿದ್ದಾರೆ. ಇದರಿಂದಾಗಿ ಅಶ್ವಥ್ ನಾರಾಯಣ್ ಅವರು ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎಂದು ಹೇಳಿದ ಅವರು, ಸಚಿವ ಅಶ್ವಥ್ ನಾರಾಯಣ್ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಪಾದಯಾತ್ರೆ ನಿಲ್ಲಿಸಲು ಷಡ್ಯಂತ್ರದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಪಾದಯಾತ್ರೆಯನ್ನು ಕೋವಿಡ್ ಕಾರಣಕ್ಕೆ ನಿಲ್ಲಿಸಿ ಎಂದು ಕಾಂಗ್ರೆಸ್ ಅವರಿಗೆ ಮನವಿ ಮಾಡಿಕೊಂಡಿದ್ದೇವೆ. ಇದೊಂದು ಚುನಾವಣಾ ಗಿಮಿಕ್ನ ಪಾದಯಾತ್ರೆಯಾಗಿದೆ. ಯೋಜನೆ ಎಲ್ಲವೂ ಅಂತಿಮವಾಗಿದೆ ಎಂದು ತಿಳಿದು ಪಾದಯಾತ್ರೆ ರೂಪಿಸಿದ್ದಾರೆ. ಇವರು ಅಧಿಕಾರದಲ್ಲಿದ್ದಾಗ ಯೋಜನೆ ಬಗ್ಗೆ ಏನು ಮಾಡಿಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ಆದಿ ಚುಂಚನಗಿರಿ ಕ್ಷೇತ್ರದಲ್ಲಿ ಜ.4-5ರಂದು ರಾಜ್ಯ ಮಟ್ಟದ ಯುವಜನೋತ್ಸವ: ನಾರಾಯಣಗೌಡ
ಕಠಿಣ ನಿಯಮಗಳು ಕಾಂಗ್ರೆಸ್ ಪಾದಯಾತ್ರೆಗಾಗಿ ಅಲ್ಲ. ಬದಲಾಗಿ ಜನರ ಜೀವ ರಕ್ಷಣೆಗಾಗಿ ಜಾರಿಗೊಳಿಸಲಾಗಿದೆ. ದಿನೇ ದಿನೇ ಓಮ್ರಿಕಾನ್ ಹಾಗೂ ಕೋವಿಡ್ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ಬೆಂಗಳೂರು ರೆಡ್ ಜೋನ್ ಆಗಿದೆ. ಅಷ್ಟೇ ಅಲ್ಲದೇ ಬೇರೆ ಬೇರೆ ಜಿಲ್ಲೆಯ ಪರಿಸ್ಥಿತಿ ಬಿಗಾಡಿಯಿಸುತ್ತಿದೆ. ಆದ್ದರಿಂದ ತಜ್ಞರ ಸಲಹೆಯಂತೆ ಕಠಿಣ ಕ್ರಮ ಕೈಗೊಳ್ಳುವ ಅವಶ್ಯಕತೆ ಉಂಟಾಗಿದೆ ಎಂದ ಅವರು, ರಾಜ್ಯದಲ್ಲಿ ಲಾಕ್ಡೌನ್ ಮಾಡುವ ಪರಿಸ್ಥಿತಿ ಇನ್ನು ಬಂದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಒಂದೇ ದಿನದಲ್ಲಿ 100 ವೈದ್ಯರಿಗೆ ಕೋವಿಡ್ ಪಾಸಿಟಿವ್!